ಲಾಕ್ಡೌನ್ ತೆರವುಗೊಂಡ ಸಂತೋಷಾರ್ಥ ಬಾರ್ನಲ್ಲಿ ಪಾರ್ಟಿ ರಂಗೇರುತ್ತಿತ್ತು. ಚಿಕ್ಕೇಶಿ ಚೆಡ್ಡಿ ದೋಸ್ತ್ನನ್ನು ಕೇಳಿದ- ‘ಮೇಲಕ್ಕೆ ಜಾಯ್ರೈಡ್ ಹೋಗಿ ಬರೋಣ್ವೇನಯ್ಯಾ?’
‘ಮೇಲಕ್ಕೆ ಹೋದ್ಮೇಲೆ ವಾಪಸ್ ಬರೋದೆಲ್ಲಿದೆ?’ ಎಂದ ದೋಸ್ತ್.
‘ಮೇಲಕ್ಕೆ ಅಂದ್ರೆ ಸೀದಾ ಮೇಲಕ್ಕೆ ಅಲ್ವೋ ಮಂಕುದಿಣ್ಣೆ, ಅಂತರಿಕ್ಷ ಪ್ರವಾಸ ಹೋಗಿ ಬರೋದು. ಕಳೆದ ವಾರ ರಿಚರ್ಡ್ ಬ್ರಾನ್ಸನ್ ಹೋಗಿ ಬಂದ್ರಲ್ಲಾ ಹಾಗೆ’.
‘ಬೇಡಪ್ಪಾ, ನಂಗೆ ಭಯವಾಗುತ್ತೆ’.
‘ಏ ಪುಕ್ಕಲಾ, ಬ್ರಾನ್ಸನ್ನ ಜೊತೆ ಭಾರತ ಮೂಲದ ಮಹಿಳೆ ಶಿರೀಷಾ ಬಂಡ್ಲ ಕೂಡಾ ಹಾರಾಡಿ ಬಂದ್ರಲ್ಲೋ. ಮೊನ್ನೆ ಜೆಫ್ ಬಿಜೋಸ್ ಸಹ ಹೋಗಿ ಬಂದಿದಾರೆ. ಅವ್ರ ಪ್ರಾಜೆಕ್ಟ್ನಲ್ಲಿ ಮಹಾರಾಷ್ಟ್ರ ಮೂಲದ ಮಹಿಳೆಯೂ ಇದಾರೆ. ಇನ್ನು ನಿಂಗ್ಯಾಕೋ ಭಯ?’
‘ಆಗ್ಲಿ, ಹೋಗಿ ಬರೋಣ ಅಲ್ಲಿ ಅರ್ಜೆಂಟ್ ಕೆಲ್ಸಗಳೂ ಇವೆ’.
‘ಏನಪ್ಪಾ ಅಂಥ ಅರ್ಜೆಂಟ್ ಕೆಲ್ಸಗಳು?’
‘ಈ ಕೊರೊನಾ ವೈರಾಣು ರೂಪಾಂತರಿ ತಳಿಗಳ ಮೂಲ ಅಲ್ಲೇನಾದ್ರೂ ಇದೆಯಾಂತ ತಿಳ್ಕೊಳ್ಳೋದು, ಡೀಸೆಲ್, ಪೆಟ್ರೋಲ್, ಅಡುಗೆ ಸಿಲಿಂಡರ್ಗಳ ಗಗನಕ್ಕೇರ್ತಾನೇ ಇರೋ ಬೆಲೆಗಳು ಮೇಲಕ್ಕೇರದಂತೆ ಸೀಲಿಂಗ್ ಹಾಕಿ ಬರೋದು’.
‘ಗುಂಡು ಹಾಕಿದಾಗ್ಲೂ ಸಮಾಜೋಪಕಾರಿ ಚಿಂತನೆ ಮಾಡ್ತಿರೋ ದೇಶಭಕ್ತ ಕಣಯ್ಯ ನೀನು. ಗೂಗಲ್ ಪೇನಲ್ಲಿ ಸೀಟ್ ಬುಕ್ ಮಾಡ್ತೀನಿ ಕೊಡು ನಿನ್ನ ಮೊಬೈಲನ್ನ’.
‘ನನ್ನಲ್ಲಿ ಐನೂರು ರೂಪಾಯಿ ಮಾತ್ರ ಇದೆ, ನಿನ್ನ ಮೊಬೈಲಲ್ಲೇ ಮಾಡಪ್ಪಾ’.
‘ನನ್ನಲ್ಲಿರೋದೂ ಅಷ್ಟೇ. ಎರಡೂ ಸೇರಿದ್ರೂ ಈ ಬೈಠಕ್ನ ಬಿಲ್ ಕೊಡೋಕೂ ಸಾಲಲ್ಲ. ಲಕ್ಷಾಂತರ ಡಾಲರ್ಗೆ ಬಾಹ್ಯಾಕಾಶ ಪ್ರವಾಸದ ಟಿಕೆಟ್ ರಿಸರ್ವ್ ಮಾಡಿಸೋದೆಲ್ಲಿ ಬಂತು!’
‘ಹಾಗಾದ್ರೆ ಉದ್ರೆ ಹೇಳಿ ಇನ್ನೊಂದು ಪೆಗ್ ಏರಿಸೋಣ. ಆಗ ಈ ಬಾರೇ ಗಗನನೌಕೆ
ಆಗುತ್ತೆ...!’
‘...ಕಣ್ಮುಚ್ಚಿದ್ರೆ ಶೂನ್ಯ ಗುರುತ್ವದಲ್ಲಿ ತೇಲಾಡ್ತೀವಿ!’
ಇಬ್ಬರೂ ವಿಕ್ಟರಿ ಸನ್ನೆ ತೋರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.