ರಾಣಿಖೇತ್, ಮೇ 18– ಪಾಕಿಸ್ತಾನ ಹಾಕುವ ಯಾವ ಬೆದರಿಕೆಗಳಿಗೂ ಭಾರತ ಹೆದರದು ಎಂದು ಇಲ್ಲಿ ಇಂದು ಘೋಷಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರು, ‘ಅಂಥ ಪರಿಸ್ಥಿತಿಗೆ ನಮ್ಮನ್ನು ಬಲವಂತವಾಗಿ ಎಳೆದರೆ, ಹೋರಾಡಲು ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ’ ಎಂದರು.
ಪೂರ್ವ ಬಂಗಾಳದಲ್ಲಿ ಎಲ್ಲವೂ ಚೆನ್ನಾಗಿದೆಯೆಂಬ ಪಾಕಿಸ್ತಾನದ ಹೇಳಿಕೆಗಳ ಸತ್ಯವನ್ನು ಅವರು ಪ್ರಶ್ನಿಸಿ, ಇದು ವಾಸ್ತವವೇ ಆಗಿದ್ದರೆ ಭಾರತಕ್ಕೆ ಧಾವಿಸುತ್ತಿರುವ ನಿರಾಶ್ರಿತರನ್ನು ತತ್ಕ್ಷಣವೇ ಪಾಕಿಸ್ತಾನ ವಾಪಸು ಕರೆಸಿಕೊಳ್ಳಬೇಕೆಂದರು.
ಕಂದಾಯ ಬಾಕಿ ವಸೂಲಿಯಲ್ಲಿ ಕಿರುಕುಳವಿಲ್ಲ: ರಾಜ್ಯಪಾಲರ ಭರವಸೆ
ಬೆಂಗಳೂರು, ಮೇ 18– ಭೂ ಕಂದಾಯ ಮತ್ತು ತಕರಾರು ತಖ್ತೆ ದಂಡ ವಸೂಲಿಯಲ್ಲಿ ‘ದುರ್ಬಲರಿಗೆ’ ಕಿರುಕುಳ ಕೊಡಬಾರದೆಂದು ಅಧಿಕಾರಿಗಳಿಗೆ ತಾವು ಸೂಚನೆ ನೀಡುವುದಾಗಿ ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ರಾಜ್ಯದ ಸಂಸತ್ ಸದಸ್ಯರಿಗೆ ಭರವಸೆ ನೀಡಿದರೆಂದು ತಿಳಿದುಬಂದಿದೆ.
ಇಂದು ಸಂಜೆ ಸಂಸತ್ ಸದಸ್ಯರನ್ನು ರಾಜ್ಯಪಾಲರು ಭೇಟಿ ಮಾಡಿದಾಗ, ಕಂದಾಯ ವಸೂಲಿ ಮಾಡುವುದರಲ್ಲಿ ಅಧಿಕಾರಿಗಳು ‘ಕಿರುಕುಳ’ ಕೊಡುತ್ತಿದ್ದಾರೆ ಎಂದು ಅನೇಕ ಸದಸ್ಯರು ದೂರಿದರು.