ಆಖೈರುಗೊಳ್ಳುತ್ತಿರುವ ರಾಷ್ಟ್ರೀಯ ಕೃಷಿ ನೀತಿ ಕರಡು
ನವದೆಹಲಿ, ಡಿ. 27– ರಾಷ್ಟ್ರೀಯ ಕೃಷಿ ನೀತಿಯ ಕರಡನ್ನು ಕೇಂದ್ರ ಸರ್ಕಾರ
ಆಖೈರುಗೊಳಿಸುತ್ತಿದೆ.
ನೈಸರ್ಗಿಕ ಮೂಲಗಳು ಮತ್ತು ಜಲಸಂಪನ್ಮೂಲದ ಸಮರ್ಥ ಬಳಕೆ ಮೂಲಕ ಆಹಾರ ಸ್ವಾವಲಂಬನೆ, ಕೃಷಿಗೆ ಉದ್ಯಮಸ್ಥಾನ ನೀಡಿಕೆ ಮತ್ತು ರೈತರ ಬೆಳೆಗಳಿಗೆ ನ್ಯಾಯವಾದ ಬೆಲೆ ಲಭ್ಯವಾಗಿಸುವ ಹಲವಾರು ಅಂಶಗಳನ್ನು ಇದು ಒಳಗೊಂಡಿದೆ.
ಈಗ ಸಿದ್ಧವಾಗುತ್ತಿರುವ ನೀತಿಯ ಪ್ರಕಾರ, ಭೂಮಿ ಮತ್ತು ಜಲಸಂಪನ್ಮೂಲ ವನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಮೂಲಕ ನೈಸರ್ಗಿಕ ಮೂಲಗಳು ಮತ್ತು
ಜೀವವೈವಿಧ್ಯ ಸಂರಕ್ಷಣೆ, ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿ
ಇಟ್ಟುಕೊಂಡು ಆಹಾರ ಸ್ವಾವಲಂಬನೆಗೆ ಆದ್ಯತೆ ನೀಡಲಾಗುತ್ತಿದೆ.
ದಳ ಬಿಕ್ಕಟ್ಟು: ಶರದ್ ಮಾತುಕತೆ, ಇಂದು ಪ್ರಾರಂಭ
ನವದೆಹಲಿ, ಡಿ. 27 – ಮುಖ್ಯಮಂತ್ರಿ ಜೆ.ಎಚ್.ಪಟೇಲ್ ನಾಯಕತ್ವ ಬದಲಾವಣೆಯ ವಿವಾದ ಸೇರಿದಂತೆ ಕಳೆದ ಮೂರು ತಿಂಗಳಿಂದ ನನೆಗುದಿಗೆ ಬಿದ್ದಿರುವ ಕರ್ನಾಟಕ ಜನತಾದಳದ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜತೆ ಚರ್ಚಿಸಲಿದ್ದಾರೆ.