ಬಾಂಗ್ಲಾ ದೇಶಕ್ಕೆ ನಿರಾಶ್ರಿತರ ವಾಪಸ್: ಭಾರತದ ದೃಢ ನಿರ್ಧಾರ
ನವದೆಹಲಿ, ಜೂನ್ 17– ಬಾಂಗ್ಲಾದೇಶ ದಲ್ಲಿ ಪರಿಸ್ಥಿತಿ ಸುಧಾರಿಸಿದ ಕೂಡಲೇ ನಿರಾಶ್ರಿತರನ್ನು ವಾಪಸು ಕಳುಹಿಸಿಬಿಡಲು ಭಾರತ ನಿರ್ಧರಿಸಿದೆ ಎಂದು ಪ್ರಧಾನಿ ಇಂದಿರಾಗಾಂಧಿ ಇಂದು ಮತ್ತೆ ಸ್ಪಷ್ಟಪಡಿಸಿದರು.
ವೃತ್ತ ಪತ್ರಿಕೆಗಳ ಆರ್ಥಿಕ ವಿಭಾಗದ ಸಂಪಾದಕರುಗಳೊಂದಿಗೆ ಅವರು ಮಾತನಾಡುತ್ತಿದ್ದರು. ಒಂದು ಗಂಟೆ ಕಾಲ ನಡೆದ ಈ ಸಭೆಯಲ್ಲಿ ನಿರಾಶ್ರಿತರ ವಲಸೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು.
60 ಲಕ್ಷಕ್ಕೂ ಹೆಚ್ಚಿರುವ ಬಾಂಗ್ಲಾ ನಿರಾಶ್ರಿತರು ಭಾರತಕ್ಕೆ ಹೊರಲಾರದ ಹೊಣೆಯಾಗಿದ್ದಾರೆ. ಇಂಥ ಹೊಣೆಯನ್ನು ಇಷ್ಟು ಅತ್ಯಲ್ಪ ಅವಧಿಯಲ್ಲಿ ಹೊರುವ ಸಂದರ್ಭ ವಿಶ್ವದಲ್ಲಿ ಯಾವ ರಾಷ್ಟ್ರಕ್ಕೂ ಉಂಟಾಗಿರಲಿಲ್ಲ ಎಂದೂ ಪ್ರಧಾನಿ ನುಡಿದರು.
ಕಾಸರಗೋಡಿನಲ್ಲಿ ಹರಿಜನರಿಗೆ ಚಿಪ್ಪಿನಲ್ಲಿ ಟೀ
ಕೊಚ್ಚಿ, ಜೂನ್ 17– ಕೇರಳದ ಕಾಸರಗೋಡು ತಾಲ್ಲೂಕಿನಲ್ಲಿ ಹರಿಜನ ಮತ್ತು ಗಿರಿಜನರು ಇಂದೂ ಕೂಡ ಅಸ್ಪೃಶ್ಯತೆಯಿಂದ ತೊಂದರೆಗೀಡಾಗಿದ್ದಾರೆ.
ಕೇರಳದ ಹರಿಜನ ಕ್ಷೇಮಾಭ್ಯುದಯ ಖಾತೆ ಸಚಿವ ಪಿ.ಕೆ. ರಾಘವನ್ ಅವರು ಇಂದು ಈ ವಿಷಯವನ್ನು ಇಲ್ಲಿ ಪ್ರಕಟಿಸುತ್ತ ಈ ಜನರಿಗೆ, ಟೀ ಅಂಗಡಿ ಮತ್ತು ಹೋಟೆಲ್ಗಳಲ್ಲಿ ಗಾಜಿನ ಲೋಟಗಳಿಗೆ ಬದಲು ತೆಂಗಿನ ಚಿಪ್ಪುಗಳಲ್ಲಿ ಟೀ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಅಸ್ಪೃಶ್ಯತೆ ಕುರಿತ ಕಾನೂನನ್ನು ಜಾರಿಗೆ ತರಲು ತೀವ್ರ ಕ್ರಮ ಕೈಗೊಳ್ಳುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿರುವುದಾಗಿ ಅವರು ನುಡಿದರು.