ಬೆಂಗಳೂರು, ಜೂನ್ 3– ‘ನಲವತ್ತೊಂಬತ್ತು ವರ್ಷಗಳಲ್ಲಿ ನ್ಯಾಯ ಸಿಗದವರಿಗೆ ನ್ಯಾಯ ದೊರಕಿಸಿಕೊಡು ವುದು ನನ್ನ ಮೂಲ ಗುರಿ. ನಾನು ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆ ಎಂಬುದು ಮುಖ್ಯವಲ್ಲ. ಆದರೆ ಅಧಿಕಾರ ಬಿಟ್ಟು ಬರುವಾಗ ಈ ಸಾಮಾನ್ಯ ರೈತನ ಮಗ ಜನಸಾಮಾನ್ಯರಿಗೆ ಏನಾದರೂ ಒಳ್ಳೆಯದು ಮಾಡಿದ ಎನ್ನುವ ಭಾವನೆ ಮೂಡಿದರೆ ಸಾಕು’.
‘ಕುಡಿಯುವ ನೀರು, ತಲೆಯ ಮೇಲೊಂದು ಸೂರು, ಓಡಾಟಕ್ಕೆ ಒಳ್ಳೆಯ ರಸ್ತೆ, ಮಕ್ಕಳಿಗೆ ಶಾಲೆ– ಶಿಕ್ಷಕರಿಲ್ಲದೆ ನರಳುತ್ತಿರುವ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕೆ ನನ್ನ ಆದ್ಯತೆ. ಇದನ್ನು ವಿರೋಧಿಸುವವರು ಯಾರು?’
ದೇಶದ 12ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಕೇಳುವ ಪ್ರಶ್ನೆ ಇದು. ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿಯವರು ಭಾನುವಾರ ರಾತ್ರಿ ‘ಪ್ರಜಾವಾಣಿ’ ಜತೆ ಮಾತನಾಡಿದರು.
ಸಚಿವರ ಪಟ್ಟಿ ಸಹಿತ ಪಟೇಲ್ ದೆಹಲಿಗೆ
ಬೆಂಗಳೂರು, ಜೂನ್ 3– ಮಂತ್ರಿಮಂಡಲ ರಚನೆ ಬಗ್ಗೆ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜತೆಗೆ ಚರ್ಚಿಸಿ, ಸಚಿವರಾಗುವವರ ಪಟ್ಟಿಗೆ ಒಪ್ಪಿಗೆ ಪಡೆದುಬರಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ತೆರಳಿದರು.