ಕಾರ್ನಾಡ, ಅಶ್ವತ್ಥ, ಶ್ರೀಕಂಠನ್ಗೆ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ
ಬೆಂಗಳೂರು, ಆ. 8– 1996–97ನೇ ಸಾಲಿನ ರಾಜ್ಯ ಸರ್ಕಾರದ ಪ್ರತಿಷ್ಠಿತ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ಖ್ಯಾತ ನಾಟಕಕಾರ ಹಾಗೂ ಹವ್ಯಾಸಿ ರಂಗ ಕಲಾವಿದ ಡಾ. ಗಿರೀಶ ಕಾರ್ನಾಡ ಅವರನ್ನು ಮತ್ತು ಕನಕ– ಪುರಂದರ ಪ್ರಶಸ್ತಿಗೆ ಹಿರಿಯ ಕಲಾವಿದ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರನ್ನು ಆಯ್ಕೆ ಮಾಡಲಾಗಿದೆ.
ಅದೇ ರೀತಿ ಇನ್ನೆರಡು ಪ್ರತಿಷ್ಠಿತ ಪ್ರಶಸ್ತಿ ಗಳಾದ ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸುಗಮ ಸಂಗೀತಗಾರ ಸಿ. ಅಶ್ವತ್ಥ ಅವರನ್ನು ಹಾಗೂ ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಕಲಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸಾಂಪ್ರದಾಯಿಕ ಶಿಲ್ಪಿ ನೀಲಕಂಠಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಆಲಮಟ್ಟಿ, ಕಾವೇರಿ ವಿವಾದ ಸುಪ್ರೀಂ ಕೋರ್ಟ್ ಕಳವಳ
ನವದೆಹಲಿ, ಆ. 8 (ಪಿಟಿಐ)– ಆಲಮಟ್ಟಿ, ಕಾವೇರಿ ವಿವಾದಗಳಂಥ ಅಂತರರಾಜ್ಯ ಜಲವಿವಾದಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
ಇಂಥ ವಿವಾದಗಳಲ್ಲಿ ಭಾಗಿಗಳಾಗಿರುವ ರಾಜ್ಯಗಳು ರಾಷ್ಟ್ರದ ಒಟ್ಟಾರೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ನ ವಿಭಾಗೀಯ ನ್ಯಾಯಪೀಠ ಸಲಹೆ ಮಾಡಿದೆ.
ಆಲಮಟ್ಟಿ ಅಣೆಯ ಎತ್ತರವನ್ನು ಹೆಚ್ಚಿಸುವ ಕುರಿತು ಎದ್ದಿರುವ ವಿವಾದದ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿ ಮತ್ತು ಕರ್ನಾಟಕ ಸಲ್ಲಿಸಿರುವ ಪ್ರತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮ ಮತ್ತು ನ್ಯಾಯಮೂರ್ತಿ ಬಿ.ಎನ್. ಕೃಪಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.