ನವದೆಹಲಿ, ಜುಲೈ 6– ಕೇಂದ್ರ ಗೃಹ ಸಚಿವ ಖಾತೆ ಚವಾಣ್ರ ಕೈತಪ್ಪಿರುವುದರಿಂದ, ಇನ್ನೊಂದು ರಾಜ್ಯ ಪುನರ್ವಿಂಗಡಣಾ ಆಯೋಗ ನೇಮಕದ ಸ್ಪಷ್ಟ ಸಾಧ್ಯತೆ ಉಂಟಾಗಿದೆ.
ಕಳೆದ 15 ವರ್ಷಗಳಲ್ಲಿ ಬಹುಪಾಲು ತಣ್ಣಗಾಗಿರುವ ಹಲವು ವಿವಾದಗಳು ಅಂಥ ನೇಮಕದಿಂದ ಮತ್ತೆ ಏಳುತ್ತವೆ ಎಂಬುದೇ ಚವಾಣರ ವಾದವಾಗಿದ್ದು, ನೇಮಕದ ಸಲಹೆ ಬಂದಾಗಲೆಲ್ಲ ಅವರು ವಿರೋಧಿಸುತ್ತಿದ್ದರು.
ರಾಜ್ಯಗಳ ಗಾತ್ರ ಹಾಗೂ ಗಡಿಗಳ ಪುನರ್ವಿಮರ್ಶೆಯ ಕಾಲ ಬಂದಿದೆಯಂತ ಕಾಣುತ್ತದೆ ಎಂದು, ಪ್ರಧಾನಿ ಇಂದಿರಾ ಗಾಂಧಿ ಅವರು, ತೆಲಂಗಾಣ ಚಳವಳಿ ಪ್ರಕೋಪಕ್ಕೇರಿದ್ದ ಕಾಲದಲ್ಲಿ ಸಲಹೆ ಮಾಡಿದ್ದರೆಂದು ವರದಿಯಾಗಿದೆ.
ಪ್ರಾದೇಶಿಕ ಮಟ್ಟದಲ್ಲಿ ಚುನಾವಣಾ ಮೈತ್ರಿಗೆ ಸಂಸ್ಥಾ ಕಾಂಗ್ರೆಸ್ ಸಿದ್ಧ
ನವದೆಹಲಿ, ಜುಲೈ 6– ಸಂಸ್ಥಾ ಕಾಂಗ್ರೆಸ್ ಪಕ್ಷ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ ದೃಷ್ಟಿಯಿಂದ ರಾಷ್ಟ್ರ ಮಟ್ಟದಲ್ಲಿ ಇತರ ವಿರೋಧ ಪಕ್ಷಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರತೀ ರಾಜ್ಯದಲ್ಲೂ ಸ್ಥಳೀಯ ಪಕ್ಷಗಳ ಜತೆ ಪ್ರಾದೇಶಿಕ ಮೈತ್ರಿಕೂಟಗಳನ್ನು ರಚಿಸಿಕೊಳ್ಳಬಹುದು.
ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿನ ಪತ್ರಿಕಾ ಗೋಷ್ಠಿಯಲ್ಲಿ ಸುಮಾರು ಒಂದು ಗಂಟೆ ಕಾಲ ಮಾತನಾಡಿದ ಸಮಯದಲ್ಲಿ ಈ ಗ್ರಹಿಕೆಗೆ ಎಡೆಯಿತ್ತರು.