ಪ್ರತಿ ಪಕ್ಷ ಧರಣಿ, ಗದ್ದಲ: ರಾಜ್ಯಪಾಲರ ಭಾಷಣ ಮೊಟಕು
ಬೆಂಗಳೂರು, ಮಾರ್ಚ್ 9– ವಿರೋಧ ಪಕ್ಷದ ಸದಸ್ಯರ ಧರಣಿ, ಪ್ರತಿಭಟಣೆ, ಜಾಗಟೆಯ ಸದ್ದು–ಗದ್ದಲಗಳೊಂದಿಗೆ ಕೂಡಿದ್ದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಧಿಕ್ಕಾರ, ಆರ್ಭಟಗಳಿಂದ ಕುಪಿತರಾದ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ಹೊರ ನಡೆದ ಅಪರೂಪದ ಘಟನೆ ಇಂದು ನಡೆಯಿತು.
ಪ್ರತಿಭಟನೆ: ಮಧ್ಯಾಹ್ನ 12.15ಕ್ಕೆ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ತಮ್ಮ ಲಿಖಿತ ಭಾಷಣವನ್ನು ಓದಲು ಪ್ರಾರಂಭಿಸುತ್ತಿದ್ದಂತೆಯೇ ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಅಡಚಣೆಗಳು ಕೊನೆ ಮೊದಲು ಇಲ್ಲದಂತೆ ಮುಂದುವರೆಯಿತು.
ಕಾಂಗ್ರೆಸ್ ಅಧ್ಯಕ್ಷತೆಗೆ ರಾಜೀನಾಮೆ: ಕೇಸರಿ ನಿರ್ಧಾರ
ನವದೆಹಲಿ, ಮಾರ್ಚ್ 9– ಸೋನಿಯಾ ಗಾಂಧಿ ಬೆಂಬಲಿಗರ ತೆರೆಮರೆ ರಾಜಕೀಯದಿಂದ ತೀವ್ರ ನೊಂದಿರುವ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಇಂದು ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಪಕ್ಷದಲ್ಲಿ ದಿಗ್ಭ್ರಮೆ ಉಂಟು ಮಾಡಿದರು. ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಂತೆ ಅವರು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದರು.
ತಮ್ಮ ಈ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಕೇಸರಿ ಅವರು, ಆದಷ್ಟು ಕೂಡಲೇ ಎಐಸಿಸಿ ಸಮಾವೇಶವನ್ನು ಕರೆದು, ಈ ಬಗೆಗೆ ಕೈಗೊಂಡಿರುವ ತೀರ್ಮಾನದ ಕಾರಣಗಳನ್ನು ತಮ್ಮನ್ನು ಆಯ್ಕೆ ಮಾಡಿರುವ ಪ್ರತಿನಿಧಿಗಳ ಮುಂದೆ ಇಡುವುದಾಗಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.