‘ಕರ್ನಾಟಕದ ಪಾಲಿಟಿಕ್ಸ್ ಉದ್ಧಾರಾಗಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದ್ರೆ ಯಾಂತ್ರಿಕ ಬುದ್ಧಿಮತ್ತೆ ಯಾಂಬು ಬಳಕೆಯಾದ್ರೆ ಒಳ್ಳೇದೇನೋ?’ ಅಂತ ನನ್ನ ಐಡಿಯಾ ಹಂಚಿಕೊಂಡೆ.
‘ಪಾಲಿಟಿಕ್ಸಲ್ಲಿ ಈಗಾಗಲೇ ಚಾಟ್ ಜಿಪಿಟಿ ಅದಲ್ಲೋ?’ ತುರೇಮಣೆ ತಮ್ಮ ಸಂಶೋಧನೆ ತೆರೆದರು.
‘ಅದೆಂಗೆ ಸಾ?’ ಪ್ರಶ್ನಿಸಿದೆ.
‘ಧರಣಿ ಮಾಡಕ್ಕೋಗದು, ಪೆನ್ಡ್ರೈವ್ ತೋರಿಸದು, ವರ್ಗಾವಣೆ ದಂಧೆ ಅಂತ ಬಾಯಿ ಬಡಕಂದು ಸುಸ್ತಾಗಿ ಆಸ್ಪತ್ರೆ ಸೇರಿಕಳದು, ಚಾಟ್ ಅಂದ್ರೆ ಹರಟೆ ಅಲ್ಲುವಲಾ? ಇದುನ್ನೇ ಚಾಟ್ ಜಿಪಿಟಿ ಅಂದ್ರೆ ಗ್ರೀಡೀ ಪೊಲಿಟೀಶಿಯನ್ಸ್ ಟೆಕ್ನಿಕ್ ಅನ್ನದು!’ ತುರೇಮಣೆ ವಿವರಿಸಿದರು.
‘ಯಾಂಬು ಸಿಎಂ ಆದ್ರೆ ಏನಾದ್ರೂ ಬದಲಾವಣೆ ಆದದೇ?’ ಅಂತ ವಿಚಾರಿಸಿದೆ.
‘ಅಲ್ಲ ಕಲಾ, ‘ಕಾಲು ಕಟ್ಟಿಕ್ಯಂಡು ನಡೆಯುತ್ತಿರುವ ನಮ್ಮ ಸರ್ಕಾರ’ ಯಾವಾಗ ಸ್ವಯ ತಪ್ಪಿ ಬೀಳ್ತದೋ ಗೊತಾಯ್ತಿಲ್ಲ. ಇದುನ್ನೇ ಕಾಯ್ತಿರೋ ಸ್ವವಿರೋಧ ಪಕ್ಷದವು ‘ಮೇರಾ ಲಾಠಿ, ಮೇರಾ ವೇಷ್. ಬನ್ನಿ ಬುಳ್ಡೆಗೆ ಬಿಸಿನೀರು ಕಾಯಿಸ್ತೀವಿ ಅಂತ ದೊಣ್ಣೆ ಹಿಡಕ ನಿಂತವೆ. ‘ನಾನು ಇನ್ನೆಷ್ಟು ದಿನ ಬದುಕಿರತೀನೋ ಗೊತ್ತಿಲ್ಲ’ ಅಂತ ಕಣ್ಣಗೆ ನೀರಾಕ್ಕ್ಯಂಡಿದ್ದ ಕುಮಾರಣ್ಣ ಈಗ ಪೆನ್ಡ್ರೈವ್ ಹಿಡಕಂದು ‘ನೋಟು ನೋಟು, ನೋಟು...’ ಅಂತ ಹುಲಿವೇಷ ಹಾಕ್ತಾವನೆ. ಈ ರಾಜಕಾರಣ ಯಾಂಬುಗೆ ಅರ್ಥಾದದಾ?’ ತುರೇಮಣೆ ಕೇಳಿದರು.
‘ಮತ್ತೆಂಗೆ?’ ಅಂತ ಕೇಳಿದೆ.
‘ನೇಮಕಾತಿ, ಪರ್ಸೆಂಟೇಜು, ವರ್ಗಾವಣೆ ಸೂತ್ರದ ಲೆಕ್ಕ, ಬಿಬಿಎಂಪಿ ರೆಕಾರ್ಡ್ ರೂಮಿಗೆ ಬೆಂಕಿ ಬಿದ್ದ ರಹಸ್ಯ, ಹೂಳಲ್ಲಿ ಕಾಸೆತ್ತೋ ಟೆಕ್ನಿಕ್ಕು, ಬಿಟ್ಕಾಯಿನ್ ಬಿಟ್ಟೋರ ಹೆಸರು ಯಾಂಬುಗೆ ಗೊತ್ತಾಯ್ತದಾ?’ ಅಂತ ಕೇಳಿದರು.
‘ಹ್ಞೂಂಕನೇಳಿ ಸಾ, ರಾಜಕೀಯ ಶುದ್ಧಿ ಮಾಡಕ್ಕೆ ಏನು ದಾರಿ?’ ಅಂತಂದೆ.
‘ಯಾಂಬುವಿಗೆ ಜೇಮ್ಸ್ ಬಾಂಡಿನ ಥರಾ ಲೈಸೆನ್ಸ್ ಟು ಕಿಲ್ ಆಡ್ರು ಕೊಟ್ಟು ರಾಜಕೀಯದ ಪಡಸಾಲೆಗೆ ಬುಡಬೇಕು. ಅಷ್ಟೀಯೆ!’ ಅಂತ ತಮ್ಮ ಕ್ರಾಂತಿಕಾರಕ ವಿಚಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.