ಅಪೊಲೊ– 13ರಲ್ಲಿ ತೀವ್ರ ತಾಂತ್ರಿಕ ತೊಂದರೆ: ಚಂದ್ರಸ್ಪರ್ಶ ಕಾರ್ಯಕ್ರಮ ರದ್ದು
ಹ್ಯೂಸ್ಟನ್, ಏ. 14– ಬಾಹ್ಯಾಕಾಶ ನೌಕೆಯಲ್ಲಿ ಅನಿರೀಕ್ಷಿತ ಯಾಂತ್ರಿಕ ತೊಂದರೆ ಉಂಟಾದ ಕಾರಣ ಚಂದ್ರನ ಮೇಲೆ ಇಳಿಯುವ ಕಾರ್ಯಕ್ರಮವನ್ನು ರದ್ದು ಗೊಳಿಸಿರುವ ಅಪೊಲೊ– 13ರ ಮೂವರು ಗಗನಯಾತ್ರಿಗಳು ಈಗ ಭೂಮಿಗೆ ಹಿಂದಿರುಗುವ ಸಿದ್ಧತೆ ನಡೆಸಿದ್ದಾರೆ.
ಉಳಿವಿಗಾಗಿ ಬಾಹ್ಯಾಂತರಿಕ್ಷದಲ್ಲೇ ದೀರ್ಘ ಹೋರಾಟ ನಡೆಸಿರುವ ಗಗನಯಾತ್ರಿಗಳು ಎಲ್ಲವೂ ಸುಲಲಿತವಾಗಿ ಸಾಗಿದರೆ ಶುಕ್ರವಾರ ರಾತ್ರಿ ಭಾರತೀಯ ವೇಳೆ 11.17 ಗಂಟೆಗೆ ಧರೆಗಿಳಿಯುವರು.
ಆಹಾರಧಾನ್ಯ ಸಗಟು ವ್ಯಾಪಾರ ರಾಷ್ಟ್ರೀಕರಣ ಉದ್ದೇಶ ಇಲ್ಲ: ರಾಂ
ನವದೆಹಲಿ, ಏ. 14– ಆಹಾರ ಧಾನ್ಯಗಳ ಸಗಟು ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೃಷಿ ಮತ್ತು ಆಹಾರ ಸಚಿವ ಜಗಜೀವನರಾಂ ಅವರು ಇಂದು ಲೋಕಸಭೆಗೆ ತಿಳಿಸಿದರು.
ಆದರೆ ರೈತರು ಮತ್ತು ಬಳಕೆದಾರರ ಹಿತದೃಷ್ಟಿಯಿಂದ, ಪರಿಸ್ಥಿತಿ ಒದಗಿದಾಗ ಸರ್ಕಾರಿ ರಂಗದ ಸಂಸ್ಥೆಗಳ ಮೂಲಕ ವ್ಯಾಪಾರ ನಡೆಸುವ ಅವಕಾಶವನ್ನು ಸರ್ಕಾರ ವಿಸ್ತರಿಸುವುದೆಂದೂ ಕೆಲವು ಸಾವಿರ ವರ್ತಕರಿಗಿಂತ ಕೋಟ್ಯಂತರ ರೈತರ, ಬಳಕೆದಾರರ ಹಿತದೃಷ್ಟಿ ಹೆಚ್ಚಿನದೆಂದೂ ಅವರು ಸ್ಪಷ್ಟಪಡಿಸಿದರು.