ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಕತ್ತಿ ಸಿಕ್ಕ ಮೇಲೆ..‌.

Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಸನ್ಯಾಸಿಯೊಬ್ಬ ಕಾಡಿನಲ್ಲಿ ಸಣ್ಣದೊಂದು ಪರ್ಣಕುಟಿ ಕಟ್ಟಿಕೊಂಡು ವಾಸವಾಗಿದ್ದ. ಕಾಡಿನಲ್ಲಿ ಸಿಗುವ ಕಂದಮೂಲಾದಿಗಳನ್ನು ತಿಂದುಕೊಂಡು, ಧ್ಯಾನ ತಪಸ್ಸುಗಳಲ್ಲಿ ಕಾಲ ಕಳೆಯುತ್ತಾ ಆನಂದವಾಗಿದ್ದ.

ಅದೊಂದು ದಿನ ಮಧ್ಯಾಹ್ನ ಸಮೀಪದ ತಿಳಿನೀರ ತೊರೆಯಲ್ಲಿ ನೀರು ಕುಡಿದುಕೊಂಡು ಕುಟೀರಕ್ಕೆ ಮರಳುವಾಗ ಪೊದೆಯಾಚೆಗೆ ಏನೋ ಫಳ್ ಅಂತ ಹೊಳೆದಂತಾಯಿತು. ಸನ್ಯಾಸಿ ಕುತೂಹಲದಿಂದ ಪೊದೆಯ ಆಚೆಬದಿಗೆ ಹೋಗಿ ನೋಡಿದ. ಅದೊಂದು ಅದ್ಭುತವಾದ ಕತ್ತಿ. ಬಿಸಿಲಿಗೆ ಫಳಫಳ ಹೊಳೆಯುತ್ತಿತ್ತು. ಅದರ ಬಾಯಿಧಾರೆಯನ್ನು ಮುಟ್ಟಿ ನೋಡಿದ. ಆಹ್! ತುಂಬಾ ಹರಿತವಾಗಿತ್ತು. ಸನ್ಯಾಸಿ ಕತ್ತಿಯನ್ನು ಕೈಗೆತ್ತಿಕೊಂಡು ಪೊದೆಯ ಕಡೆ ಬೀಸಿದ. ಚರಕ್ಕನೆ ಕಡಿದು ಬಿತ್ತು ಪೊದೆ. ಸನ್ಯಾಸಿಗೆ ರೋಮಾಂಚನವಾಯಿತು. ಆ ಕತ್ತಿಯನ್ನು ತೆಗೆದುಕೊಂಡು ಕುಟೀರಕ್ಕೆ ಹೋದ.

ಕತ್ತಿಯ ಹೊಳಪಿಗೆ, ಅದರ ಹರಿತಕ್ಕೆ ಸನ್ಯಾಸಿ ಎಷ್ಟು ಮೋಹಿತನಾದ ಅಂದರೆ ಆ ರಾತ್ರಿ ನಿದ್ದೆಯಲ್ಲೂ ಒಂದೆರಡು ಬಾರಿ ಎಚ್ಚರವಾಗಿ ಕತ್ತಿಯನ್ನು ನೋಡಿ, ಮುತ್ತಿಟ್ಟು, ಅದರ ಬಾಯಿಧಾರೆಯ ಮೇಲೆ ಬೆರಳಾಡಿಸಿದ.

ಅಂದಿನಿಂದ ಕತ್ತಿ ಸನ್ಯಾಸಿಯ ಜೊತೆಯಾಯಿತು. ದಾರಿಯಲ್ಲಿ ಹೋಗುವಾಗ ಬರುವಾಗ ಕತ್ತಿಯನ್ನು ಬೀಸಿ ಮರ ಗಿಡ ಬಳ್ಳಿಗಳನ್ನು, ಹೂ ಚಿಗುರುಗಳನ್ನು ಚರಕ್ಕ್ ಚರಕ್ಕ್ ಅಂತ ಕತ್ತರಿಸುವುದು ಅವನಿಗೊಂದು ಆಟವಾಯಿತು.

ಕತ್ತಿ ಇನ್ನಷ್ಟು ಮತ್ತಷ್ಟು ಹರಿತವಾಗಲೆಂದು ಅದನ್ನು ಆಗಾಗ ಮಸೆಯುವುದಕ್ಕೂ ಶುರು ಮಾಡಿದ.

ಒಂದು ದಿನ ಸನ್ಯಾಸಿ ತೊರೆಯ ಕಡೆಗೆ ಹೋಗುವಾಗ ಒಂದು ಕಾಡುನಾಯಿ ಬೊಗಳುತ್ತಾ ಬಂತು. ಸಿಟ್ಟಾದ ಸನ್ಯಾಸಿ ತನ್ನ ಕತ್ತಿಯನ್ನು ಬೀಸಿದ.

ಚರ್ರಕ್ಕ್ ಅಂತ ನಾಯಿಯ ಬಾಲ ಕತ್ತರಿಸಿಹೋಗಿ ನಾಯಿ ಜೋರಾಗಿ ಬೊಗಳುತ್ತಾ ಓಡಿಹೋಯಿತು. ಬೊಗಳುವ ನಾಯಿಗಳ ಬಾಲ ಕತ್ತರಿಸಿಬಿಟ್ಟರೆ ಅವು ಓಡಿಹೋಗುತ್ತವೆ ಅಂತ ಆಗ ಸನ್ಯಾಸಿಗೆ‌ ಅರಿವಾಯಿತು.

ಆಮೇಲೆ ಸಿಕ್ಕಸಿಕ್ಕಲೆಲ್ಲಾ ಕತ್ತಿಯನ್ನು ಝಳಪಿಸುತ್ತಾ, ಯಾವುದಾದರೂ ದುಷ್ಟಮೃಗ ಅಡ್ಡವಾದರೆ ಅದನ್ನು ಕಚಕ್ ಎಂದು ಕತ್ತರಿಸುತ್ತಾ ಓಡಾಡುತ್ತಿದ್ದ. ಈ ಕತ್ತಿಯ ಆಟ ಸನ್ಯಾಸಿಗೆ ಎಷ್ಟು ಪ್ರಿಯವಾಯಿತೆಂದರೆ ಆಮೇಲಾಮೇಲೆ ಸಾಧು ಪ್ರಾಣಿಗಳ ಮೇಲೂ ಕತ್ತಿಯನ್ನು ಬೀಸಿ, ಖುಷಿಪಡುತ್ತಿದ್ದ...

ಈ ಕತೆಯನ್ನು ಹೇಳಿದ ನಮ್ಮ ಗುರುಗಳು ಕಡೆಯಲ್ಲಿ ಒಂದು ಮಾತು ಹೇಳಿದರು- ‘ಆ ಕತ್ತಿಯ ಹಾಗೇ ಕಣೋ, ಅಧಿಕಾರ ಅನ್ನುವುದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT