ಎಂ.ಪಿ.ಸಿ.ಸಿ. (ಸಂಸ್ಥಾ) ಅಧ್ಯಕ್ಷರಾಗಿ ವೀರೇಂದ್ರ ಪಾಟೀಲ್ ಬೆಂಗಳೂರು, ಮೇ 10– ಮಾಜಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಸ್ಥಾ ಕಾಂಗ್ರೆಸ್ಸಿನ ಮೈಸೂರು ಪ್ರದೇಶ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು.
ಈ ಜವಾಬ್ದಾರಿಯನ್ನು ಹೊರಲು ಮೊದಲಿನಿಂದಲೂ ಬೇಡವೆನ್ನುತ್ತಿದ್ದ ಶ್ರೀಯುತರು, ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರಾದಿಯಾಗಿ ಸ್ನೇಹಿತರ ಒತ್ತಾಯಕ್ಕೆ ಮಣಿದು ಕಡೆಯಲ್ಲಿ ಪ್ರದೇಶ ಸಮಿತಿ ಅಧ್ಯಕ್ಷರಾಗಲು ಒಪ್ಪಿಕೊಂಡರು.
ಲೋಕಸಭೆಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಭಾರಿ ಅಪಜಯ ಹೊಂದಿ, ಆನಂತರ ಅದರ ನೇತೃತ್ವದ ಸರ್ಕಾರವೂ ರಾಜೀನಾಮೆ ಕೊಡಬೇಕಾಗಿ ಬಂದ ಘಟನೆಯ ನಂತರ, ನೂತನ ಪ್ರದೇಶ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೂಕ್ತರಾದವರನ್ನಾರಿಸುವ ವಿಷಯದ ಕುರಿತು ಈ ಕಾಂಗ್ರೆಸ್ಸಿನಲ್ಲಿ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿತ್ತು.
ಈ ಸಂಬಂಧದಲ್ಲಿ ಸರ್ವಶ್ರೀ ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಕೆ.ವಿ.ಶಂಕರಗೌಡ ಹಾಗೂ ಡಾ. ಎಚ್.ಎಲ್.ತಿಮ್ಮೇಗೌಡ ಅವರುಗಳ ಹೆಸರುಗಳು ಪ್ರಸ್ತಾಪದಲ್ಲಿದ್ದವು. ಆದರೆ ಇವರಾರೂ ಒಪ್ಪದೆ, ಕಡೆಗೆ ಶ್ರೀ ವೀರೇಂದ್ರ ಪಾಟೀಲ್ ಅವರ ಮೇಲೆ ಎಲ್ಲರ ಒತ್ತಾಯ ಬಂತು.