ನೀರು ಬಿಡದಿರಲು ರಾಜ್ಯದ ದೃಢ ಸಂಕಲ್ಪ ಬೆಂಗಳೂರು, ಡಿ. 27– ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಇಂದು ಇಲ್ಲಿ ಸೇರಿದ್ದ ಸರ್ವ ಪಕ್ಷಗಳ ಸಭೆಯು ಸುದೀರ್ಘವಾಗಿ ಚರ್ಚಿಸಿ ರಾಜ್ಯದ ರೈತರ ಹಿತ ರಕ್ಷಿಸಲು ಒಮ್ಮತದ ನಿಲುವು ತೆಗೆದುಕೊಳ್ಳಲು ನಿರ್ಧರಿಸಿತು. ಇಂದಿನ ಸಭೆ ಅಪೂರ್ಣಗೊಂಡಿದ್ದು ನಾಳೆ ಮುಂದುವರಿಯಲಿದೆ.
ತಮಿಳುನಾಡಿಗೆ 11 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಲಿ ನೀಡಿರುವ ಆದೇಶ ಜಾರಿಗೊಳಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ನಾಳೆ ವಿಚಾರಣೆಗೆ ಬರಲಿದ್ದು, ಅಲ್ಲಿ ಬರುವ ತೀರ್ಪು ಗಮನಿಸಿ ಸರ್ವಪಕ್ಷಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿವೆ.
ಖ್ಯಾತ ಲೇಖಕಿ ಸಾವಿತ್ರಮ್ಮ ನಿಧನ ಬೆಂಗಳೂರು, ಡಿ. 27– ಕನ್ನಡದ ಖ್ಯಾತ ಲೇಖಕಿ ಎಚ್.ವಿ. ಸಾವಿತ್ರಮ್ಮ ಇಂದು ಸಂಜೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 82 ವರ್ಷವಾಗಿತ್ತು.
ಕಾದಂಬರಿಗಾರ್ತಿಯಾಗಿ, ಅನುವಾದಕಿಯಾಗಿ, ಸಣ್ಣ ಕತೆಗಾರ್ತಿಯಾಗಿ ಎಚ್.ವಿ. ಸಾವಿತ್ರಮ್ಮ ಅವರು ಸಲ್ಲಿಸಿದ ಸೇವೆ ಅನುಪಮವಾದುದು.
1992ರಲ್ಲಿ ನೀಡಲಾದ ಕರ್ನಾಟಕ ಲೇಖಕಿಯರ ಸಂಘದ ‘ಅನುಪಮ’ ಪ್ರಶಸ್ತಿಯನ್ನು ಗಳಿಸಿದ ಮೊದಲ ಲೇಖಕಿ ಇವರು. ‘ಸೀತೆ, ರಾಮ, ರಾವಣ’ (1980), ‘ವಿಮುಕ್ತಿ’ (1990) ಇವರ ಕಾದಂಬರಿಗಳು.