ಕಾರ್ತಿಹೇನಾ, ಅ. 19– ಅಲಿಪ್ತ ರಾಷ್ಟ್ರಗಳ ಶೃಂಗಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಬುಧವಾರ ಇಲ್ಲಿ ತರಾಟೆಗೆ ತೆಗೆದುಕೊಂಡರು.
‘ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗದಿಂದ ತೊಲಗುವಂತೆ’ ಅವರು ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ಇದನ್ನು ಬಿಟ್ಟರೆ ಕಾಶ್ಮೀರದಲ್ಲಿ ಯಾವುದೇ ವಿವಾದ ಇಲ್ಲ ಎಂದು ಅಲಿಪ್ತ ಶೃಂಗಸಭೆಯಲ್ಲಿ ನರಸಿಂಹರಾವ್ ಹೇಳಿದರು.
ಪೊಲೀಸರ ನೇಮಕಕ್ಕೆ ಪ್ರತ್ಯೇಕ ಮಂಡಲಿ
ಬೆಂಗಳೂರು, ಅ. 19– ಪೊಲೀಸರ ನೇಮಕಾತಿಗಾಗಿ ತಮಿಳುನಾಡಿನ ಮಾದರಿಯಲ್ಲಿ ಪ್ರತ್ಯೇಕ ನೇಮಕಾತಿ ಮಂಡಲಿ ರಚಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದುಗೃಹ ಸಚಿವ ಪಿ.ಜಿ.ಆರ್ ಸಿಂಧ್ಯ ಅವರು ಇಂದು ಇಲ್ಲಿ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಇಲಾಖಾ ತನಿಖೆಗೆ ಒಳಪಟ್ಟ ಪ್ರಕರಣಗಳನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.