ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಎನ್‌ಜಿಒಗಳ ವಿರುದ್ಧ ಕ್ರಮ ಒಳಿತನ್ನೇನೂ ಮಾಡುವುದಿಲ್ಲ

Last Updated 5 ಜನವರಿ 2022, 20:23 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಕೆಲವು ವರ್ಷಗಳಿಂದ ದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಕೆಲಸ ನಿರ್ವಹಿಸುವುದನ್ನು ಕಷ್ಟಕರ ಆಗಿಸುತ್ತಿದೆ. ಇಂತಹ ಸಂಸ್ಥೆಗಳ ಕಷ್ಟವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದನ್ನು ಕೇಂದ್ರ ಸರ್ಕಾರವು ತನ್ನ ಹೇಳಿಕೆಗಳು, ನೀತಿಗಳು ಮತ್ತು ಕ್ರಿಯೆಗಳ ಮೂಲಕ ಸ್ಪಷ್ಟಪಡಿಸುತ್ತಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ಅಡಿಯಲ್ಲಿ ಕೆಲವು ಎನ್‌ಜಿಒಗಳಿಗೆ ನೋಂದಣಿ ನಿರಾಕರಿಸಿರುವುದು ಮತ್ತು ಇನ್ನು ಕೆಲವು ಎನ್‌ಜಿಒಗಳ ನೋಂದಣಿ ನವೀಕರಿಸಲು ಒಪ್ಪದಿರುವುದು ಈ ನೀತಿಯ ಒಂದು ಭಾಗ. ವಿದೇಶಗಳಿಂದ ಹಣ ಸ್ವೀಕರಿಸಲು ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಈ ಕಾಯ್ದೆಯ ಕೆಲವು ಅಂಶಗಳನ್ನು ಈಚೆಗೆ ಇನ್ನಷ್ಟು ಕಠಿಣಗೊಳಿಸಲಾಗಿದೆ. ಕಾಯ್ದೆಯನ್ನು ಬಳಸಿಕೊಂಡು ಎನ್‌ಜಿಒಗಳಿಗೆ ಹಣಕಾಸಿನ ನೆರವು ಸಿಗದಂತೆ ಮಾಡಲಾಗಿದೆ. ದೇಶದಲ್ಲಿ ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಆಗಿರುವ ಎನ್‌ಜಿಒಗಳ ಸಂಖ್ಯೆಯು 22 ಸಾವಿರಕ್ಕಿಂತಲೂ ಹೆಚ್ಚು. ಈ ಪೈಕಿ ಹಲವು ಸಂಸ್ಥೆಗಳು ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ವರದಿಯಾಗಿದೆ. ನೋಂದಣಿಯ ಅವಧಿಯು ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿಕ್ಕಿತ್ತು. ಇದನ್ನು ಮಾರ್ಚ್‌ 31ರವರೆಗೆ ವಿಸ್ತರಣೆ ಮಾಡಲಾಯಿತು. ಆದರೆ, ದಾಖಲೆಗಳ ಪರಿಶೀಲನೆ ನಂತರ 179 ಎನ್‌ಜಿಒಗಳ ಅರ್ಜಿಯನ್ನು ತಿರಸ್ಕರಿಸಲಾಯಿತು. ಈ ಎನ್‌ಜಿಒಗಳು ಮತ್ತು ನೋಂದಣಿ ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸದ ಎನ್‌ಜಿಗಳ ಚಟುವಟಿಕೆಗಳು ಇನ್ನು ಸ್ಥಗಿತಗೊಳ್ಳಲಿವೆ.

ಮದರ್ ತೆರೇಸಾ ಸ್ಥಾಪಿಸಿದ, ಕೋಲ್ಕತ್ತ ಮೂಲದ ಎನ್‌ಜಿಒ ‘ಮಿಷನರೀಸ್‌ ಆಫ್ ಚಾರಿಟಿ’ಯ ನೋಂದಣಿಯನ್ನು ಕೇಂದ್ರ ಸರ್ಕಾರವು ಈಚೆಗೆ ನವೀಕರಿಸಲು ನಿರಾಕರಿಸಿತು. ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ನವೀಕರಣ ನಿರಾಕರಿಸಲ್ಪಟ್ಟ ಎನ್‌ಜಿಒಗಳ ಪಟ್ಟಿಯಲ್ಲಿ ಆಕ್ಸ್‌ಫ್ಯಾಮ್ ಇಂಡಿಯಾ, ಕಾಮನ್ ಕಾಸ್, ಲೆಪ್ರಸಿ ಮಿಷನ್ ಮತ್ತು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೂಡ ಇವೆ. ಈ ಪಟ್ಟಿಯಲ್ಲಿ ಇರುವ ಹಲವು ಎನ್‌ಜಿಒಗಳು ಬೇರೆ ಬೇರೆ ವಲಯಗಳಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ. ಅವು ಜನರಿಗೆ ಸಹಾಯ ಮಾಡುತ್ತಿವೆ. ಬಡವರಿಗೆ, ದಿಕ್ಕಿಲ್ಲದವರಿಗೆ, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ, ದುರ್ಬಲ ವರ್ಗದ ವ್ಯಕ್ತಿಗಳಿಗೆ ಮತ್ತು ಸಮುದಾಯಗಳಿಗೆ ನೆರವು ಒದಗಿಸುತ್ತಿವೆ. ಮಿಷನರೀಸ್‌ ಆಫ್‌ ಚಾರಿಟಿ ಸಂಸ್ಥೆಯು ಕೋಲ್ಕತ್ತದಲ್ಲಿ ಮತ್ತು ದೇಶದ ಇತರ ಕಡೆಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ, ವಿಶೇಷ ಆರೈಕೆಯ ಅಗತ್ಯವಿರುವ ಜನರಿಗೆ, ರೋಗಪೀಡಿತರಿಗೆ ಮತ್ತು ವಯೋವೃದ್ಧರಿಗೆ ಮಾಡಿರುವ ಸಹಾಯವು ಬಹುಶ್ರುತ. ಮದರ್ ತೆರೇಸಾ ಅವರ ಸಾವಿನ ನಂತರವೂ ಈ ಸಂಸ್ಥೆಯು ಶ್ಲಾಘನೀಯ ಕೆಲಸ ಮಾಡಿದೆ. ಭಾರತ ಮಾತ್ರವೇ ಅಲ್ಲದೆ, ಇತರ ದೇಶಗಳಲ್ಲಿಯೂ ಇದು ಒಳ್ಳೆಯ ಕೆಲಸ ಮಾಡುತ್ತಿದೆ.

ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ನೋಂದಣಿಯನ್ನು ನವೀಕರಿಸಲು ನಿರಾಕರಿಸಿದ್ದು ಏಕೆ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ. ಸಂಸ್ಥೆಯ ಕುರಿತ ‘ವ್ಯತಿರಿಕ್ತ ವರದಿ’ಗಳ ಆಧಾರದಲ್ಲಿ ನೋಂದಣಿ ನವೀಕರಣಕ್ಕೆ ನಿರಾಕರಿಸಲಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಆದರೆ ಆ ವರದಿಗಳಲ್ಲಿ ಏನಿದ್ದವು ಎಂಬುದನ್ನು ಹೇಳಿಲ್ಲ. ಈ ಸಂಸ್ಥೆಯು ತನ್ನ ಕೆಲಸಗಳಿಗೆ ಸಂಬಂಧಿಸಿದಂತೆ ವ್ಯತಿರಿಕ್ತವಾದ ಹಣಕಾಸಿನ ನೋಟಿಸ್‌ ಪಡೆದಿಲ್ಲ. ವಿಶ್ವಾಸಾರ್ಹ ಹಾಗೂ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಯಾಗಿರುವ ಮಿಷನರೀಸ್ ಆಫ್ ಚಾರಿಟಿ ವಿಶ್ವದ ಹಲವೆಡೆಗಳಿಂದ ಹಣಕಾಸಿನ ಅನುದಾನ ಪಡೆದಿದೆ. ಆದರೆ, ಕ್ರೈಸ್ತ ಧರ್ಮದ ಸಂಸ್ಥೆಯೆಂಬಂತೆ ತೋರುವ ಹೆಸರು ಹೊತ್ತಿರುವ ಕಾರಣಕ್ಕಾಗಿ ಇದು ಕೆಟ್ಟ ಅನುಭವಗಳನ್ನು ಎದುರಿಸಿದ ನಿದರ್ಶನಗಳು ಇವೆ. ಹೀಗಿದ್ದರೂ ಈ ಸಂಸ್ಥೆಯು ತನ್ನ ಕೆಲಸಗಳಲ್ಲಿ ಯಾರಿಗೂ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗಿಲ್ಲ. ಇಂತಹ ಸಂಸ್ಥೆಗೆ ಹಣಕಾಸಿನ ನೆರವು ಸಿಗದಂತೆ ಮಾಡುವುದು ತಪ್ಪು. ಇತರ ಸಂಸ್ಥೆಗಳ ವಿಚಾರವಾಗಿ ಕೈಗೊಂಡಿರುವ, ಪ್ರತೀಕಾರ ಕೈಗೊಳ್ಳುವ ಬಗೆಯ ಕ್ರಮಗಳೂ ಅಷ್ಟೇ ತಪ್ಪು. ಸರ್ಕಾರಗಳು ಪ್ರವೇಶಿಸಲು ಸಾಧ್ಯವಾಗದ ಕಡೆಗಳಲ್ಲಿ ಎನ್‌ಜಿಒಗಳು ಕೆಲಸ ಮಾಡುತ್ತಿವೆ. ಅವುಗಳಿಗೆ ಕೆಲಸ ಮಾಡಲು ಅವಕಾಶ ಕೊಡದಿರುವುದು ದುರದೃಷ್ಟಕರ. ಇಂತಹ ಸಂಸ್ಥೆಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳು ಪೂರ್ವಗ್ರಹಪೀಡಿತವಾಗಿ ಇರುವಂತೆ ಕಾಣುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT