ಕಟ್ಟಡ ಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕುವ ಸರ್ಕಾರಿ ಯತ್ನ ಶ್ಲಾಘನೀಯವಾದುದು. ಆದರೆ ಕಾರ್ಮಿಕರ ದೃಷ್ಟಿಯಲ್ಲಿ ನೋಡಿದರೆ ಲಸಿಕೆ ಅವರ ಕೊನೆಯ ಆದ್ಯತೆಯೇ ಆಗಿರಬಹುದು. ಈ ಮಳೆಗಾಲದಲ್ಲಿ ಅವರು ಪ್ಲಾಸ್ಟಿಕ್ ಟೆಂಟ್ ಒಳಗೆ ಮುದುರಿ ಮಲಗಿ ಎದ್ದು, ಬೆಳಿಗ್ಗೆ ಒದ್ದೆ ಒಲೆಗೆ ಪ್ಲಾಸ್ಟಿಕ್ ತುರುಕಿ ಬೆಂಕಿ ಹೊತ್ತಿಸಿ, ಪುಟ್ಟ ಮಕ್ಕಳನ್ನು ಸುತ್ತ ಕೂರಿಸಿ ಅಡುಗೆ ಮಾಡಿಕೊಳ್ಳುವುದು, ಪ್ಲಾಸ್ಟಿಕ್ ಬಾಟಲಿ ಹಿಡಿದು ಪೊದೆಯ ಹಿಂಬದಿ ದೇಹಬಾಧೆ ತೀರಿಸಿಕೊಳ್ಳುವುದು, ಎದ್ದು ಹೋಗುವಾಗ ಉರುವಲಕ್ಕೆಂದು ಟ್ರೀ ಗಾರ್ಡ್ಗಳನ್ನು ಕಿತ್ತು ಸಾಗಿಸುವುದು- ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಹುತೇಕ ಎಲ್ಲ ಎತ್ತರದ ಕಟ್ಟಡಗಳ ಬಳಿಯಲ್ಲಿ ಕಾಣುವ ದೃಶ್ಯ ಇದು.