‘ಮೃಗಾಲಯದಲ್ಲಿ ನೌಕರನ ರಕ್ಷಣೆಗೆ ಗುಂಡಿಟ್ಟು ಹುಲಿಯ ಹತ್ಯೆ’
ಮೈಸೂರು, ಅ. 5– ಹುಲಿಯ ಬಾಯಿಂದ ನೌಕರನೊಬ್ಬನನ್ನು ಪಾರು ಮಾಡುವ ಪ್ರಯತ್ನದಲ್ಲಿ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಎರಡು ವರ್ಷದ ಹುಲಿಯೊಂದನ್ನು ಗುಂಡಿಟ್ಟು ಕೊಲ್ಲಲಾಯಿತು.
ಆಕಸ್ಮಿಕ ಘಟನೆಯಲ್ಲಿ ಹುಲಿಯ ಹಿಡಿತಕ್ಕೆ ಸಿಕ್ಕ ಮೃಗಾಲಯದ ನೌಕರ ಊಟಿ ಕೃಷ್ಣ ತೀವ್ರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈತನ ಕಾಲನ್ನು ಹುಲಿ ಗಾಯಗೊಳಿಸಿದೆ.
ಇನ್ಸಾಟ್– 2ಡಿ ಉಪಗ್ರಹ ಪೂರ್ಣ ಸ್ಥಗಿತ
ಬೆಂಗಳೂರು, ಅ. 5– ವಿದ್ಯುತ್ ಕೋಶದ ತೊಂದರೆಯಿಂದ ನಿನ್ನೆ ರಾತ್ರಿ ಎರಡನೇ ಬಾರಿ ಭೂ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡ ಇನ್ಸಾಟ್– 2ಡಿ ಉಪಗ್ರಹದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ವಿದ್ಯುತ್ತಿನ ವ್ಯತ್ಯಯದಲ್ಲಿ ಉಂಟಾದ ತೊಂದರೆಯಿಂದಾಗಿ ಶಕ್ತಿಯ ಹಂಚಿಕೆಯ ಹಾಗೂ ಮುನ್ನುಗ್ಗುವ ಶಕ್ತಿಯನ್ನು ಕಳೆದುಕೊಂಡು ತಾನು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ನಿರ್ವಹಿಸಲು ಉಪಗ್ರಹ ಅಸಮರ್ಥವಾಗಿರುವುದರಿಂದ ಅದರ ಸೇವೆಯನ್ನು ಕೈಬಿಡಲಾಗಿದೆ ಎಂದು ಇಸ್ರೊ ಪ್ರಕಟಿಸಿದೆ.