ಕಳಪೆ ಕೀಟನಾಶಕ ಸಂಸ್ಥೆ ಮಾಲೀಕರಿಗೆ ಜೈಲು ಶಿಕ್ಷೆ
ಬೆಂಗಳೂರು, ಮಾರ್ಚ್ 21– ಕಳಪೆ ಹಾಗೂ ನಕಲಿ ಕೀಟ ನಾಶಕಗಳನ್ನು ತಯಾರಿಸಿ ರೈತರಿಗೆ ಸರಬರಾಜು ಮಾಡುತ್ತಿರುವ ಕಂಪನಿಗಳ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದ ನೂತನ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಬಾಬಾ ಗೌಡ ಪಾಟೀಲರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ಈ ಸಂಬಂಧದಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
‘ಕಳಪೆ ಹಾಗೂ ನಕಲಿ ಕೀಟ ನಾಶಕಗಳಿಂದಾಗಿ ದೇಶದ ಕೃಷಿ ಉತ್ಪನ್ನಗಳು ನಾಶವಾಗುತ್ತಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬೆಳೆ ಹಾನಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ. ಹಾಲಿ ಇರುವ ಕಾನೂನು ಬಿಗಿಯಾಗಿಲ್ಲ. ಇದರಿಂದಾಗಿ ಕಳಪೆ ಕೀಟನಾಶಕಗಳನ್ನು ತಯಾರಿಸಿ ಸರಬರಾಜು ಮಾಡಿದ ಕಂಪನಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದು, ರೈತರ ಹಿತ ಕಾಪಾಡಲು ಬಿಗಿಯಾದ ಹೊಸ ಕಾಯ್ದೆ ಜಾರಿಗೆ ತರುವುದು ಅನಿವಾರ್ಯವಾಗಲಿದೆ’ ಎಂದು ಅವರು ಹೇಳಿದರು.
ಯೋಜನಾ ಆಯೋಗ ಉಪಾಧ್ಯಕ್ಷ ಜಸ್ವಂತ್ ಸಿಂಗ್
ನವದೆಹಲಿ, ಮಾರ್ಚ್ 21 (ಪಿಟಿಐ)– ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿದಿರುವ ಪ್ರಧಾನಿ ಎ.ಬಿ.ವಾಜಪೇಯಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಹಣಕಾಸು ಸಚಿವರಾಗಲಿದ್ದಾರೆ ಎಂದು ಸುದ್ದಿ ಮಾಡಿದ್ದ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಇಂದು ನೇಮಿಸಲಾಗಿದೆ.
1996ರಲ್ಲಿ ಕೇವಲ 13 ದಿನಗಳ ಕಾಲ ಅಧಿಕಾರದಲ್ಲಿ ಇದ್ದ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.