ಕಾವೇರಿ ವಿವಾದ: ‘ಒಂದೆರಡು ತಿಂಗಳಲ್ಲಿ ಒಪ್ಪಂದ ಆಗದಿದ್ದರೆ ಅನ್ಯಕ್ರಮ’
ಮದರಾಸು, ಆ. 4– ಕಾವೇರಿ ಜಲವಿವಾದದ ಬಗ್ಗೆ ಮುಂದಿನ ಒಂದೆರಡು ತಿಂಗಳಲ್ಲಿ ತಮಿಳುನಾಡು ಹಾಗೂ ಮೈಸೂರು ರಾಜ್ಯಗಳ ನಡುವೆ ಒಪ್ಪಂದ ಉಂಟಾಗದಿದ್ದರೆ ಇತ್ಯರ್ಥಕ್ಕೆ ‘ಬೇರೆ ಕ್ರಮಗಳನ್ನು’ ಅನುಸರಿಸಬೇಕು ಎಂದು ಕೇಂದ್ರ ನೀರಾವರಿ ಮತ್ತು ವಿದ್ಯುತ್ ಸಚಿವ ಡಾ. ಕೆ.ಎಲ್.ರಾವ್ ಇಂದು ಇಲ್ಲಿ ಹೇಳಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕೇಂದ್ರದ ಮಂಜೂರಾತಿ ಇಲ್ಲದೆ ಮೈಸೂರು ಸರ್ಕಾರ ಯೋಜನಾ ನಿರ್ಮಾಣ ಕಾರ್ಯ ನಡೆಸುತ್ತಿದೆಯೆಂದು ತಮಿಳುನಾಡು ಲೋಕೋಪಯೋಗಿ ಮತ್ತು ಕೈಗಾರಿಕಾ ಸಚಿವರು ತಮಗೆ ಕಟುವಾಗಿ ದೂರಿತ್ತರೆಂದು ಕೆ.ಎಲ್.ರಾವ್ ಸುದ್ದಿಗಾರರಿಗೆ ತಿಳಿಸಿದರು.
ಎಂಜಿನಿಯರಿಂಗ್ ಪ್ರವೇಶಕ್ಕೆ ಕನಿಷ್ಠ ಅಂಕಮಿತಿ ವಿನಾಯಿತಿ
ಮೈಸೂರು, ಆ. 4– ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕನಿಷ್ಠ ಅಂಕಗಳ ನಿಯಮದಿಂದ ವಿನಾಯಿತಿ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಅಕಾಡೆಮಿಕ್ ಕೌನ್ಸಿಲ್ನ ಸ್ಥಾಯಿ ಸಮಿತಿ ಇಂದು ನಿರ್ಧರಿಸಿತು.
ಇದರಂತೆ, ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸುವ ಎಲ್ಲ ಅಭ್ಯರ್ಥಿಗಳಿಗೂ ಅವರು ಪಡೆದಿರುವ ಅಂಕ ಎಷ್ಟೇ ಇರಲಿ ಪ್ರವೇಶ ನೀಡಲಾಗುವುದು.
ಐಚ್ಛಿಕ ವಿಷಯಗಳಲ್ಲಿ ಶೇಕಡ 45ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮಾತ್ರ ಇಲ್ಲಿಯವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಾವಕಾಶ ಅರ್ಹತೆ ಪಡೆದಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.