ಜಲಮೂಲ ಬತ್ತಿ, ಪರಾಗಸ್ಪರ್ಶ ಕಡಿಮೆಯಾಗಿ, ಹೂವು ಒಣಗತೊಡಗಿ- ಕೃಷಿಯ ಇಳುವರಿಯೂ ತಗ್ಗುವುದನ್ನು ರೈತರು ಅನುಭವಿಸುತ್ತಿದ್ದಾರೆ. ಆದರೆ, ಏರುತ್ತಿರುವ ಕಾಡಿನ ಉತ್ಪನ್ನಗಳ ಬೇಡಿಕೆ ಪೂರೈಸುವ ತುರ್ತು ಕೂಡ ಸರ್ಕಾರಕ್ಕಿರುವುದು ನಿಜ. ಹೀಗಾಗಿ, ಸೀಮಿತವಾಗಿ ‘ಉತ್ಪಾದನಾ ಅರಣ್ಯ’ಗಳನ್ನು (Production Forests) ನಿರ್ಮಿಸುವುದು ಅನಿವಾರ್ಯವಾಗಿದೆ. ಅವು ಉಳಿದ ನೈಜ ಅರಣ್ಯದ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಲ್ಲವು. ಆದರೆ, ಅವು ಏಕಪ್ರಭೇದದ ನೆಡುತೋಪೇ ಆಗಬೇಕಿಲ್ಲ. ಹೆಬ್ಬೇವು, ಮಹಾಗೋನಿ, ಚಂದಕಲು, ಕದಂಬ, ಧೂಪ, ಸಾಲುಧೂಪ, ಹೊಳೆಹೊನ್ನೆಯಂಥ ಹತ್ತಾರು ಸ್ಥಳೀಯ ಪ್ರಭೇದಗಳ, ಜನಸಹಭಾಗಿತ್ವದ ಸಾಮಾಜಿಕ ಆರಣ್ಯಗಳಾಗಿ ಅವು ರೂಪುಗೊಳ್ಳಬೇಕು. ಭವಿಷ್ಯದ ಸಾಮೂಹಿಕ ಹಿತ ಕಾಯುವ ಅಂಥ ಸೂಕ್ತ ಅರಣ್ಯನೀತಿ ಕೈಗೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಲಿ. ಅದರ ಆಧಾರದಲ್ಲಿ, ‘ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ’ಗೆ ಸೂಕ್ತ ತಿದ್ದುಪಡಿಯನ್ನೂ ತರಬೇಕಿದೆ.