‘ಸಂಗತ’ದಲ್ಲಿ (ಮಾ. 7) ಡಾ. ಶಿವಮೂರ್ತಿ ಮುರುಘಾ ಶರಣರ ‘ಗಂಡಾದರೆ ದೊರೆ, ಹೆಣ್ಣಾದರೆ ಹೊರೆ; ಹೀಗೇಕೆ?’ ಲೇಖನದ ಆಶಯ ಒಳ್ಳೆಯದೇ. ಅವರು ನಿದರ್ಶನ ನೀಡಿ ವಿವರಿಸಿರುವಂತೆ ಗಂಡು ಸಂತಾನ ಬೇಕೆಂದು ಸೊಸೆಯಂದಿರಿಗೆ ಒತ್ತಾಯಿಸುವವರಲ್ಲಿ ಅತ್ತೆಯಂದಿರೂ ಇದ್ದಾರೆ. ಆದರೆ ಮಗನಿಂದಲೇ ಮೋಕ್ಷ, ಮಗನೇ ಮುಪ್ಪಿನ ಕಾಲಕ್ಕೆ ನೋಡಿಕೊಳ್ಳುವವನು, ಗಂಡುಮಕ್ಕಳೇ ಅಪ್ಪಅಮ್ಮಂದಿರ ಉತ್ತರಕ್ರಿಯಾದಿಗಳನ್ನು ಮಾಡುವವರು ಎಂಬ ಮನೋಧರ್ಮ ನಮ್ಮಲ್ಲಿ ಇರುವವರೆಗೆ ಗಂಡು ಸಂತಾನಕ್ಕೆ ಅತ್ತೆ ಒತ್ತಾಯ ಮಾಡುವ ಸಾಮಾಜಿಕ ವಾತಾವರಣ ಬದಲಾಗುವುದಿಲ್ಲ.
ಅತ್ತೆ ಏಕೆ ಸೊಸೆಗೆ ಮಗನನ್ನೇ ಹೆತ್ತುಕೊಡುವಂತೆ ಒತ್ತಾಯಿಸುತ್ತಿದ್ದಾಳೆ ಎಂದು ಹಿನ್ನೆಲೆ ನೋಡಬೇಕಾಗುತ್ತದೆ. ಏಕೆಂದರೆ ಒತ್ತಾಯಿಸುತ್ತಿರುವವಳು ಅತ್ತೆಯಾದರೂ, ಇಲ್ಲಿ ಅತ್ತೆ ಒಂದು ಸಾಧನ ಮಾತ್ರ. ನಿಜವೆಂದರೆ ಅತ್ತೆಯ ಮೂಲಕ ನಮ್ಮ ಸಾಮಾಜಿಕ ಮನೋಧರ್ಮ ಹಾಗೂ ನಮ್ಮ ಸಾಮಾಜಿಕ ಸ್ಥಿತಿಗತಿಗಳು ಹೀಗೆ ಗಂಡುಮಗುವನ್ನೇ ಹೆತ್ತು ಕೊಡುವಂತೆ ಸೊಸೆಗೆ ಒತ್ತಾಯಿಸುತ್ತಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಇಲ್ಲಿ ನಾವು ಬದಲಿಸಬೇಕಾಗಿದ್ದು ‘ಮಗನಿಂದಲೇ ಮೋಕ್ಷ’ ಎಂಬ ಸಾಮಾಜಿಕ ಮನೋಧರ್ಮವನ್ನು. ಒಂದು ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಮಹಿಳೆಯರು ಮತ್ತು ಪುರುಷರು ಇಬ್ಬರ ಮೇಲೂ ಇರುತ್ತದೆ, ಮಹಿಳೆಯರು ಮಾತ್ರವಲ್ಲ ಅಥವಾ ಕೇವಲ ಪುರುಷರದೂ ಅಲ್ಲ. ತಾಯಿ ಎಂದರೆ ಜಗದ್ರಕ್ಷಕಿ, ಇಡೀ ಜಗತ್ತನೇ ಕಾಯುವವಳು ಎಂಬಿತ್ಯಾದಿ ಸವಕಲು ಹೇಳಿಕೆಗಳಿಂದ ಹೊರಬಂದು, ತಾಯಿ ಅಥವಾ ಒಟ್ಟಾರೆಯಾಗಿ ಮಹಿಳೆಯರು ಎಂದರೆ ಪುರುಷರ ಹಾಗೆಯೇ ಒಂದು ಮಾನವಪ್ರಾಣಿ ಅಷ್ಟೇ, ಅದಕ್ಕಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ ಎಂಬ ಆಲೋಚನೆಗಳಿಗೆ ನಾವು ತೆರೆದುಕೊಳ್ಳಬೇಕಿದೆ.
ಲಿಂಗಾನುಪಾತವನ್ನು ಕಾಯ್ದುಕೊಳ್ಳುವುದು ಮಹಿಳೆ ಮತ್ತು ಪುರುಷ ಸೇರಿದಂತೆ ಇಡೀ ಒಂದು ನಾಗರಿಕ ಸಮಾಜದ ಜವಾಬ್ದಾರಿ. ಈಗಾಗಲೇ ಮನೆ ಹೊರಗಿನ ಮತ್ತು ಒಳಗಿನ ಕೆಲಸಗಳಲ್ಲಿ ಬಸವಳಿಯುತ್ತಿರುವ ಮಹಿಳೆಯರಿಗೆ ‘ಈ ಭುವಿಯಲ್ಲಿ ಮಹಿಳಾ ಸಂತತಿ ಸದಾ ಮುಂದುವರಿಯುವಂತೆ ನೋಡಿಕೊಳ್ಳುವ ಜವಾಬ್ದಾರಿಯು ನಿನ್ನದೇ, ನಿನ್ನದೇ’ ಎಂದು ಅವಳೊಬ್ಬಳ ಮೇಲೆ ಜವಾಬ್ದಾರಿ ಹೊರೆಸುವ ಬದಲಿಗೆ ‘ಗಂಡುಮಗುವಿನಂದಲೇ ಮೋಕ್ಷ’ ಎಂಬ ಸಾಮಾಜಿಕ ಮನೋಭಾವವನ್ನು ಬದಲಿಸಲು ಎಲ್ಲರೂ ಸೇರಿ ಪ್ರಯತ್ನಿಸುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ.
ವಿಪರ್ಯಾಸವೆಂದರೆ ಜಗದ್ರಕ್ಷಕಿ, ಇಡೀ ಜಗತ್ತನ್ನೇ ಕಾಯುವವಳು ಎಂದೆಲ್ಲ ಪುರುಷರು ವರ್ಣಿಸುವ ಮಹಿಳೆಯರು ತನ್ನನ್ನು ಅಂದರೆ ತನ್ನ ದೇಹವನ್ನು ರಕ್ಷಿಸಿಕೊಳ್ಳಬೇಕು ಎಂದೂ ನಾವು ಬಯಸುತ್ತೇವೆ. ಮುಂಬೈನಲ್ಲಿ ಪತ್ರಕರ್ತೆಯ ಮೇಲೆ ಅತ್ಯಾಚಾರ ನಡೆದ ನಂತರ ಹೆಚ್ಚಿನ ಜನರು, ‘ಅಯ್ಯೋ, ಅಷ್ಟ್ ಸಾಯಂಕಾಲ ಅಂಥ ನಿರ್ಜನ ಪ್ರದೇಶಕ್ಕೆ ಅವಳ್ಯಾಕೆ ಹೋಗಬೇಕಿತ್ತು’ ಎಂದೇ ಅಭಿಪ್ರಾಯಪಟ್ಟಿದ್ದರು.
ಪುರುಷರು ಅತ್ಯಾಚಾರ ಅಥವಾ ದೈಹಿಕ ದೌರ್ಜನ್ಯ ಎಸಗದಂತೆ ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕಿದೆ ಎಂಬುದನ್ನು ಆಲೋಚಿಸುವ ಬದಲಿಗೆ ಮಹಿಳೆಯರು ಸಂಜೆ, ರಾತ್ರಿ ಒಬ್ಬರೇ ಓಡಾಡುವುದು ನಿಲ್ಲಿಸಲಿ, ಪ್ರಚೋದಕ ರೀತಿಯಲ್ಲಿ ಬಟ್ಟೆ ಧರಿಸುವುದು ನಿಲ್ಲಿಸಲಿ, ಭಾರತೀಯ ನಾರಿಯರಾಗಿರಲಿ ಎಂದೆಲ್ಲ ಹತ್ತು ಹಲವು ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದೇವೆ.
ಪುರುಷರಿಗೆ ಸಂಯಮದ ಪಾಠ ಹೇಳುವ ಬದಲಿಗೆ, ಮಹಿಳೆಯರೇ ಎಚ್ಚರಿಕೆಯಿಂದ ಇರಲಿ ಎಂದು ಒತ್ತಿ ಹೇಳುತ್ತೇವೆ. ಈ 21ನೇ ಶತಮಾನದಲ್ಲಿಯೂ ನಾವು ಮಹಿಳೆಯರಿಗೇ ಇನ್ನೂ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದೇವೆ, ಅತ್ಯಾಚಾರವಾದ ಸಂದರ್ಭಗಳಲ್ಲಿ ಮಹಿಳೆಯರ ಮೇಲೇ ಗೂಬೆ ಕೂರಿಸುತ್ತಿದ್ದೇವೆ ಎಂದಾದ ಮೇಲೆ ಹೆಣ್ಣು ಹೆತ್ತವರ ಅಳುಕು ಅಳಿಯುವುದಾದರೂ ಹೇಗೆ? ಸಂಸ್ಕೃತಿ ರಕ್ಷಣೆಯ ಹೊಣೆಯನ್ನು ಹೆಣ್ಣಿಗೇ ಸೀಮಿತ ಮಾಡಬಾರದು ಎಂಬ ಹೊಸ ಚಿಂತನೆಯನ್ನು ಬಿತ್ತುವುದು ಏಕೆ ಇಂದಿಗೂ ಸಾಧ್ಯವಾಗಿಲ್ಲ...?
ಮಹಿಳೆಯರನ್ನು ನೋಡುವ ಪುರುಷರ ದೃಷ್ಟಿಕೋನವನ್ನು ಬದಲಿಸುವ, ಪುರುಷರಿಗೂ ಸಂಯಮದ ಪಾಠ ಕಲಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂಘಟನೆಗಳು, ಶೈಕ್ಷಣಿಕ ವ್ಯವಸ್ಥೆಗಳು ಆಲೋಚಿಸುವುದು ಅಗತ್ಯವಿದೆ. ಋತುಮತಿಯಾಗುವ ಹುಡುಗಿಗೆ ಹೈಸ್ಕೂಲುಗಳಲ್ಲಿ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಳ್ಳುವ ಹಾಗೆಯೇ, ಹುಡುಗರಿಗೆ ಮನಸ್ಸಿನ ಹತೋಟಿ, ಹೆಣ್ಣು ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಇತ್ಯಾದಿ ಸೇರಿದಂತೆ ಲೈಂಗಿಕ ವಿಚಾರಗಳ ಬಗ್ಗೆ ಪ್ರತ್ಯೇಕ ತರಗತಿಗಳನ್ನು ನಡೆಸುವುದು ಅಗತ್ಯವಿದೆ. ಇದೆಲ್ಲವನ್ನೂ ಶಿಕ್ಷಣ ಇಲಾಖೆಯೇ ಮಾಡಬೇಕು ಎಂದೂ ಅಲ್ಲ, ಶೈಕ್ಷಣಿಕ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಸಂಘ–ಸಂಸ್ಥೆಗಳು ಮಾಡಬಹುದು.
ಮಹಿಳೆ ಎಂದರೆ ದೇವಿ, ಜಗದ್ರಕ್ಷಕಿ ಎಂದೋ ಅಥವಾ ಮಹಿಳೆ ಎಂದರೆ ಪುರುಷ ವ್ಯಾಖ್ಯಾನಿಸಬಹುದಾದ ಒಂದು ಸಂಗತಿ, ಪುರುಷನಿಗಿಂತ ಕನಿಷ್ಠ ಎಂದೋ, ಎರಡು ಅತಿಗಳಲ್ಲಿ ನಿಂತು ಮಾತನಾಡುವ ಬದಲಿಗೆ ಪುರುಷ ಮತ್ತು ಮಹಿಳೆ ಇಬ್ಬರೂ ಭೂಮಿಯಲ್ಲಿ ಬೇರೆಲ್ಲ ಪ್ರಾಣಿಗಳಂತೆಯೇ ಇರುವ ಮನುಷ್ಯ ಪ್ರಾಣಿಗಳು, ಸಮಾನ ವ್ಯಕ್ತಿಗಳು ಎಂಬ ಸಾಮಾಜಿಕ ಮನಸ್ಥಿತಿ ನಿರ್ಮಾಣಕ್ಕೆ ಕಾರ್ಯಸಾಧ್ಯ ಪರಿಹಾರಗಳನ್ನು ಆಲೋಚಿಸೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.