ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಚರ್ಚೆ: ಮೀಸಲಾತಿ ಭಿನ್ನ ನೋಟಗಳು

Last Updated 23 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದೆಡೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಈ ಮೀಸಲಾತಿಯು ಸಂವಿಧಾನದ ಮೂಲ ಆಶಯಕ್ಕೆ ಬದ್ಧವಾಗಿದೆ ಮತ್ತು ಇಂತಹ ಮೀಸಲಾತಿಯ ಅವಶ್ಯಕತೆ ಇತ್ತು ಎಂಬ ಪ್ರತಿಪಾದನೆ ಇದೆ. ಇಡಬ್ಲ್ಯುಎಸ್‌ ಮೀಸಲಾತಿಯ ಸಿಂಧುತ್ವದ ಚರ್ಚೆಯಲ್ಲಿ ಮೀಸಲಾತಿಯ ಅನುಕೂಲಗಳು, ಅನುಷ್ಠಾನದಲ್ಲಿನ ತೊಡಕುಗಳು ಮತ್ತು ಒಳಮೀಸಲಾತಿಯ ಬಗ್ಗೆಯೂ ಚರ್ಚೆ ನಡೆದಿದೆ. ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆಯೇ ಕಡಿಮೆಯಾಗುತ್ತಿರುವಾಗ, ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಪ್ರಸ್ತುತತೆಯನ್ನೂ ಪ್ರಶ್ನಿಸಲಾಗಿದೆ

––––––––––

‘ಉದ್ಯೋಗ ಕ್ಷೇತ್ರವೇ ನಾಶವಾಗುತ್ತಿರುವಾಗ...’

ಮೀಸಲಾತಿ ಎಂಬಸಂವಿಧಾನದತ್ತವಾದ ಒಂದು ಅವಕಾಶವು, ಒಂದು ಪ್ರಮಾಣದಲ್ಲಿ ತತ್ಸಂಬಂಧಿಸಿದವ್ಯಕ್ತಿಗಳ ಬದುಕಿಗೆ ಬೆನ್ನೆಲುಬಾಗಿ ನಿಂತಿದೆ. ಆದರೆ ಆ ಸಂಖ್ಯೆ ಬಹು ಕಡಿಮೆ. ಇದರಿಂದ ವಂಚಿತರಾದಜನಸಮೂಹದ ಪ್ರಮಾಣವೇ ಹೆಚ್ಚು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಮತ್ತು ಈಗ್ಗೆ ಕೆಲವಾರು ವರ್ಷಗಳ ಹಿಂದೆಭರಮಸಾಗರದ ಶಾಸಕರಾಗಿದ್ದ ಬಿ.ಎಂ.ತಿಪ್ಪೇಸ್ವಾಮಿಯವರು, ‘ಒಮ್ಮೆ ಮೀಸಲಾತಿಯಲಾಭ ಪಡೆದವರನ್ನು ಆ ವ್ಯಾಪ್ತಿಯಿಂದ ಹೊರಗಿಡಬೇಕು. ಬೇರೆಫಲಾನುಭವಿಗಳಿಗೆ ಅವಕಾಶವನ್ನು ನೀಡಬೇಕು’ ಎಂದು ಹೇಳಿದ್ದರು. ಆಗ ಹೆಚ್ಚೆಚ್ಚು ಜನರನ್ನು ಮೀಸಲಾತಿಯ ಪರಿಧಿಯೊಳಗೆ ತರಬಹುದೆಂದು ಅವರು ಆಶಿಸಿದ್ದರು. ಅದೊಂದು ಸರಿಯಾದ ಕ್ರಮವೇ ಆಗಿತ್ತು. ಆದರೆ, ಅವರ ನಿಲುವಿಗೆಸಂಬಂಧಿತ ಸಮುದಾಯಗಳ ಶಾಸಕರ ಬೆಂಬಲ ದೊರೆಯಲಿಲ್ಲ. ಅದು ಅಲ್ಲಿಗೇನಿಂತುಹೋಯಿತು. ಅದು ಅಂದಿನ ಸಂಗತಿ.

ಈಗ ನಮ್ಮ ದೇಶದ ವಸ್ತುಸ್ಥಿತಿ ಬಹಳಷ್ಟು ಭಿನ್ನವಾಗಿದೆ. ಈ ಭಿನ್ನವಾದ ಪರಿಸ್ಥಿಯನ್ನು ಸಿದ್ದನಗೌಡ ಪಾಟೀಲರು ತಮ್ಮ ಲೇಖನದಲ್ಲಿ ಸರಿಯಾಗಿ ವಿಶ್ಲೇಷಿಸಿದ್ದಾರೆ. ದೇಶ ಈಗ ಪರೋಕ್ಷವಾಗಿ ಸಾರ್ವಜನಿಕ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಾಖಾಸಗೀಕರಣದತ್ತ ದಾಪುಗಾಲು ಹಾಕುತ್ತಿದೆ. ಸರ್ಕಾರ, ಕೈಗಾರಿಕೆ,ಸೇವಾಕ್ಷೇತ್ರಗಳೆಲ್ಲಾ ಖಾಸಗಿ ವ್ಯಕ್ತಿಗಳ ತೆಕ್ಕೆಯಲ್ಲಿಸಿಕ್ಕಿಹಾಕಿಕೊಳ್ಳತ್ತಾ, ಹೊರಗುತ್ತಿಗೆಯ ಆಡುಂಬೊಲವಾಗುತ್ತಿದೆ. ಪರಿಣಾಮ,ಸಾಹುಕಾರಿಕೆ ಮೆರೆಯುತ್ತಿದೆ. ಈ ರೀತಿಯ ವ್ಯವಸ್ಥೆಗೆ ನಾಂದಿಹಾಡಿದ್ದು 1991-92ರ ಸಾಲಿನಲ್ಲಿ, ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿಹಿಡಿದಿದ್ದಾಗಲೇ. ಅದನ್ನು ನಮ್ಮ ಪ್ರಧಾನಿಗಳಾದ ನರೇಂದ್ರಮೋದಿಯವರ ನೇತೃತ್ವದ ಸರ್ಕಾರ ಯಶಸ್ವಿಯಾಗಿ ಮುಂದುವರೆಸುತ್ತಿದೆ.ಸಿದ್ದನಗೌಡರ ಲೇಖನದ ಪ್ರಕಾರ ಸದ್ಯ ನಮ್ಮ ರಾಜ್ಯದಲ್ಲಿ 2,69,572 ಸರ್ಕಾರಿ ಉದ್ಯೋಗಿಗಳು ಖಾಲಿ ಬಿದ್ದಿವೆ.ಒಟ್ಟು ಉದ್ಯೋಗಿಗಳ ಸಂಖ್ಯೆ 7,79,439. ಸದ್ಯ ಸರ್ಕಾರ ಖಾಲಿ ಬಿದ್ದಿರುವಹುದ್ದೆಗಳನ್ನು ತುಂಬಿಸುವುದಿರಲಿ, ಉಳಿದ ಹುದ್ದೆಗಳನ್ನೂ ಖಾಸಗಿಯವರಿಗೆ ನೀಡುವುದರಲ್ಲಿ ಅನುಮಾನವಿಲ್ಲ.ದೇಶದ ಪರಿಸ್ಥಿತಿಯೂ ಹೀಗೇ ಇದೆ.

ಇಂತಹ ಪ್ರಕ್ಷುಬ್ಧ ಅಥವಾ ವಿಚಿತ್ರ ಅಥವಾ ವಿಷಮ ಪರಿಸ್ಥಿತಿಯಲ್ಲಿನಮ್ಮಲ್ಲಿನ ಕೆಲವು ಸಮುದಾಯಗಳು ತಮ್ಮ ಮಠಾಧಿಪತಿಗಳನೇತೃತ್ವದಲ್ಲೋ ಅಥವಾ ಸಮುದಾಯದ ಮುಖಂಡರ ನೇತೃತ್ವದಲ್ಲೋತರಾವರಿ ಕಾರಣಗಳನ್ನು ಮುಂದುಮಾಡಿಕೊಂಡು ಮೀಸಲಾತಿಗಾಗಿಹೋರಾಟಗಳನ್ನು ನಡೆಸುತ್ತಿವೆ.ಹಾಗೆ ಮಾಡುತ್ತಿರುವವರಿಗೆ ನಮ್ಮ ದೇಶದನೈಜ ಚಿತ್ರಣವಿದೆಯೋ ಇಲ್ಲವೋ ತಿಳಿಯದು. ಖಾಸಗೀಕರಣದಿಂದ ಸರ್ಕಾರಿಉದ್ಯೋಗಗಳೇ ನಾಪತ್ತೆಯಾಗುತ್ತಿರುವಾಗ, ಇವರೇನು ಉದ್ಯೋಗರಹಿತ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆಯೋ ಹೇಗೆ ಎಂಬ ಅನುಮಾನ ಬರುತ್ತಿದೆ.ಸಿದ್ದನಗೌಡರು ಹೇಳಿರುವ ಹಾಗೆ ಉದ್ಯೋಗ ಕ್ಷೇತ್ರವೇ ನಾಶವಾಗುತ್ತಿರುವಾಗಮೀಸಲಾತಿಗಾಗಿ ನಡೆಸುತ್ತಿರುವ ಪೈಪೋಟಿ ಅರ್ಥಹೀನ ಎಂಬುದು ಇಂದಿನ ವಾಸ್ತವ.

-ಹೊರೆಯಾಲ ದೊರೆಸ್ವಾಮಿ,ಲೇಖಕ ಮತ್ತು ದಲಿತ ಚಿಂತಕ

****

‘ಇಡಬ್ಲ್ಯುಎಸ್‌ ಸಂವಿಧಾನದ ಆಶಯಕ್ಕೆ ಬದ್ಧವಾಗಿದೆ’

ಇಡಬ್ಲ್ಯುಎಸ್ ಮೀಸಲಾತಿಯನ್ನು ದೇಶದಲ್ಲಿ ಇದುವರಿಗೆ ಜಾರಿಯಲ್ಲಿರುವ ಎಲ್ಲಾ ಮೀಸಲಾತಿಗಳಿಂದ ವಂಚಿತರಾದ ‘ಮುಂದುವರೆದ’ ಸುಮಾರು 144 ಜಾತಿಗಳಿಗೆ ಸೇರಿದ ಆದರೆ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ಸಾಮಾಜಿಕ ನ್ಯಾಯವೊದಗಿಸಲು ಜಾರಿಗೆ ತರಲಾಗಿದೆ. ಈ ಆರ್ಥಿಕ ದುರ್ಬಲ ಸ್ಥಿತಿಯಾಧಾರಿತ ಮೀಸಲಾತಿಯನ್ನು ನಮ್ಮ ಸಂವಿಧಾನದ ಪ್ರಸ್ತಾವನೆಯ ಹಾಗೂ ರಾಜ್ಯನೀತಿ ನಿರ್ದೇಶಕ ತತ್ವಗಳ 46ನೇ ವಿಧಿಯ ಆಶಯದಂತೆ ಜಾರಿಗೊಳಿಸಲಾಗಿದೆ. ಆಥಿ೯ಕ ದುರ್ಬಲತೆಯೂ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದಳಿಯುವಿಕೆಯ ಹಾಗೆ ಜನರನ್ನು ಸಾಮಾಜಿಕ ನ್ಯಾಯದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂಬುದನ್ನು ನಮ್ಮ ಸಂಸತ್ತು ಮನಗಂಡಿದೆ.

1980ರ ದಶಕದಲ್ಲಿ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಮುಂದುವರೆದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿ ಜಾರಿಮಾಡಲಾಗಿತ್ತು. ಆದರೆ, ಸಂವಿಧಾನಕ್ಕೆ ತಿದ್ದುಪಡಿ ಮಾಡದೇ ಈ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಇದನ್ನು ರದ್ದು ಮಾಡಿತ್ತು. ನಂತರ ಯುಪಿಎ ಸರ್ಕಾರ ನೇಮಿಸಿದ ಸಿನ್ಹೊಆಯೋಗವು, ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲರಾದವರ ಸಂಖ್ಯೆ ದೇಶದಲ್ಲಿ ಬಡತನರೇಖೆಗಿಂತ ಕೆಳಗಿರುವ ಒಟ್ಟು ಜನಸಂಖ್ಯೆಯ ಶೇ19.5ರಷ್ಟು ಇರುವುದನ್ನು ಗುರುತಿಸಿತ್ತು. ಇವರಿಗೆ ಶೇ15ರಷ್ಟು ಮೀಸಲಾತಿ ನೀಡಬಹುದೆಂದು 2004-05 ರಲ್ಲಿ ವರದಿ ನೀಡಿತ್ತು. ತದನಂತರ ನಮ್ಮ ಸಂವಿಧಾನಕ್ಕೆ 12-01-2019 ರಂದು ಸಂಸತ್ತು 103ನೇ ತಿದ್ದುಪಡಿ ತಂದಿದೆ. ಸಂಸತ್ತಿನಲ್ಲಿ ಡಿಎಂಕೆ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳೂ ಇದಕ್ಕೆ ಬೆಂಬಲ ನೀಡಿವೆ.

ನವೆಂಬರ್ 7 ರಂದು ಸುಪ್ರೀಂ ಕೋರ್ಟ್‌ ತನ್ನ 399 ಪುಟಗಳ ಬಹುಮತದ ತೀರ್ಪಿನಲ್ಲಿ, ಈ ಮೀಸಲಾತಿಯ ಸಿಂಧುತ್ವವನ್ನು ಎತ್ತಿಹಿಡಿದಿದೆ. ಸಂಸತ್ತಿನಲ್ಲಿ ಈ ತಿದ್ದುಪಡಿಯನ್ನು ಕಾಂಗ್ರೆಸ್‌ ಬೆಂಬಲಿಸಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪಿನ ಮರುಪರಿಶೀಲನೆಗೆ ಕಾಂಗ್ರೆಸ್‌ ಮತ್ತು ಡಿಎಂಕೆ ಅರ್ಜಿ ಸಲ್ಲಿಸಿವೆ.ಇದು ಸಂವಿಧಾನ ವಿರೋಧಿ ಮತ್ತು ನ್ಯಾಯಾಂಗ ವಿರೋಧಿ ನಡೆಯಲ್ಲವೇ?

ಕರ್ನಾಟಕದಲ್ಲಿ ಕೇವಲ ಶೇ3ರಷ್ಟಿರುವ ಬ್ರಾಹ್ಮಣರು, ಶೇ 1.5ರಷ್ಟಿರುವ ಆರ್ಯವೈಶ್ಯರು ಮತ್ತು ಜೈನರು ಹಾಗೂ ಗುಜರಾತಿನಲ್ಲಿ ಶೇ 14.5ರಷ್ಟಿರುವ ಪಾಟೀದಾರರಂತಹ ಕೆಲವೇ ಜಾತಿಗಳ ಪ್ರಯೋಜನಕ್ಕಾಗಿ ಈ ಮೀಸಲಾತಿ ತರಲಾಗಿದೆ ಎಂದು ಕೆಲವು ಸಂವಿಧಾನ ಪಂಡಿತರು ಹೇಳುತ್ತಿದ್ದಾರೆ. ಆದರೆ ಕೆಲವೇ ಜಾತಿಗಳ ಅನುಕೂಲಕ್ಕಾಗಿ ಈ ಮೀಸಲಾತಿಯನ್ನು ತರಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೀಸಲಾತಿ ಎಂಬ ಸಕಾರಾತ್ಮಕ ತಾರತಮ್ಯದ ಪ್ರಕ್ರಿಯೆಯಿಂದ 144 ಜಾತಿಗಳ ಕಡುಬಡವರನ್ನು ಹೊರಗಿಡಲಾಗಿತ್ತು. ಅಂತಹವರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುವುದನ್ನು ತಡೆಯಲು ಈ ಮೀಸಲಾತಿ ತರಲಾಗಿದೆ.

ಆದರೆ ಯಾರೂ ಇದನ್ನು ಪ್ರಶ್ನಿಸುತ್ತಿಲ್ಲ. ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಮತಲಾಭಕ್ಕಾಗಿ ರಾಜ್ಯ ಸರ್ಕಾರವು, ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯದ ಕೆಲವು ಬಲಾಢ್ಯ ಸಮುದಾಯಗಳು ತಮ್ಮನ್ನು ಎಸ್‌ಸಿ ಅಥವಾ ಎಸ್‌ಟಿ ಅಥವಾ ಪ್ರವರ್ಗ2ಎಗೆ ಸೇರಿಸಿ ಎಂದು ಹೋರಾಡುತ್ತಿವೆ. ಇವುಗಳ ಮಧ್ಯೆ, ಕೇಂದ್ರ ಮತ್ತು 12 ರಾಜ್ಯಗಳು ಜಾರಿಗೆ ತಂದಿರುವ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಕರ್ನಾಟಕ ಸರ್ಕಾರ ತಡೆಹಿಡಿದಿದೆ.ಸಂಖ್ಯೆಯಲ್ಲಿ ಹೆಚ್ಚಿಲ್ಲದ, ರಾಜ್ಯದಾದ್ಯಂತ ಚದುರಿರುವ, ಆದರೂ 21 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ಇವರ ನ್ಯಾಯಯುತವಾದ ಬೇಡಿಕೆಗೆ ಸಕಾ೯ರ ಹೇಗೆ ಪ್ರತಿಸ್ಪಂದಿಸುತ್ತದೆ ಎಂಬುದನ್ನು ಈ ವರ್ಗಗಳ ಮತದಾರರು ಕಾತರದಿಂದ ಎದುರುನೋಡುತ್ತಿದ್ದಾರೆ. ಅದಿಲ್ಲವಾದರೆ ತಾವೂ ಇತರರಂತೆ ಬೀದಿಗಿಳಿಯಲು ಸಿದ್ಧರಾಗುತ್ತಿರುವ ವಾಸ್ತವವನ್ನು ಸರ್ಕಾರ ಗಮನಿಸಬೇಕಾಗಿದೆ.

-ಸುಬ್ರಾಯ ಎಂ.ಹೆಗಡೆ ಗೌರೀಬಣ್ಣಿಗೆ,ನಿರ್ದೇಶಕ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ

****

ಗುಜರಾತಿನಲ್ಲಿ ಪಾಟಿದಾರ್ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ 2017ರಲ್ಲಿ ಹಾರ್ದಿಕ್ ಪಟೇಲ್‌ ನೇತೃತ್ವದಲ್ಲಿ ಭಾರಿ ಹೋರಾಟ ನಡೆಸಿದ್ದರು. ಈಗ ಇಡಬ್ಲ್ಯುಎಸ್‌ ಅಡಿಯಲ್ಲಿ ಈ ಸಮುದಾಯಕ್ಕೆ ಮೀಸಲಾತಿ ದೊರೆತಿದೆ
ಗುಜರಾತಿನಲ್ಲಿ ಪಾಟಿದಾರ್ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ 2017ರಲ್ಲಿ ಹಾರ್ದಿಕ್ ಪಟೇಲ್‌ ನೇತೃತ್ವದಲ್ಲಿ ಭಾರಿ ಹೋರಾಟ ನಡೆಸಿದ್ದರು. ಈಗ ಇಡಬ್ಲ್ಯುಎಸ್‌ ಅಡಿಯಲ್ಲಿ ಈ ಸಮುದಾಯಕ್ಕೆ ಮೀಸಲಾತಿ ದೊರೆತಿದೆ

‘ಅನಗತ್ಯ ಗೊಂದಲ’

ಇಡಬ್ಲ್ಯುಎಸ್ ಮೀಸಲಾತಿ ಬಗ್ಗೆ ಅನಗತ್ಯ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಶೇ 4ರಷ್ಟಿರುವ ಮೇಲುಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಏಕೆ? ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಆದರೆ ಅದು ಅಪ್ರಸ್ತುತ. ಈ ಮೀಸಲಾತಿ ಆದೇಶದಲ್ಲಿ ಎಲ್ಲಿಯೂ ಮೇಲುಜಾತಿ ಮತ್ತು ಕೆಳಜಾತಿ ಎಂದು ನಮೂದಿಸಿಲ್ಲ. ಇದುವರೆಗಿನ ಯಾವುದೇ ಮೀಸಲಾತಿ ವ್ಯಾಪ್ತಿಗೆ ಬರದಿರುವ ಆರ್ಥಿಕವಾಗಿ ದುರ್ಬಲರಾದವರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ರೈತಾಪಿ ಸಮುದಾಯವಾಗಿರುವ ಮರಾಠರಿಗೂ ಇಡಬ್ಲ್ಯುಎಸ್ ಮೀಸಲಾತಿ ಸೌಲಭ್ಯ ನೀಡಲಾಗಿದೆ.

ಆರ್ಥಿಕ ಸ್ಥಿತಿ ಆಧಾರಿತವಾದ ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಗುಂಪುಗಳನ್ನು ಹೊರಗೆ ಇರಿಸಿರುವುದು ತಾರತಮ್ಯ ಮಾಡಿದಂತಾಗಿದೆ ಎಂಬುದು ಇನ್ನೊಂದು ಆಕ್ಷೇಪ. ಈ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುವಿಕೆಯ ಆಧಾರದ ಮೇಲೆ ಈಗಾಗಲೇಮೀಸಲಾತಿ ಪಡೆಯುತ್ತಿರುವುದರಿಂದ ಮತ್ತೆ ಆರ್ಥಿಕ ಸ್ಥಿತಿ ಆಧಾರದ ಮೇಲೆಯೂ ಮೀಸಲಾತಿಯನ್ನು ನೀಡುವ ಅಗತ್ಯ ಉದ್ಭವಿಸುವುದಿಲ್ಲ.

ಸ್ವಾತಂತ್ರ್ಯದ ನಂತರ ಆಧುನಿಕತೆ ಮತ್ತು ಜಾಗತೀಕರಣ ಕಾರಣದಿಂದ ಅವಕಾಶಗಳು ಮತ್ತು ಸೌಲಭ್ಯಗಳು ಪ್ರವಾಹೋಪಾದಿಯಲ್ಲಿ ತೆರೆದುಕೊಂಡಿವೆ. ಒಂದು ಕಾಲದಲ್ಲಿ ದಲಿತರು ಮತ್ತು ಹಿಂದುಳಿದವರಾಗಿದ್ದವರು ಆರೇಳು ದಶಕಗಳಿಂದ ಮೀಸಲಾತಿಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಅದೇ ವೇಳೆ ‘ಮುಂದುವರಿದವರಲ್ಲಿ’ ಅವಕಾಶ ವಂಚಿತರು ಮತ್ತು ಬಡವರ ಸಂಖ್ಯೆ ಹೆಚ್ಚುತ್ತಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯಂತೆ ಬಡತನವೂ ಒಂದು ಶಾಪ. ಅವರೆಲ್ಲಾ ಸಾವಿರಾರು ವರ್ಷಗಳಿಂದ ಸೌಲಭ್ಯಗಳನ್ನು ಪಡೆದಿದ್ದಾರೆ ಎಂಬ ಅಭಿಪ್ರಾಯ ಸರಿಯಲ್ಲ. ಆಗ ನಮ್ಮ ದೇಶ ಪ್ರಾಚೀನ ಸ್ಥಿತಿಯಲ್ಲಿತ್ತು. ಸಾಕಷ್ಟು ಸೌಲಭ್ಯಗಳೇ ಸೃಷ್ಟಿಯಾಗಿರಲಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ‘ಮುಂದುವರಿದವರಲ್ಲಿನ’ ಬಡವರ ಸಂಖ್ಯೆಯೇ ಒಂದು ಸಾಮಾಜಿಕ ಸಮಸ್ಯೆಯಾಗಬಹುದು. ಹಿಂದೆ ಯಾವಾಗಲೋ ಆಗಿರಬಹುದಾದ ಐತಿಹಾಸಿಕ ಅನ್ಯಾಯಗಳಿಗೆ ಇಂದಿನ ಯುವಕರನ್ನು ಬಲಿಪಶುಗಳನ್ನಾಗಿ ಮಾಡುವುದು ಸರಿಯಲ್ಲ. ನಮ್ಮದು ಚಲನಶೀಲ ಸಮಾಜ. ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಸಂವಿಧಾನದಲ್ಲಿಯೂ ಸೂಕ್ತ ಬದಲಾವಣೆಗೆ ಅವಕಾಶ ಇದ್ದೇ ಇದೆ.

-ಲಂಭೋದರ ಎಲ್.ವಿ., ಸಾಗರ

****

‘ಬಲಾಢ್ಯರು ಮೀಸಲಾತಿ ಕೇಳುತ್ತಿರುವುದೇಕೆ?’

ಭಾರತ ದಾಸ್ಯದಿಂದ ಮುಕ್ತವಾದಾಗ, ಪ್ರತಿಯೊಂದು ವಿಷಯದಲ್ಲಿಯೂ ಕ್ಷೀಣವಾಗಿತ್ತು. ಆಗ, ಮುಖ್ಯವಾಗಿ ದೇಶ ಅಭಿವೃದ್ಧಿ ಹೊಂದಬೇಕು, ಜೊತೆಗೆ ಎಲ್ಲ ಕ್ಷೇತ್ರದ ಜನರೂ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಠವಾಗಬೇಕೆಂಬುದು ಬಯಕೆಯಾಗಿತ್ತು. ನಾನಾ ರೀತಿಯಲ್ಲಿ ಏರುಪೇರುಗಳಿಂದ ಬಳಲುತ್ತಿದ್ದ ಸಮಾಜದಲ್ಲಿ ಎಲ್ಲ ರೀತಿಯ ಸಮಾನತೆ, ಅವಕಾಶಗಳ ವಂಚಿತರ ಸಂವಿಧಾನಬದ್ಧ ಅಭ್ಯುದಯ ಮತ್ತು ದುರ್ಬಲ ವರ್ಗಗಳನ್ನು ಬಲಿಷ್ಠಗೊಳಿಸಿ ಸಮಾನತೆ ಸಾಧಿಸಬೇಕಿತ್ತು. ಇದಕ್ಕಾಗಿ ಮೀಸಲಾತಿಯನ್ನು ತರಲಾಯಿತು.

ಆದರೆ ಆಗುತ್ತಿರುವುದೇನು? ಬಲಿಷ್ಠರು, ಮೇಲ್ವರ್ಗದವರು ತಮ್ಮ ಸಂಖ್ಯಾಬಲದಿಂದ ಸಮಾಜದ ಅಭಿವೃದ್ಧಿಯ ಬಗ್ಗೆಯೇ ಹೋರಾಟಕ್ಕಿಳಿದಿರುವುದು ಅಮಾನವೀಯ. ಸಂವಿಧಾನ, ಸಂಸತ್ತು ನಿರ್ಣಯಿಸಿದ ಮೀಸಲಾತಿಯನ್ನು, ಮಠಾಧೀಶರ ಪ್ರಭಾವ ಬಳಸಿಕೊಂಡು ಹೆಚ್ಚಿಸಲು ರಸ್ತೆಗಿಳಿದಿರುವುದು, ವಂಚಿತ ಸಮುದಾಯಗಳ ಗಾಯದ ಮೇಲೆ ಬರೆ ಹಾಕಿದಂತಾಗುತ್ತಿದೆ. ಸಂವಿಧಾನದ ರೀತ್ಯಾ ಆಡಳಿತ ನಡೆಸುವೆನೆಂದು ಪ್ರಮಾಣವಚನ ಸ್ವೀಕರಿಸುವವರು, ಮಠಾಧೀಶರ ನಾಯಕತ್ವದಲ್ಲಿ ಸಂವಿಧಾನದ ವಿರುದ್ಧ ಕಹಳೆ ಊದುತ್ತಿರುವುದು ನಾಗರಿಕ ಸಂಪ್ರದಾಯವೇ? ಜಾತಿಯಲ್ಲಿಯೂ ಮುಂಚೂಣಿಯಲ್ಲಿರುವವರೇ ದಶಕಗಳಿಂದ ಮೇಲಿರುವುದೇಕೆ? ಆ ಜಾತಿಗಳಲ್ಲಿನ ಕೆಳ ಶ್ರೇಣಿಯಲ್ಲಿರುವರು ಮೇಲಕ್ಕೇರಲು ಅವಕಾಶ ಕೊಡುತ್ತಿಲ್ಲವೇಕೆ? ತಮ್ಮ ಸಮುದಾಯದಲ್ಲೇ ಉಳಿದವರಿಗೆ ಅವಕಾಶವನ್ನು ನಿರಾಕರಿಸುತ್ತಿರುವವರು, ಕೆಳವರ್ಗ ಮತ್ತು ವಂಚಿತ ವರ್ಗಗಳಿಗೆ ಅವಕಾಶ ಕೊಡುತ್ತಾರೆಯೇ? ಎಲ್ಲ ಸಮಾಜದ, ಎಲ್ಲ ಸ್ಥರದವರೂ ಅಭಿವೃದ್ಧಿ ಹೊಂದಿ, ನೂರಾರು ಉಪಜಾತಿಗಳ ಅಭಿಲಾಷೆಗಳನ್ನು ಈಡೇರಿಸುವ ಮಾನವೀಯತೆಯನ್ನು ಬೆಳಿಸಿಕೊಳ್ಳುವುದಿಲ್ಲವೇಕೆ?

-ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT