ಮುಂಬೈ, ಮೇ 1 (ಯುಎನ್ಐ,ಪಿಟಿಐ)– ‘ನ್ಯಾಯಾಲಯಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಯಾವುದೇ ವ್ಯಕ್ತಿಗೆ ತಮ್ಮ ಸಂಪುಟದಲ್ಲಿ ಸ್ಥಾನವಿಲ್ಲ’ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಕಟಿಸಿದರು.
ಇಲ್ಲಿನ ರಾಜಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ‘ಆರೋಪಗಳನ್ನು ನ್ಯಾಯಾಲಯ ಸ್ಥಿರೀಕರಿಸದ ಹೊರತು ಯಾವುದೇ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಸಾಬೀತು ಮಾಡುವುದು ಕಷ್ಟ’ ಎಂದರು.
ರಾಮಕೃಷ್ಣ ಹೆಗಡೆ ಹಾಗೂ ರಾಂಜೇಠ್ಮಲಾನಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಜಯಲಲಿತಾ ಅವರ ಆಗ್ರಹದ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಸಚಿವರಿಂದ ವಿವರಣೆ ಕೇಳಿದ್ದೇನೆ. ಅಗತ್ಯವಾದರೆ ಈ ವಿಷಯದಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು’ ಎಂದು ಅವರು ನುಡಿದರು.
ಕುರ್ಲ– ಮಂಗಳೂರು ನಡುವೆ ಹೊಸ ರೈಲು ಜೂನ್ 1ರಿಂದ ಆರಂಭ
ರತ್ನಾಗಿರಿ (ಮಹಾರಾಷ್ಟ್ರ), ಮೇ 1 (ಯುಎನ್ಐ, ಪಿಟಿಐ)– ‘ಈ ವರ್ಷದ ಜೂನ್ ಒಂದರಿಂದಲೇ ಕುರ್ಲ– ಮಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭವಾಗಲಿದೆ’ ಎಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಇಂದು ಇಲ್ಲಿ ಪ್ರಕಟಿಸಿದರು.
ಆರಂಭದಲ್ಲಿ ವಾರಕ್ಕೆ ಮೂರು ಬಾರಿ ಈ ರೈಲು ಸಂಚರಿಸಲಿದೆ. ರೈಲು ಮಾರ್ಗ ಕೊರತೆ ಇರುವ ಪ್ರದೇಶ ಹಾಗೂ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.