ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟು ಅಸಹನೆ ದುರದೃಷ್ಟಕರ

ವೈಚಾರಿಕ ಅಸಹನೆಯ ಬೇರುಗಳು ಎಷ್ಟು ಆಳವಾಗಿಹೋಗಿವೆ ಎಂಬುದಕ್ಕೆ ‘ಸಾಹಿತ್ಯ ಸಂಭ್ರಮ’ದ ಸಮಾರೋಪ ಸಮಾರಂಭದಲ್ಲಿ ಆದ ಗದ್ದಲವೇ ಸಾಕ್ಷಿ
Last Updated 21 ಜನವರಿ 2019, 20:00 IST
ಅಕ್ಷರ ಗಾತ್ರ

ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ‘ಸಾಹಿತ್ಯ ಸಂಭ್ರಮ’ದ ಸಮಾರೋಪದ ವರದಿ ಓದಿ (ಪ್ರ.ವಾ., ಜ. 21) ತುಂಬಾ ತಲ್ಲಣವಾಯಿತು. ತಮ್ಮ ಆಶಯ ಭಾಷಣದಲ್ಲಿ ಬರಗೂರು ರಾಮಚಂದ್ರಪ್ಪ ಕಳಕಳಿಯಿಂದ ಪ್ರಸ್ತಾಪಿಸಿದ ‘ಸಂಭ್ರಮ-ಸಂಕಟಗಳ ದ್ವಂದ್ವ ಅಸ್ತಿತ್ವ’ ಇಷ್ಟು ಬೇಗ ವಾಸ್ತವವಾಯಿತೆ ಎಂದು ಸಂಕಟವಾಯಿತು.

ಡಾ. ಶಿವ ವಿಶ್ವನಾಥನ್ ದೊಡ್ಡ ವಿದ್ವಾಂಸರು; ಪ್ರತಿಯೊಂದು ಸಂಗತಿಯನ್ನೂ ಬಿಡಿ ಬಿಡಿಯಾಗೇ ನೋಡದೆ ಅದನ್ನು ಅನೇಕ ಭಿನ್ನ ದೃಷ್ಟಿಕೋನಗಳಿಂದ ನೋಡಬೇಕು ಎಂದು ನಂಬಿರುವವರು. ಅವರ ವಿಷಯ ‘ರಾಷ್ಟ್ರೀಯತೆ...’ ಮತ್ತು ಈ ವಿಷಯ ಕುರಿತು ಅನೇಕ ಲೇಖನಗಳನ್ನೂ ಅವರು ಬರೆದಿದ್ದಾರೆ. ‘ರಾಷ್ಟ್ರೀಯತೆ’ ಎಂಬುದು ಸ್ವಯಂಸಿದ್ಧ ಒಂದು ಸತ್ಯವಲ್ಲ; ಕಾಲಕಾಲಕ್ಕೆ ಪ್ರಭುತ್ವದಿಂದಾಗುವ ಭೌಗೋಳಿಕ ಬದಲಾವಣೆಗಳನ್ನು ಅನುಸರಿಸಿ, ನಾವು ನಮ್ಮ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೊಳ್ಳುವ ಒಂದು ಅಮೂರ್ತ ರಚನೆ– ಎಂಬುದು ಅವರ ಮುಖ್ಯ ವಾದ.

ಈ ವಾದವನ್ನು ಬೆಳೆಸುವಾಗ ಅವರು ಅಸ್ಸಾಮಿನಲ್ಲಿ ಒಂದು ಕಾಲಖಂಡದಲ್ಲಿ ಕಂಡ ಸೈನಿಕರ ವರ್ತನೆ
ಯನ್ನೂ ಪ್ರಸ್ತಾಪಿಸಿರಬಹುದು ಮತ್ತು ಇದು ಅನವಶ್ಯಕವಾಗಿದ್ದು ಅನೇಕರಿಗೆ ನೋವನ್ನು ಉಂಟುಮಾಡಿರಬಹುದು (‘ಬಹುದು’ ಏಕೆಂದರೆ ನಾನು ಅವರ ಉಪನ್ಯಾಸವನ್ನು ನೇರವಾಗಿ ಕೇಳಲಾಗಲಿಲ್ಲ). ಅದನ್ನು ಸಭೆಯಲ್ಲಿಯೇ ಅನೇಕರು ಖಂಡಿಸಿದ್ದರು. ಆನಂತರ, ಆ ಪ್ರಸ್ತಾಪವನ್ನು ಕುರಿತು ಆ ಕಾರ್ಯಕ್ರಮದ ಸರ್ವಾಧ್ಯಕ್ಷರಾದ ರಾಘವೇಂದ್ರ ಪಾಟೀಲರು ಎರಡು ಬಾರಿ ಕ್ಷಮೆಯನ್ನೂ ಕೇಳಿದ್ದರು. ಇಷ್ಟಾದ ಮೇಲೂ ಸಮಾರೋಪದ ಸಂದರ್ಭದಲ್ಲಿ ‘ಮೈಕ್, ಕುರ್ಚಿ ಕಿತ್ತೆಸೆದು ದಾಂದಲೆ’ ಮಾಡಿದುದು ಅನವಶ್ಯಕ ಹಾಗೂ ಖಂಡನೀಯ.

ಇದೇ ಬಗೆಯ ಅಸಹನೆ ಮೊದಲ ದಿನ, ಸಾಹಿತಿ ಲಕ್ಷ್ಮಣ ಗಾಯಕವಾಡ್ ತಮ್ಮ ಜನಾಂಗದ ಮೇಲಾಗಿರುವ-ಆಗುತ್ತಿರುವ ಅನ್ಯಾಯವನ್ನು ವಿವರಿಸುತ್ತಿದ್ದಾಗಲೂ ಕಂಡುಬಂದಿತು. ಅವರ ಭಾಷಣದ ಮಧ್ಯೆಯೇ ಕೆಲವರು ಎದ್ದು ನಿಂತು ‘ರಾಜಕೀಯದ ಬಗ್ಗೆ ಮಾತನಾಡಬೇಡಿ’ ಎಂದು ಆಗ್ರಹಿಸಿದ್ದರು. ಧಾರವಾಡದಲ್ಲಿಯೇ ಹತ್ತು ದಿನಗಳ ಮೊದಲು ನಡೆದ ಸಮ್ಮೇಳನದಲ್ಲಿಯೂ ಮಾಳವಿಕಾ ಅವರು ಮಾತನಾಡುತ್ತಿದ್ದಾಗ ಮಧ್ಯೆಯೇ ಕೆಲವರು ಅವರ ಮಾತುಗಳನ್ನು ಪ್ರತಿಭಟಿಸಿದ್ದರು. ಎಂದರೆ, ನಾವು ಒಪ್ಪದ ವಿಚಾರಗಳನ್ನು ಕೇಳಲೂ ಸಿದ್ಧರಿಲ್ಲದಷ್ಟು ಇಂದಿನ ಸಮಾಜದಲ್ಲಿ ಅಸಹನೆ ತುಂಬಿರುವುದು ಶೋಚನೀಯ.

ವೈಚಾರಿಕ ಅಸಹನೆಯ ಬೇರುಗಳು ಎಷ್ಟು ಆಳವಾಗಿಹೋಗಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬೇಕಾದ ಗೋಷ್ಠಿಗಳ ವಿಷಯಗಳನ್ನು ನಿರ್ಧರಿ
ಸಲು ಅಧ್ಯಕ್ಷರು ನೇಮಿಸಿದ್ದ ಸಮಿತಿಯಲ್ಲಿ ನಾನೂ ಇದ್ದೆ. ಸಮಿತಿಯ ಸಭೆಯಲ್ಲಿ ಸರ್ವಸಮ್ಮತಿಯಿಂದ, ‘ದೇಶದ್ರೋಹ’ ಎಂಬ ಅಪರಾಧವನ್ನು ಕುರಿತ ‘ಐಪಿಸಿ 124’ ಇದನ್ನು ಚರ್ಚೆಗಾಗಿ ಆಯ್ಕೆ ಮಾಡಿದ್ದೆವು. (ಬ್ರಿಟಿಷ್ ಸರ್ಕಾರ ತನ್ನ ಅಧಿಕಾರವನ್ನು ಬಿಗಿಪಡಿಸಿಕೊಳ್ಳಲು ರೂಪಿಸಿದ್ದ ಈ ಕಾನೂನು ಇಂದಿಗೂ ಹಾಗೆಯೇ ಇದೆ; ಇದರಡಿ 1922ರಲ್ಲಿ ಬಂಧಿತರಾಗಿದ್ದ ಗಾಂಧೀಜಿ, ಇದನ್ನು ‘ಪ್ರಜೆಗಳ ಸ್ವಾತಂತ್ರ್ಯಹರಣ ಮಾಡುವ ಉದ್ದೇಶದಿಂದ ರಚಿಸಲಾಗಿರುವ, ರಾಜಕೀಯ ಸಂಗತಿಗಳಿಗೆ ಸಂಬಂಧಿಸಿದ ಐಪಿಸಿಯ ಶಾಸನಗಳಲ್ಲಿ ಇದು (ಸೆಕ್ಷನ್ 124 ಎ) ರಾಜನಂತಿದೆ’ ಎಂದು ನ್ಯಾಯಾಲಯದಲ್ಲಿ ಮಂಡಿಸಿದ್ದರು. ಈ ಶಾಸನಕ್ಕೆ ತಿದ್ದುಪಡಿಗಳ ಅವಶ್ಯಕತೆ ಇದೆಯೆ ಇಲ್ಲವೆ ಎಂಬುದನ್ನು ಚರ್ಚಿಸುವುದು ಸಮಿತಿಯ ಉದ್ದೇಶವಾಗಿತ್ತು. ಸಮ್ಮೇಳನದ ಆಹ್ವಾನ ಪತ್ರಿಕೆ ಬಂದಾಗ ಈ ವಿಷಯವೇ ಇರಲಿಲ್ಲ. ನನಗೊಬ್ಬರು ತಿಳಿಸಿದಂತೆ, ಕರ್ನಾಟಕದ ಸಂಸದರೊಬ್ಬರು ಪರಿಷತ್ತಿನ ಅಧ್ಯಕ್ಷರನ್ನು
ಸಂಪರ್ಕಿಸಿ, ‘ಸಾಹಿತ್ಯಕ್ಕೂ ಕಾನೂನುಗಳಿಗೂ ಏನು ಸಂಬಂಧ? ಇದನ್ನು ತೆಗೆದುಹಾಕದಿದ್ದರೆ ನಮ್ಮೆಲ್ಲರ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರಂತೆ (ಬಹುಶಃ, ಸಮ್ಮೇಳನಕ್ಕೆ ಬರುವ ಜನರ ಕ್ಷೇಮ ಪರಿಗಣಿಸಿ ಅಧ್ಯಕ್ಷರು ಈ ವಿಷಯ ಕೈಬಿಟ್ಟಿರಬೇಕು).

ಅರ್ಥಾತ್, ಸಾಹಿತ್ಯಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ; ಸಾಹಿತ್ಯಕ್ಕೂ ಶಾಸನಸಂಹಿತೆಗೂ ಸಂಬಂಧವಿಲ್ಲ; ಸಾಹಿತ್ಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಅಧಿಕಾರದ ಹಮ್ಮಿನಲ್ಲಿ ಆಗ್ರಹಿಸತೊಡಗಿದರೆ, ‘ಧಾರವಾಡ ಸಾಹಿತ್ಯ ಸಂಭ್ರಮದ ಚಟುವಟಿಕೆ ಸಾಹಿತ್ಯಕ್ಕೆ ಸೀಮಿತಗೊಳಿಸದಿದ್ದರೆ ಸಂಭ್ರಮವೂ ಇರುವುದಿಲ್ಲ, ಸಾಹಿತಿಗಳೂ ಇರುವುದಿಲ್ಲ’ (ಪ್ರ.ವಾ., ಜ. 21) ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದರೆ, ಯಾವ ಬಗೆಯ ಸಾಹಿತ್ಯವು ಉಳಿಯುತ್ತದೆ, ಬೆಳೆಯುತ್ತದೆ? ಮತ್ತೊಬ್ಬರು ಅಧಿಕಾರಯುತವಾಗಿ ‘ಕವಿಗಳು, ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಕುರಿತು ಕವನಗಳನ್ನು ರಚಿಸಬೇಕು’ ಎಂದು ಅಪ್ಪಣೆ ಕೊಟ್ಟರೆ, ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗುವುದಿಲ್ಲ (ಪಂಪನ ಆದಿಪುರಾಣದಿಂದ ಇಂದಿನ ಮೌಖಿಕ ಮಲೆ ಮಾದೇಶ್ವರ ಕಾವ್ಯದವರೆಗೂ ಅಧಿಕಾರ-ಧರ್ಮ-ಲೈಂಗಿಕತೆ ಇವುಗಳನ್ನು ಒಳಗೊಳ್ಳದ ಯಾವ ಸಾಹಿತ್ಯ ಕೃತಿಯೂ ಇಲ್ಲ).

ಮತ್ತೆ ‘ಸಂಭ್ರಮ’ಕ್ಕೆ ಹಿಂತಿರುಗಿದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಜನ ಭಾಗವಹಿಸಿದ್ದರು; ಅವರೆಲ್ಲರಿಗೂ ಸಾಹಿತ್ಯ-ಸಮಾಜ ಕುರಿತು ಹೊಸತನ್ನು ತಿಳಿದುಕೊಳ್ಳಬೇಕು, ತಮಗಿರುವ ಸಂಶಯಗಳನ್ನು ಕುರಿತು ಮುಕ್ತವಾಗಿ ಚರ್ಚಿಸಬೇಕು ಎಂಬ ತಹತಹವಿತ್ತು. ಯಾವ ರಾಜಕೀಯ ಪಕ್ಷಕ್ಕೂ ಸೇರದ ಅಂತಹ ಯುವ ಜ್ಞಾನಪಿಪಾಸುಗಳಿಗೆ ಈ ಬಗೆಯ ಅಸಹನೆ ಎಂತಹ ಧಕ್ಕೆಯನ್ನುಂಟು ಮಾಡಿರಬೇಕು? ಯೋಚಿಸುತ್ತಾ ಹೋದಂತೆ ಮನಸ್ಸು ಖಿನ್ನವಾಗುತ್ತದೆ, ಕಣ್ಣ ಮುಂದೆ ಕತ್ತಲು ಕವಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT