ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ‘ಹಳ್ಳಹಿಡಿದ’ ಹನಿ ನೀರಾವರಿ

ಶಿಗ್ಗಾವಿ, ರಾಮಥಾಳ ಯೋಜನೆ ವಿಫಲ,‘ಪೂರಿಗಾಲಿ’ ಕಾಮಗಾರಿ ಕುಂಠಿತ
Last Updated 28 ಮೇ 2022, 19:46 IST
ಅಕ್ಷರ ಗಾತ್ರ

ಮಂಡ್ಯ: ವಿಶ್ವದಲ್ಲೇ ಮೊದಲು, ರಾಷ್ಟ್ರದಲ್ಲೇ ಮೊದಲು ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದ ಮಹತ್ವಾಕಾಂಕ್ಷಿ ಹನಿ–ತುಂತುರು ನೀರಾವರಿ ಯೋಜನೆಗಳು ಆರಂಭಿಕ ಹಂತದಲ್ಲೇ ವಿಫಲಗೊಂಡಿವೆ. ‘ಇಸ್ರೇಲ್‌ ಮಾದರಿ’ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಭ್ರಷ್ಟಾಚಾರ, ಕಮಿಷನ್‌ ದಂಧೆಯಿಂದಾಗಿ ‘ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ರಾಶಿ’ ಗಾದೆ ಕೂಡ ಸುಳ್ಳಾಗಿದೆ.

ರೈತನ ಭೂಮಿಯ ಪೈರಿನ ಬುಡಕ್ಕೆ ನೇರವಾಗಿ ನೀರು ಹಾಯಿಸುವ ವೈಜ್ಞಾ ನಿಕ ಹನಿ– ತುಂತುರು ನೀರಾವರಿ ಪರಿಕ ಲ್ಪನೆ ಹಲವು ರಾಜ್ಯ, ರಾಷ್ಟ್ರಗಳಲ್ಲಿ ಯಶಸ್ವಿ ಯಾಗಿದೆ. ಹರಿವ ನೀರಾವರಿಯ (ಫ್ಲೋ ಇರಿಗೇಷನ್‌) ನೀರಿನ ಅಪವ್ಯಯ ತಪ್ಪಿಸಿ ಕಡಿಮೆ ನೀರಿನಲ್ಲಿ ಹೆಚ್ಚು ಭೂಮಿಗೆ ನೀರು ಹನಿಸುವ ಸೂಕ್ಷ್ಮ, ವೈಜ್ಞಾನಿಕ ವ್ಯವಸ್ಥೆ ಈ ಯೋಜನೆಯ ವಿಶೇಷ. ಗಣಕೀಕೃತ, ಸ್ವಯಂ ಚಾಲಿತ ವ್ಯವಸ್ಥೆ ಮೂಲಕ ನಾಲೆಯ ಕೊನೆ ಭಾಗಕ್ಕೂ ಸಮಸ್ಯೆಯಾಗದೇ, ಒಂದು ಗುಂಟೆ ಕೂಡ ಬಿಡದೇ ನೀರು ಕಳುಹಿಸುವ ವ್ಯವಸ್ಥೆ ಇದು.

ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಶೇ 90 ಸಹಾಯಧನದೊಂದಿಗೆ ರೈತರು ಸ್ವತಃ ಈ ಯೋಜನೆ ಅಳವಡಿಸಿಕೊಂಡು ಲಾಭ ಕಂಡಿದ್ದಾರೆ. ಆದರೆ, ಸರ್ಕಾರ ಜಾರಿಗೊಳಿಸಿದ ಸಮಗ್ರ ಹನಿ ನೀರಾವರಿ ಯೋಜನೆಗಳು ವಿಫಲಗೊಂಡಿವೆ.

‘ಶಿಗ್ಗಾವಿ ಏತ ನೀರಾವರಿ’ ಯೋಜನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಕೂಸು ಎಂದೇ ಬಿಂಬಿತವಾಗಿತ್ತು. ಇಸ್ರೇಲ್‌ ಮಾದರಿಯಲ್ಲಿ ಜಾರಿಗೊಳಿಸಲಾದ ದೇಶದ ಮೊದಲ ಹನಿ–ತುಂತುರು ಮಾದರಿ ಯೋಜನೆ ಎಂದೇ ಪ್ರಸಿದ್ಧಿ ಪಡೆದಿತ್ತು.

ಆದರೀಗ ಯೋಜನೆ ಸಂಪೂರ್ಣವಾಗಿ ನೆಲಕಚ್ಚಿದ್ದು ಪೈಪ್‌, ಇತರ ಉಪಕರಣ ಗಳನ್ನು ರೈತರೇ ಕಿತ್ತು ಹಾಕಿದ್ದಾರೆ. ‘ರೈತರ ಅಸಹಕಾರ’ ಹೆಸರಿನಲ್ಲಿ ಯೋಜನೆಯ ವೈಫಲ್ಯವನ್ನು ಅನ್ನದಾತನ ಹೆಗಲಿಗೆ ಕಟ್ಟಲಾಗಿದೆ.

ಬಾಗಲಕೋಟೆ ಜಿಲ್ಲೆ ಹುನುಗುಂದ‌ ತಾಲ್ಲೂಕಿನ ‘ರಾಮಥಾಳ ಹನಿ– ತುಂತುರು ನೀರಾವರಿ ಯೋಜನೆ’ ಭ್ರಷ್ಟಾಚಾರದ ಕೂಪವಾಗಿದೆ. ಯೋಜನೆ ಉದ್ಘಾಟನೆಯಾಗಿ, ಗುತ್ತಿಗೆದಾರ ಕಂಪನಿ ನಿರ್ವಹಣೆ ಮಾಡಬೇಕಾಗಿದ್ದ ಐದು ವರ್ಷಗಳ ಅವಧಿಯೂ ಮುಗಿದಿದೆ. ಆದರೆ, ಇಂದಿಗೂ ಬಹುತೇಕ ರೈತರಿಗೆ ಹನಿ ನೀರಿನ ಪೈಪ್‌ಗಳೂ ಸಿಕ್ಕಿಲ್ಲ.

ಶಿಗ್ಗಾವಿ, ರಾಮಥಾಳ ಎರಡೂ ಯೋಜನೆ ವಿಫಲಗೊಂಡ ಉದಾಹರಣೆ ಕಣ್ಣ ಮುಂದಿದ್ದರೂ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ‘ಪೂರಿಗಾಲಿ ಹನಿ ನೀರಾವರಿ’ ಯೋಜನೆ ಆರಂಭಿಸಿ ದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡು ತ್ತದೆ. ‘ಅಲ್ಲಿ ವಾರ್ಷಿಕ ಒಂದು ಬೆಳೆಗೆ ಮಾತ್ರ ನೀರು ದೊರೆಯುತ್ತದೆ. ಆದರೆ, ಇಲ್ಲಿ ಮುಂಗಾರು, ಹಿಂಗಾರು ಎರಡಕ್ಕೂ ನೀರು ಸಿಗುತ್ತದೆ. ಹೀಗಾಗಿ ಇಲ್ಲಿ ವೈಫಲ್ಯದ ಪ್ರಶ್ನೆಯೇ ಇಲ್ಲ. ಜೊತೆಗೆ ಅಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಜಾರಿಗೊಳಿಸಿದ್ದೇವೆ’ ಎಂಬುದು ಕಾವೇರಿ ನೀರಾವರಿ ನಿಗಮದ ಉತ್ತರ.

ಬಿ.ಜಿ ಪುರ ಹೋಬಳಿಯ 51 ಗ್ರಾಮ ಗಳ 25 ಸಾವಿರ ಎಕರೆಗೆ ನೀರುಣಿಸುವ, 16 ಕೆರೆ ತುಂಬಿಸುವ ಈ ಯೋಜನೆ ಅಂದುಕೊಂಡಂತೆ ನಡೆದಿದ್ದರೆ 2018ರಲ್ಲೇ ಪೂರ್ಣಗೊಳ್ಳ ಬೇಕಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದ ಕೂಡಲೇ ಯೋಜನೆಯೂ ಹಳ್ಳ ಹಿಡಿಯಿತು. ನಂತರ ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರ ಈ ಯೋಜನೆ ಜಾರಿಗೆ ಆಸಕ್ತಿ ತೋರದಿರುವುದು ರೈತರ ನಿರೀಕ್ಷೆಯನ್ನು ಹುಸಿಯಾಗಿಸಿದೆ.

ಶಿಗ್ಗಾವಿ, ರಾಮಥಾಳ ಯೋಜನೆಗಳ ವೈಫಲ್ಯಕ್ಕೆ ರೈತರ ಅರಿವಿನ ಕೊರತೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂರಿಗಾಲಿ ಯೋಜನೆ ವ್ಯಾಪ್ತಿಯ ರೈತರಿಗೆ ಜಾಗೃತಿ ಮೂಡಿಸಿ, ತರಬೇತಿಯನ್ನೂ ಕೊಡಿಸಲಾಗಿದೆ.

ಯೋಜನೆ ಉಸ್ತುವಾರಿ ಹೊತ್ತಿದ್ದ ಕಾಂಗ್ರೆಸ್‌ನ ಅಂದಿನ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು, ರೈತರು ರಾಮಥಾಳ, ಶಿಗ್ಗಾವಿ ಯೋಜನೆಗಳ ಅಧ್ಯಯನ ಪ್ರವಾಸವನ್ನೂ ಮಾಡಿದ್ದಾರೆ. ‘ಡ್ರಿಪ್‌ ಟು ಮಾರ್ಕೆಟ್‌’ ಯೋಜನೆಯಡಿ ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆಯೂ ಆಗಿದೆ. ಬೆಳೆ ಆಯ್ಕೆ, ಕೃಷಿ ಪದ್ಧತಿ ಬಗ್ಗೆ ಮಾರ್ಗದರ್ಶನ ಮಾಡಲು ಕೃಷಿ ತಜ್ಞರನ್ನೂ ನೇಮಿಸಲಾಗಿದೆ.

ಅತ್ಯಾಧುನಿಕ ಪಂಪ್‌ಹೌಸ್‌, ನೀರು ಸಂಗ್ರಹ ತೊಟ್ಟಿ, ಹೊಲಗಳಿಗೆ ಸಬ್‌ ಪೈಪ್‌ಲೈನ್‌ ಅಳವಡಿಕೆ ಸೇರಿದಂತೆ ಶೇ 80ರಷ್ಟು ಕಾಮಗಾರಿ ಕಾಂಗ್ರೆಸ್‌ ಅವಧಿ ಯಲ್ಲೇ ಪೂರ್ಣಗೊಂಡಿದೆ. ನಾಲ್ಕೂವರೆ ವರ್ಷಗಳಿಂದ ಮೇಲೇಳದ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ.

2017ರಲ್ಲೇ ಸ್ಥಾಪಿಸಲಾಗಿದ್ದ ಸಲಕ ರಣೆಗಳ ಸಂಗ್ರಹಾಗಾರದಲ್ಲಿ ಅಪಾರ ಪ್ರಮಾಣದ ಯಂತ್ರೋಪಕರಣಗಳು, ಪೈಪ್‌ಗಳು ತುಕ್ಕು ಹಿಡಿಯುತ್ತಿವೆ. ಬಹುತೇಕ ಪೈಪ್‌ಗಳು ನಾಶವಾಗಿವೆ. ಸುಮಾರು 80 ಟ್ರಕ್‌ನಷ್ಟು ಸಲಕರಣೆಗಳು ಕಳವಾಗಿರುವ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ.

ಹನಿ–ತುಂತುರು ನೀರಾವರಿ ಯೋಜನೆ ಶಿಗ್ಗಾವಿ, ರಾಮಥಾಳ, ಪೂರಿ ಗಾಲಿಗೆ ಮಾತ್ರ ಸೀಮಿತವಾದ ಯೋಜನೆಯಾಗಿರಲಿಲ್ಲ, ಇವು ಯಶಸ್ವಿಯಾಗಿದ್ದರೆ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಮುನ್ನೋಟ ರಾಜ್ಯ ಸರ್ಕಾರದ ಮುಂದಿತ್ತು.

ಕೋರ್ಟ್‌ ಪ‍್ರಕರಣ ಬಗೆಹರಿದಿದ್ದು, ಜುಲೈನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಂಕರೇಗೌಡ ತಿಳಿಸಿದರು.

ಪೈಪ್‌ಲೈನ್‌ ಮೂಲಕ ಪರ್ಯಾಯ ವ್ಯವಸ್ಥೆ
ಹನಿ ನೀರಾವರಿ ಅಥವಾ ತುಂತುರು ನೀರಾವರಿ ಯೋಜನೆ ಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂಬುದು ನಿಜ. ಇವು ರೈತನ ಹೊಲಗಳಿಗೆ ಮಿತವ್ಯಯವಾಗಿ ನೀರು ಒದಗಿಸಬೇಕು ಎಂಬ ಸದುದ್ದೇಶದಿಂದ ಮಾಡಲಾದ ಯೋಜನೆಗಳು. ಆದರೆ ಈ ಯೋಜನೆಗಳು ಉದ್ದೇಶಿತ ಫಲ ನೀಡಲಿಲ್ಲ ಎಂಬ ಕಾರಣಕ್ಕೆ ನಾನು ಜಲಸಂಪನ್ಮೂಲ ಸಚಿವನಾದ ಮೇಲೆ ಸರ್ಕಾರದ ಮಟ್ಟದಲ್ಲಿ ನಿರ್ದಿಷ್ಟವಾದ ನಿರ್ಣಯವೊಂದನ್ನು ಕೈಗೊಂಡು ಹನಿ ಮತ್ತು ತುಂತುರು ನೀರಾವರಿ ಬದಲಿಗೆ ಪೈಪ್ ಲೈನ್ ಮೂಲಕ ರೈತನ ಹೊಲಕ್ಕೆ ಒಂದು ಔಟ್ಲೆಟ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ತನ್ಮೂಲಕ ಯೋಜನಾ ವೆಚ್ಚದಲ್ಲಿ ಶೇ 40 ರಷ್ಟು ಕಡಿತಗೊಳಿಸಲು ಯೋಜಿಸಲಾಗಿದೆ.
–ಗೋವಿಂದ ಕಾರಜೋಳ,ಜಲಸಂಪನ್ಮೂಲ ಸಚಿವ

ಒಬ್ಬರಿಗೆ ಕನಸು, ಇನ್ನೊಬ್ಬರಿಗೆ ಬೋಗಸ್‌!
‘ಪೂರಿಗಾಲಿ ಹನಿ ನೀರಾವರಿ ಯೋಜನೆ ನನ್ನ ಕನಸಿನ ಕೂಸು, ರಾಜೀನಾಮೆ ಬೆದರಿಕೆ ಹಾಕಿ ಸಿದ್ದರಾಮಯ್ಯ ಅವರಿಂದ ಯೋಜನೆಯ ಮಂಜೂರಾತಿ ಪಡೆದಿದ್ದೆ’ ಎಂದು ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳುತ್ತಾರೆ.

‘ಇದೊಂದು ಬೋಗಸ್‌ ಯೋಜನೆಯಾಗಿದ್ದು, ಜೇಬು ತುಂಬಿಸಿಕೊಳ್ಳಲು ಮಾಡಿದ್ದಾರೆ. ಕಪ್ಪುಪಟ್ಟಿಯಲ್ಲಿರುವ ಜೈನ್‌ ಇರಿಗೇಷನ್‌ ಕಂಪನಿಗೆ ಗುತ್ತಿಗೆ ಕೊಟ್ಟಿದ್ದೇ ಅನುಮಾನಾಸ್ಪದ. ತಡವಾಗಿದ್ದಕ್ಕೆ ಈಗ ಕಂಪನಿ ಹೆಚ್ಚುವರಿ ವೆಚ್ಚ ವಸೂಲಿ ಮಾಡುತ್ತದೆ. ಯೋಜನೆ ಜಾರಿಗೆ ಸದನದಲ್ಲಿ ಒತ್ತಾಯ ಮಾಡಿದ್ದೇನೆ’ ಎಂದು ಹಾಲಿ ಶಾಸಕ ಕೆ.ಅನ್ನದಾನಿ ತಿಳಿಸಿದರು.

ಜುಲೈಗೆ ಕಾಮಗಾರಿ ಮುಗಿಯುತ್ತೆ
‘ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಿಂದ ವಿದ್ಯುತ್‌ ಪೂರೈಕೆಗಾಗಿ ಟವರ್‌ ಅಳವಡಿಸುವ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ಈಗ ಎಲ್ಲವೂ ಬಗೆಹರಿದಿದ್ದು ಕಾಮಗಾರಿ ಚುರುಕು ಪಡೆದುಕೊಂಡಿದೆ. ಜುಲೈನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಂಕರೇಗೌಡ ತಿಳಿಸಿದರು.

*
ನಮ್ಮ ಹೊಲಗಳಿಗೆ ಪೈಪ್‌ಲೈನ್‌ ಬಂದು ಐದು ವರ್ಷವಾಗಿದೆ. ನೀರು ಯಾವಾಗ ಬರುತ್ತದೆ ಗೊತ್ತಿಲ್ಲ. ಚುನಾವಣೆಗೆ ಮತ ಕೇಳಲು ಬಂದವರನ್ನು ಪ್ರಶ್ನಿಸುತ್ತೇವೆ.
–ರಾಚೇಗೌಡ, ಕಲ್ಯಾಣಿ ಕೊಪ್ಪಲು

*

ಕೋರ್ಟ್‌ ಕೇಸ್‌, ಭೂಸ್ವಾಧೀನ, ಪರಿಹಾರ ವಿತರಣೆಯ ಸಮಸ್ಯೆ ಬಗೆಹರಿದಿದ್ದು ಪೂರಿಗಾಲಿ ಹನಿ ನೀರಾವರಿ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಜುಲೈನಲ್ಲಿ ಹೊಲಗಳಿಗೆ ನೀರು ಹರಿಯಲಿದೆ.
–ಕೆ.ಗೋಪಾಲಯ್ಯ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT