ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಹಸಿರು ಗುಡ್ಡದ ಉಸಿರು ನಿಲ್ಲದಿರಲಿ...

ಕಪ್ಪತಗುಡ್ಡ ಮತ್ತು ಇತರ ವನ್ಯಜೀವಿ ಧಾಮಗಳ ಪರಿಸರಸೂಕ್ಷ್ಮ ಪ್ರದೇಶಗಳ ವ್ಯಾಪ್ತಿ ಕುಗ್ಗಿಸುವ ನಿರ್ಧಾರ ಸರಿಯೇ?
Last Updated 2 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ ವಾಯು ಮತ್ತು ಜಲ ಮಾಲಿನ್ಯ ಉಂಟಾಗುತ್ತದೆ. ಮೊದಲೇ ದುರಸ್ತಿ ಕಾಣದ ರಸ್ತೆಗಳು ಮತ್ತಷ್ಟು ಹಾಳಾಗುತ್ತವೆ. ಗಣಿಗಾರಿಕೆಯಿಂದ ಭೂಕಂಪನ ಉಂಟಾಗಲಿದ್ದು ಇದರಿಂದ ಮಳೆಗಾಲದಲ್ಲಿ ಗುಡ್ಡಗಳು ಕುಸಿಯುವ ಸಂಭವ ಇದೆ. ನಾವು ಈ ಹಿಂದೆ ಕೊಡಗಿನಲ್ಲಿ ನೋಡಿದಂತಹ ಸಂಕಷ್ಟಗಳನ್ನು ಕಪ್ಪತಗುಡ್ಡ ಪ್ರದೇಶದಲ್ಲೂ ಕಾಣಬೇಕಾಗಿ ಬರಬಹುದು. ಗಣಿಗಾರಿಕೆಯಿಂದ ಜೀವ ಮತ್ತು ಸಸ್ಯವೈವಿಧ್ಯ ನಾಶವಾಗುತ್ತದೆ.

ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲ್ಲೂಕುಗಳಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಪ್ಪತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ ಅಷ್ಟೇ ಅಲ್ಲ; ಅದು ಈ ಭಾಗದ ಜನರ ಜೀವನಾಡಿ ಕೂಡ.

ಜಿಂಕೆ, ತೋಳ, ಕರಡಿ, ನರಿ, ಮೊಲ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳಿಗೆ ಆಶ್ರಯ ತಾಣವಾಗಿರುವ ಕಪ್ಪತಗಿರಿ, ಅಪರೂಪದ ವನಸ್ಪತಿ ಸಸ್ಯಗಳನ್ನೂ ಒಳಗೊಂಡಿರುವ ಪ್ರದೇಶ. ಹೀಗೆ ಸಾವಿರಾರು ಬಗೆಯ ಔಷಧೀಯ ಸಸ್ಯವೈವಿಧ್ಯ ಮತ್ತು ಜೀವವೈವಿಧ್ಯದಿಂದ ಕೂಡಿರುವ ಪ್ರದೇಶವನ್ನು ಪ್ರತಿಯೊಬ್ಬರೂ ಸೂಕ್ಷ್ಮ ಮನಸ್ಸು ಮತ್ತು ಕಣ್ಣಿನಿಂದಲೇ ನೋಡಬೇಕಿದೆ. ಏಕೆಂದರೆ, ಪ್ರಾಕೃತಿಕ ಸಮತೋಲನ ಮತ್ತು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕಪ್ಪತಗುಡ್ಡವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಬೇಕಿರುವುದು ತುಂಬ ಮುಖ್ಯ.

ಕಪ್ಪತಗುಡ್ಡ ಸುತ್ತಮುತ್ತಲಿನಲ್ಲಿ ವಾಸಿಸುವವರು, ಅದರಲ್ಲೂ ವಿಶೇಷವಾಗಿ ಲಂಬಾಣಿ ತಾಂಡಗಳಲ್ಲಿರುವ ಜನರು ಕಪ್ಪತಗುಡ್ಡದಲ್ಲಿ ಸಿಗುವ ಹಣ್ಣು, ಹಂಪಲು, ಜೇನು ಹಾಗೂ ಇನ್ನಿತರ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿ ಬದುಕು ಮುನ್ನಡೆಸುತ್ತಿದ್ದಾರೆ. ಈ ಗಿರಿಶ್ರೇಣಿಯ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕುಗ್ಗಿಸಿ, ಅಲ್ಲಿ ಉದ್ಯಮಗಳ ಸ್ಥಾಪನೆಗೋ ಗಣಿಗಾರಿಕೆಗೋ ಅವಕಾಶ ಮಾಡಿಕೊಟ್ಟರೆ ಅವರ ಜೀವನಕ್ಕೂ ತೊಂದರೆ ಆಗುತ್ತದೆ. ಜೀವವೈವಿಧ್ಯವೂ ಸಂಕಷ್ಟಕ್ಕೆ ಸಿಲುಕುತ್ತದೆ. ಜತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಪರಿಸರಕ್ಕೆ ಸರಿಪಡಿಸಲು ಆಗದಷ್ಟು ದೊಡ್ಡ ಹಾನಿಯಾಗುತ್ತದೆ.

ಸರ್ಕಾರವು ಕಪ್ಪತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ2019ರಲ್ಲಿ ಅಧಿಸೂಚನೆ ಹೊರಡಿಸಿತು. ಸರ್ಕಾರದ ಘೋಷಣೆ ಅನುಸಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವನ್ಯಜೀವಿಧಾಮದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ಇಲ್ಲ. ಆ ಆದೇಶದ ಪ್ರಕಾರ 10 ಕಿ.ಮೀ. ಒಳಗಿನ ಜಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದೇ ಅರ್ಥೈಸಲಾಗಿದೆ. ವಸ್ತುಸ್ಥಿತಿ ಹೀಗಿದ್ದರೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 1 ಕಿ.ಮೀ.ಗೆ ಮಿತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನದಿಂದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಂತೆ ಆಗುತ್ತದೆ. ಅಲ್ಲದೆ, ಪರಿಸರದ ಮೇಲಾಗುವ ಪರಿಣಾಮಗಳನ್ನೂ ಕಡೆಗಣಿಸಿದಂತೆ ಆಗುತ್ತದೆ.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ವನ್ಯಜೀವಿಧಾಮದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳಿರುವುದು ‘ಬೇಲಿಯೇ ಎದ್ದು ಹೊಲ ಮೇಯಿತು’ ಎಂಬ ಗಾದೆಮಾತನ್ನು ನೆನಪಿಸುತ್ತದೆ. ಯಾವುದೇ ಕಾರಣಕ್ಕೂ ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಅದು ಕಪ್ಪತಗುಡ್ಡ ಪರಿಸರದ ಎಲ್ಲ ಜನರ ಒಕ್ಕೊರಲ ಅಭಿಪ್ರಾಯವಾಗಿದೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಇದೇ 5ರಂದು ನಡೆಯಲಿರುವ ಸಭೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು 10 ಕಿ.ಮೀ.ಗೆ ನಿಗದಿಪಡಿಸುವ ಕುರಿತು ಮತ್ತು ಆ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎನ್ನುವ ಕುರಿತು ನಿರ್ಣಯ ಆಗಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಆಸಕ್ತಿವಹಿಸಿ ಬಂದಿರುವ ಪ್ರಸ್ತಾವಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಪರಿಸರದ ಹಿತಾಸಕ್ತಿ ಬಲಿಕೊಟ್ಟು ಅಭಿವೃದ್ಧಿ ಚಟುವಟಿಕೆ ನಡೆಸುವುದು ಯಾವುದೇ ಕಾರಣಕ್ಕೂ ಬೇಕಾಗಿಲ್ಲ.

ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ ವಾಯು ಮತ್ತು ಜಲ ಮಾಲಿನ್ಯ ಉಂಟಾಗುತ್ತದೆ. ಮೊದಲೇ ದುರಸ್ತಿ ಕಾಣದ ರಸ್ತೆಗಳು ಮತ್ತಷ್ಟು ಹಾಳಾಗುತ್ತವೆ. ಗಣಿಗಾರಿಕೆಯಿಂದ ಭೂಕಂಪನ ಉಂಟಾಗಲಿದ್ದು ಇದರಿಂದ ಮಳೆಗಾಲದಲ್ಲಿ ಗುಡ್ಡಗಳು ಕುಸಿಯುವ ಸಂಭವ ಇದೆ. ಕೊಡಗಿನಲ್ಲಿನಾವು ಈ ಹಿಂದೆ ನೋಡಿದಂತಹ ಸಂಕಷ್ಟಗಳನ್ನು ಕಪ್ಪತಗುಡ್ಡ ಪ್ರದೇಶದಲ್ಲೂ ಕಾಣಬೇಕಾಗಿ ಬರಬಹುದು. ಗಣಿಗಾರಿಕೆಯಿಂದ ಜೀವ ಮತ್ತು ಸಸ್ಯವೈವಿಧ್ಯ ನಾಶವಾಗುತ್ತದೆ. ಕೊಡಗಿನಲ್ಲಿ ಕಂಡುಬಂದ ಸಂಕಷ್ಟ ಕಪ್ಪತಗುಡ್ಡದ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲು ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು.

ನಮ್ಮ ಗುರುಗಳಾದ ಸಿದ್ಧಲಿಂಗ ಸ್ವಾಮೀಜಿ ಅವರು 2016ರಲ್ಲಿ ಕಪ‍್ಪತಗುಡ್ಡ ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದರು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ಸಂದರ್ಭದಲ್ಲಿ ನೂರಾರು ಮಂದಿ ಸ್ವಾಮೀಜಿಗಳನ್ನು ಕರೆದುಕೊಂಡು ಹೋಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯಪ್ರದೇಶ ಅಂತ ಘೋಷಣೆ ಮಾಡಬೇಕು, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕಪ್ಪತಗುಡ್ಡ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ವನ್ಯಜೀವಿಧಾಮ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬಹುದಾಗಿದೆ. ಸಾವಿರಾರು ಜನರಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತವೆ. ಸರ್ಕಾರ ಇಂತಹ ಒಳ್ಳೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೇ ಹೊರತು, ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದೆಂದರೆ ಒಂದು ರೀತಿಯಲ್ಲಿ ಅಲ್ಲಿನ ಪರಿಸರಕ್ಕೆ, ಜನರಿಗೆ ವಿಷಪ್ರಾಷನ ಮಾಡಿಸಿದಂತೆ.

ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವಗಳನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ, ಆಸೆ ಆಮಿಷಗಳಿಗೆ ಒಳಗಾಗದೇ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಅದರ ಜತೆಗೆ, ವಿಶೇಷವಾಗಿ ಕಪ್ಪತಗುಡ್ಡವನ್ನು ರಕ್ಷಿಸುವ ಮತ್ತು ಅದರ ಅಭಿವೃದ್ಧಿಗೆ ಪೂರಕವಾಗಿರುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಪ್ರತಿ ವರ್ಷ ಕಾಡಿಗೆ ಬೆಂಕಿ ಬೀಳುತ್ತದೆ. ಪ್ರತಿಸಲವೂ ಕಾಡನ್ನು ಬೆಂಕಿಯಿಂದ ರಕ್ಷಿಸಲಾಗುತ್ತದೆ. ಅದೇರೀತಿ, ಕಪ್ಪತಗುಡ್ಡವನ್ನು ಗಣಿಗಾರಿಕೆಯಿಂದ ರಕ್ಷಣೆ ಮಾಡಬೇಕು.

ಕಪ್ಪತಗುಡ್ಡ ಪ್ರದೇಶದಲ್ಲಿ 300ಕ್ಕಿಂತಲೂ ಹೆಚ್ಚು ಗಾಳಿಯಂತ್ರಗಳನ್ನು ಅಳವಡಿಸಿದ್ದಾರೆ. ಇವು ಕೂಡ ಅಲ್ಲಿನ ಪರಿಸರಕ್ಕೆ, ಜೀವವೈವಿಧ್ಯಕ್ಕೆ ಅನೇಕ ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತಿವೆ. ಇಂತಹ ತೊಂದರೆಗಳನ್ನೂ ತಡೆಗಟ್ಟುವ ಕೆಲಸ ಆಗಬೇಕಿದೆ. ಕಪ್ಪತಗುಡ್ಡವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಒಂದು ವೇಳೆ, ಗಣಿಗಾರಿಕೆಯಿಂದ ಕಪ್ಪತಗುಡ್ಡ ಹಾಳಾದರೆ ಗದಗ, ಕೊಪ್ಪಳ, ರಾಯಚೂರು ಜಿಲ್ಲಾ ಪ್ರದೇಶ ಮರುಭೂಮಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಏಕೆಂದರೆ, ಈ ಭಾಗದಲ್ಲಿ ಕಪ್ಪತಗುಡ್ಡದ ಕಾರಣದಿಂದಲೇ ಮಳೆ ಬರುತ್ತದೆ. ಅದು ಹಾಳಾದರೆ ಈ ಭಾಗ ಮರುಭೂಮಿ ಆಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಪ್ಪತಗುಡ್ಡವನ್ನು ನೋಡಲು ಬಹಳ ದೂರದ ಊರುಗಳಿಂದಲೂ ಪ್ರವಾಸಿಗರು ಬರುತ್ತಾರೆ. ಶುದ್ಧಗಾಳಿ ಹೊಂದಿರುವ ಪ್ರದೇಶ ಎಂಬ ಹಿರಿಮೆಯೂ ಕಪ್ಪತಗುಡ್ಡಕ್ಕಿದೆ. ಈ ಖ್ಯಾತಿಯನ್ನು ಉಳಿಸಿಕೊಳ್ಳಬೇಕಿರುವುದು ಕೂಡ ಅಷ್ಟೇ ಮಹತ್ವದ್ದಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ಎಷ್ಟೋ ಜನ ರಾಜಕಾರಣಿಗಳೇ ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಎಂಬುದು ಕೆಲವೇ ಕೆಲವು ಮಂದಿ ಉಳ್ಳವರ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸವೇ ಹೊರತು ಬೇರೇನೂ ಅಲ್ಲ. ಬಡಪಾಯಿಗಳ ಹೊಟ್ಟೆಮೇಲೆ ಹೊಡೆಯುವ ಕೆಲಸ ಇದಾಗಿದೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭಗೊಂಡರೆ ಬಡಜನರು ಸಾಯುತ್ತಾರೆ. ಪರಿಸರ, ಬೆಟ್ಟ ಗುಡ್ಡ ಹಾಳಾಗುತ್ತದೆ. ಗುಡ್ಡವನ್ನು ಅವಲಂಬಿಸಿರುವ ಪ್ರಾಣಿ ಸಂಕುಲವೂ ನಾಶವಾಗುತ್ತದೆ. ಹೀಗೆ ಜನರ ಜೀವನವನ್ನು ಹಾಳು ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸವನ್ನು ಜನಪ್ರತಿನಿಧಿಗಳು, ಗಣಿ ಮಾಲೀಕರು ಮಾಡಬಾರದು. ರಾಜ್ಯದ ಮುಖ್ಯಮಂತ್ರಿ ಬುದ್ಧಿವಂತರಿದ್ದಾರೆ. ಇಂತಹ ಎಲ್ಲ ವಿಷಯಗಳ ಬಗ್ಗೆ ತಿಳಿವಳಿಕೆ ಇದೆ. ಅವರು ಈ ವಿಷಯದಲ್ಲಿ ಬಹಳ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಪ್ಪತಗುಡ್ಡವನ್ನು ಎಂದಿನಂತೆ ಉಳಿಸುತ್ತಾರೆ ಎಂಬ ವಿಶ್ವಾಸ ನಮ್ಮದು.

ನಿರೂಪಣೆ: ಕೆ.ಎಂ. ಸತೀಶ್‌ ಬೆಳ್ಳಕ್ಕಿ

‌ಡಾ. ಸಿದ್ಧರಾಮ ಸ್ವಾಮೀಜಿ, ಪೀಠಾಧ್ಯಕ್ಷರು, ಗದಗ ಡಂಬಳ ತೋಂಟದಾರ್ಯ ಮಠ, ಗದಗ
‌ಡಾ. ಸಿದ್ಧರಾಮ ಸ್ವಾಮೀಜಿ, ಪೀಠಾಧ್ಯಕ್ಷರು, ಗದಗ ಡಂಬಳ ತೋಂಟದಾರ್ಯ ಮಠ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT