ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‍ಗೆ ಆತ್ಮವಿಮರ್ಶೆಯ ಕಾಲ

Last Updated 12 ಮೇ 2019, 20:15 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮತದಾನ ಕೊನೆಯ ಸುತ್ತಿಗೆ ಬರುತ್ತಿದ್ದಂತೆ ಸ್ಪರ್ಧೆ ವಿಪರೀತ ತುರುಸಾಗುತ್ತಿದ್ದು, ಇದರ ಪರಿಣಾಮವೆಂಬಂತೆ ಪ್ರಧಾನಿ ನರೇಂದ್ರ ಮೋದಿ ‘ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ನಂಬರ್‌ ಒನ್ ಭ್ರಷ್ಟಾಚಾರಿ’ ಎಂದಿರುವುದು ಯಾವುದೇ ರೀತಿಯಲ್ಲಿ ಸದಭಿರುಚಿಯ ಮಾತು ಎನಿಸುವುದಿಲ್ಲ. ರಾಜೀವ್‍ ಭ್ರಷ್ಟಾಚಾರಿಯಾಗಿದ್ದರೆಂದು ಯಾವ ನ್ಯಾಯಾಲಯವೂ ಹೇಳದಿರುವುದರಿಂದ, ‘ಚೌಕೀದಾರನೇ ಕಳ್ಳ’ ಎಂದು ಸುಪ್ರೀಂ ಕೋರ್ಟೇ ಹೇಳಿದೆ ಎಂಬ ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಹೇಳಿಕೆಯ ವಿರುದ್ಧ ಕೋರ್ಟ್‌ ಮೆಟ್ಟಿ ಲೇರಿರುವ ಬಿಜೆಪಿಗೆ, ಪ್ರಧಾನಿಯ ಈ ಮಾತನ್ನು ಸಮ ರ್ಥಿಸಿಕೊಳ್ಳುವ ಯಾವ ನೈತಿಕ ಅಧಿಕಾರವೂ ಇಲ್ಲ.

ಆದರೆ ಕಾಂಗ್ರೆಸ್ ನಾಯಕರು ಮೋದಿಯವರ ಈ ಅನುಚಿತ ಮಾತನ್ನು ಅಲ್ಲಗಳೆಯುವ ನೆಪದಲ್ಲಿ ರಾಜೀವ್‍ ಅವರ ಬಿಂಬವನ್ನು ಅತಿಶಯಗೊಳಿಸಿ, ಅವರನ್ನೋರ್ವ ಸದುದ್ದೇಶದ ಪ್ರಗತಿಶೀಲ ಆಡ ಳಿತಗಾರ ಎಂಬಂತೆ ಪ್ರಸ್ತುತಗೊಳಿಸ ಹೊರಟಿರುವ ರೀತಿ ಸಮಸ್ಯಾತ್ಮಕವಾಗಿದೆ. ಇದರಲ್ಲಿ ಅದು ಇತ್ತೀಚಿನ ವರ್ಷಗಳಲ್ಲಿ ಎದುರಿಸುತ್ತಿರುವ ಅಸ್ತಿತ್ವದ ದೊಡ್ಡ ಬಿಕ್ಕಟ್ಟಿನ ಸಮಸ್ಯೆಯೂ ಅಡಗಿದೆ ಎನ್ನಿಸುತ್ತಿದೆ.

ಏಕೆಂದರೆ, ಭಾರತದ ಇತ್ತೀಚಿನ ರಾಜಕೀಯ ಚರಿತ್ರೆಯಲ್ಲಿ ಬಿಜೆಪಿ ಗಳಿಸಿರುವ ‘ಭಯಂಕರ’ ಜನಪ್ರಿಯತೆಯ ಬಹುಪಾಲು ಕೀರ್ತಿ ರಾಜೀವ್‍ ಅವ ರಿಗೇ ಸಲ್ಲಬೇಕು. ಕಾರಣಗಳು ಹೀಗಿವೆ: ಬಿಜೆಪಿ ತಾನು ದಿಢೀರನೆ ಬೆಳೆಯಲು ಹುಡುಕಿಕೊಂಡ ಬಾಬ್ರಿ ಮಸೀದಿ- ರಾಮಮಂದಿರ ಮತ್ತು ಮುಸ್ಲಿಂ ಮೂಲಭೂತವಾದ ಎಂಬ ರಾಜಕೀಯ ಕಾರ್ಯಕ್ರಮಗಳಿಗೆ ತಮ್ಮ ಮುಂದಾಲೋಚನೆ ಇಲ್ಲದ ಮತ್ತು ಸಂದರ್ಭದ ಒತ್ತಡಕ್ಕೆ ಮಣಿದ ದುರ್ಬಲ ರಾಜಕಾರಣದ ಮೂಲಕ ನೀರೆರೆದವರು ರಾಜೀವ್ ಅವರೇ. ದಶಕಗಳ ಕಾಲ ಮುಚ್ಚಲ್ಪಟ್ಟಿದ್ದ ಬಾಬ್ರಿ ಮಸೀದಿ ಆವರಣದ ಬೀಗ ತೆಗೆಸಿ ರಾಮಲಲ್ಲಾನ ಪೂಜೆಗೆ ಅನುಮತಿ ಕೊಟ್ಟವರು ರಾಜೀವ್‍. ಮುಂದಿನ ಹಂತವಾಗಿ ಮಂದಿರ ನಿರ್ಮಾಣಕ್ಕಾಗಿ ಕರಸೇವೆ ಮಾಡಲು ಬಿಜೆಪಿ ಮತ್ತವರ ಹಿಂದುತ್ವವಾದಿ ಮಿತ್ರ ಸಂಘಟನೆಗಳಿಗೆ ಅನುಮತಿ ನೀಡಿದವರೂ ರಾಜೀವ್‍ ಅವರೇ. ಹೀಗೆ ಪ್ರೋತ್ಸಾಹಿಸಲ್ಪಟ್ಟ ಹಿಂದೂ ಕೋಮುವಾದಿ ರಾಜಕಾರಣಕ್ಕೆ ಒಂದು ಸಮರ್ಥನೆ ಒದಗಿಸುವಂತೆ ಶಾ ಬಾನು
ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಿ, ಸುಪ್ರೀಂ ಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಸಂವಿಧಾನ ತಿದ್ದುಪಡಿ ತಂದು ಮುಸ್ಲಿಂ ಮೂಲಭೂತವಾದ ಕುರಿತ ಚರ್ಚೆಗೆ ಇಂಬು ಕೊಟ್ಟವರೂ ರಾಜೀವ್ ಅವರೇ. ಕಾಂಗ್ರೆಸ್‍ಗೆ ಇದು ಆತ್ಮವಿಮರ್ಶೆಯ ಕಾಲ.

ಈ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಇಂದು ಬಿಜೆಪಿಯ ಕೋಮುವಾದಿ ರಾಜಕಾರಣದ ಬಗ್ಗೆ ಬಗೆಬಗೆಯ ಭೀತಿ ಹುಟ್ಟಿಸುತ್ತಿರುವ ಮಾತುಗಳನ್ನಾಡು ವಾಗ ತಮ್ಮ ಎದೆ ಮುಟ್ಟಿ ನೋಡಿಕೊಳ್ಳಬೇಕಾಗುತ್ತದೆ. ಬಿಜೆಪಿಯ ‘ಧೂರ್ತ’ ರಾಜಕಾರಣದ ವಿರುದ್ಧ ಮಾತನಾಡುವ ಎಲ್ಲರ ಬಾಯಿ ಕಟ್ಟುವಂತಹ ಕಾಂಗ್ರೆಸ್‍ನ ಹಿಂದಿನ ದುರಾಚಾರಗಳ ಉದಾಹರಣೆಗ ಳನ್ನು ಬಿಜೆಪಿ ನಾಯಕರು ನೀಡಿ ಚರ್ಚೆಯನ್ನು ಮುಂದಕ್ಕೆ ಒಯ್ಯಲಾಗದಂತೆ ಮಾಡಿರುವುದಕ್ಕೂ ಕಾಂಗ್ರೆಸ್‍ನ ನಿಷ್ಠುರ ಆತ್ಮವಿಮರ್ಶೆಯ ಕೊರತೆಯೇ ಕಾರಣ. ಅದು ನೆಹರೂ ಕುಟುಂಬದ ರಾಜಕಾರಣ ಆಗಿರಬಹುದು, ತುರ್ತು ಪರಿಸ್ಥಿತಿ ಘೋಷಣೆಯಾಗಿರ ಬಹುದು, ಸಿಖ್ ಹತ್ಯಾಕಾಂಡವನ್ನು ಪರೋಕ್ಷವಾಗಿ ಸಮರ್ಥಿಸಿದ ರಾಜೀವ್‌ ಹೇಳಿಕೆ ಇರಬಹುದು, ಬಾಬ್ರಿ ಮಸೀದಿಯನ್ನು ಉರುಳಿಸುತ್ತಿದ್ದಾಗ ವಹಿಸಿದ್ದ ಸಂದೇಹಾಸ್ಪದ ಮೌನವೇ ಇರಬಹುದು ಅಥವಾ ಮನಮೋಹನ ಸಿಂಗ್ ಅವರ ಆಡಳಿತ ಕಾಲದ ಭ್ರಷ್ಟಾಚಾರ ಹಗರಣಗಳೇ ಇರಬಹುದು.

ನಿಜ, ಅತ್ಯಂತ ಹೆಚ್ಚಿನ ಕಾಲ ದೇಶವನ್ನು ಕಾಂಗ್ರೆಸ್ ಆಳಿರುವುದರಿಂದ ಅದರ ಮುಖದ ಮೇಲೆ ಹೆಚ್ಚು ಕಪ್ಪು ಕಲೆಗಳಿರುವುದು ಸಹಜ. ಆದರೆ, ತಾನು ಹೇಳುವ ಬಿಜೆಪಿಯ ಭೀತಿಯಿಂದ ದೇಶವನ್ನು ಪಾರು ಮಾಡುವ ನಿಜವಾದ ಕಳಕಳಿ ಕಾಂಗ್ರೆಸ್‌ಗೆ ಇದ್ದರೆ, ಅದು ಈ ಕಪ್ಪು ಕಲೆಗಳನ್ನು ಅಳಿಸಿಕೊಳ್ಳುವ ರೀತಿಯ ರಾಜಕಾರಣದ ಹೊಸ ಅಧ್ಯಾಯವನ್ನು ಆರಂಭಿಸಬೇಕು. ಅದಕ್ಕಾಗಿ ತನ್ನ ಚರಿತ್ರೆಯ ತಪ್ಪು-ಒಪ್ಪುಗಳ ಬಗ್ಗೆ ನಿಷ್ಠುರ ಆತ್ಮವಿಮರ್ಶೆಯ ಸಾರ್ವಜನಿಕ ಅಭಿಯಾನ ನಡೆಸುವ ದಿಟ್ಟತನ ತೋರಬೇಕು. ರಾಷ್ಟ್ರೀಯ ಹೋರಾಟ ಮತ್ತು ಆ ಮೂಲಕ ರಾಷ್ಟ್ರೀಯ ಶೀಲ ನಿರ್ಮಾಣದ ಮಹಾ ಪರಂಪರೆ ಕಾಂಗ್ರೆಸ್‍ಗಿದೆ. ಆದರೆ ಈ ಪರಂಪರೆಯನ್ನು ಹಾಳು ಮಾಡುತ್ತಿದೆ ಎಂದು ಬಿಜೆಪಿಯನ್ನು ದೂಷಿಸುತ್ತಿರುವ ಅದರ ಇಂದಿನ ರಾಜಕಾರಣ ಜನರಿಗೆ ಪ್ರಾಮಾಣಿಕವಾಗಿ ಕಾಣತೊಡಗುವುದು, ಬಿಜೆಪಿಯೊಂದಿಗೆ ಅದು ನಡೆಸುವ ಮಾತಿನ ವ್ಯರ್ಥ ಜಟಾಪಟಿಯಲ್ಲಲ್ಲ. ಬದಲಿಗೆ, ಬಿಜೆಪಿ ಇಂದು ಶ್ರಮ ಪಟ್ಟು ಕಟ್ಟಿ ನಿಲ್ಲಿಸಿರುವ ರಾಜಕೀಯ ಸಂಕಥನಕ್ಕೆ ಪ್ರತಿಯಾಗಿ ಜನರ ಹೃದಯವನ್ನು ಮುಟ್ಟಬಲ್ಲಂತಹ ಅಚಲವಾದ ತತ್ವ ಮತ್ತು ಅದಕ್ಕೆ ಕಟಿಬದ್ಧವಾದ ಸದಸ್ಯ ಸಮೂಹದ ಬಲದೊಂದಿಗೆ ತನ್ನದೇ ಒಂದು ಹೊಸ ಸಂಕಥನವನ್ನು ಕಟ್ಟತೊಡಗಿದಾಗ ಮಾತ್ರ. ನಿಜ ಹೇಳುವುದಾದರೆ, ಎಲ್ಲ ಪಕ್ಷಗಳಿಗಿಂತ ಕಾಂಗ್ರೆಸ್‍ಗೇ ಈ ಅರ್ಹತೆ ಮತ್ತು ಅವಕಾಶವಿರುವುದು. ಆದರೆ ಅದು ನೆಹರೂ-ಗಾಂಧಿಗಳ ಬದಲಾಗಿ ನೈತಿಕ ಸ್ಫೂರ್ತಿಗಾಗಿ ಮೂಲ ಗಾಂಧಿಗೆ ಮರಳಬೇಕು.

ಕಾಂಗ್ರೆಸ್ ಹೇಗೋ, ಯಾರೊಂದಿಗೋ, ಎಂಥದ್ದೋ ಅಧಿಕಾರದ ಹೊಂದಾಣಿಕೆ ಮಾಡಿ ಕೊಂಡು ಸದ್ಯ ಬದುಕುಳಿಯಬಹುದು. ಆದರೆ ಅದೆಂಥ ಬದುಕು ಮತ್ತು ಎಷ್ಟು ಕಾಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT