ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಹಕ್ಕು ಬುಕ್ಕು ಕಸ

Last Updated 3 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

‘ಎಲೆಕ್ಷನ್ನಿಗೆ ನಿಂತುಕಂಡಿದ್ರಲ್ಲ ಬುಡಿ ಸಾ, ಗೆಲ್ಲದಿದ್ರೂ ಪರವಾಗಿಲ್ಲ, ಪವಿತ್ರವಾಗಿದಿರ. ನಿಮ್ಮ ಗೋರಾಟವ ಪಾರ್ಟಿ ಅರ್ಥ ಮಾಡಿಕ್ಯಬಕು!’ ಅಂತ ತುರೇಮಣೆ ಫೋನಲ್ಲಿ ಯಾರಿಗೋ ಬೋಧನೆ ಮಾಡ್ತಿದ್ರು. ‘ಇದೇನು ಸಾರ್ ಯಾರಿಗೆ ಕಿವಿ ಕಚ್ಚತಾ ಇದೀರ!’ ಅಂದೆ ನಾನು.

‘ಎಲೆಕ್ಷನ್ನಿಗೆ ಸುಮ್ಮನೆ ನಿಂತುಕಂಡ್ರೆ ಸಾಕು ಅಂತ ಕೋರ್ಟು ಏಳ್ಯದೆ. ಪುಣ್ಯಕೋಟಿ ಸರ್ಕಾರಕ್ಕೆ ಅಡಿಪಾಯ ಹಾಕಿದ್ದು ಅಣ್ತಮ್ಮರಾದ ಕ್ವಾಟೆ ಹಕ್ಕುರಾಯರು. ಮಂತ್ರಿ ಪದವಿಗೆ ಅಡ್ವಾನ್ಸ್ ಬುಕ್ ಮಾಡಿಕ್ಯಂಡು ರಾಜ್ಯ ಸ್ಥಾಪನೆಗೆ ಎದೆಗೆ ಎದೆ ಕೊಟ್ಟು ಹೋರಾಟ ಮಾಡಿದ ಬುಕ್ಕುರಾಯ ನಾನು. ಗೆದ್ದೋರು- ಸೋತೋರು ಅಂತ ಮಕ ನೋಡದೆ ಎಲ್ಲ ಓರಾಟಗಾರರಿಗೆ ದಿವಿನಾಗಿರೋ ಪದವಿ ಕೊಡದೇ ಇರೋದು ಯಾವ ನ್ಯಾಯ? ಮಾತಿಗೆ ತಪ್ಪಿದರೆ ಸಿಎಂ ಇದ್ಯಾರಣ್ಯರ ಮ್ಯಾಲೆ ಬುಕ್ಕು ಬರೆಯದೇಯ’ ಅಂತ ಹೆದರಿಸ್ತಾವ್ರಲ್ಲೋ ಇಸ್ವಣ್ಣಾರು!’ ಅಂತಂದ್ರು.

‘ಇಸ್ವಣ್ಣರ ಹಕ್ಕಿ ಶಕುನ ಇದ್ದುದ್ದೇ ಬುಡಿ ಸಾ. ಇಕ್ಕಡೆ ಲಾಬಿಗಾರರೆಲ್ಲಾ ನನಗೆ ಹೋಮು, ಬೆಳಗಾಂ ಕಂದನಿಗೆ ಜಲಸಂಪನ್ಮೂಲ, ಅವನಿಗೆ ಗ್ರಹ, ನನಗೆ ಬೆಂಗಳೂರು ಅಭಿವೃದ್ಧಿ ಅಂತ ಪಾಲು-ಪಾರೀಕತ್ತು ಮಾಡಿಕ್ಯಂಡವುರಂತೆ. ಹೈಕಮಾಂಡ್ ಹಕ್ಕು-ಬುಕ್ಕುಗಳಿಗೆ ಹಕ್ಕಿಲ್ಲ ಅಂದದಂತೆ!’ ಅಂತ ನನ್ನ ಬೇಜಾರು ಆಚೆ ಹಾಕಿದೆ.

‘ಪಾಪ ಸಿಎಂ ಸಯಾಬ್ರಿಗೆ ಸಂಪುಟ ವಿಸ್ತರಣೆ ಕೊರೋನಾ ವೈರಸ್ ಥರಾ ಆಗಿಬುಟ್ಟದೆ. ಬರೀ ಕೆಮ್ಮು, ಸುಸ್ತು! ಅದ ಬುಟ್ಟಾಕು, ನಿರ್ಮಲಕ್ಕಾರು ಮೂಗಿಗೆ, ಮೊಣಕೈಗೆ ತುಪ್ಪ ಹಚ್ಚಿ ಸುಸ್ತಾಗಿ
ಬುಟ್ರಲ್ಲಪ್ಪಾ’ ಅಂದ್ರು ತುರೇಮಣೆ.

‘ಅಯ್ ಬುಡಿ ಸಾ, ಉಪಾದ್ರಿಗೆ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂದಂಗೆ ಸಂಬಳಕ್ಕಿಂತಾ ಟ್ಯಾಕ್ಸೇ ಜಾಸ್ತಿಯಾಗ್ಯದೆ. ಬಿಜೆಪಿ ಆಪೀಸಲ್ಲಿ ಕಸ ಗುಡಿಸಿಕ್ಯಂಡು ಪಾರ್ಟ್‍ಟೈಂ ಕೆಲಸ ಮಾಡಮು ಅಂತಿದೀನಿ ಸಾ’ ನನ್ನ ವಿಚಾರ ಹೇಳಿದೆ.

‘ಲೇ ಬ್ಯಾಡ ಕನೋ, ಅದಕ್ಕೇ ಈಗ ಕಿತ್ತಾಟ ನಡಿತಾ ಅದೆ. ಆಮೇಲೆ ಮಕುಟಳ್ಳಿಯೋರು ಬಂದು ಪರಕೆ ಕಿತ್ತುಗತ್ತರೆ’ ಅಂತ ತುರೇಮಣೆ ಅಂದ್ರು.

ಕಸ ಗುಡಿಸಕ್ಕೂ ಬೆಲೆ ಬಂತಲ್ಲಾ, ಅಚ್ಛೇ ದಿನ್ ಅಂದ್ರೆ ಇದೇನಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT