ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ವರ್ಷದಂತೆ ‘ಜಂತುಹುಳು ನಿವಾರಣಾ ದಿನ’ದ ಅಂಗವಾಗಿ ರಾಜ್ಯದ ಅಂಗನವಾಡಿ, ಸರ್ಕಾರಿ ಶಾಲೆ, ಖಾಸಗಿ ಶಾಲೆ ಸೇರಿದಂತೆ ಸುಮಾರು ಎರಡು ಕೋಟಿ ಮಕ್ಕಳಿಗೆ ಇತ್ತೀಚೆಗೆ ‘ಆಲ್ಬೆಂಡಜೋಲ್’ ಮಾತ್ರೆಗಳನ್ನು ನೀಡಿದೆ. ಸಾಮಾನ್ಯವಾಗಿ ಮಕ್ಕಳಿಗೆ ಮಾತ್ರೆಗಳೆಂದರೆ ಭಯ, ಅಲರ್ಜಿ. ಮಾತ್ರೆಯ ಹೆಸರು ಕೇಳಿದರೆ ಸಾಕು ಮಾರುದ್ದ ಜಿಗಿಯುತ್ತಾರೆ. ಈ ಕಾರಣದಿಂದಾಗಿ ಅದೆಷ್ಟೋ ಮಕ್ಕಳು ಈ ಮಾತ್ರೆಗಳನ್ನು ಸೇವಿಸುವಾಗ ವಾಂತಿ ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಮಕ್ಕಳು ಶಿಕ್ಷಕರು ಹಾಗೂ ಆರೋಗ್ಯ ಕಾರ್ಯಕರ್ತರ ಕಣ್ಣುತಪ್ಪಿಸಿ ಆ ಮಾತ್ರೆಗಳನ್ನು ಎಸೆದುಬಿಡುತ್ತಾರೆ. ಇನ್ನಷ್ಟು ಮಕ್ಕಳು ಕಷ್ಟಪಟ್ಟು ಅರ್ಧವನ್ನು ಮಾತ್ರ ತಿಂದು ನಂತರ ಉಗುಳಿಬಿಡುತ್ತಾರೆ. ಹೀಗಾಗಿ ಇಲಾಖೆಯ ‘ಜಂತುಹುಳು ನಿವಾರಣಾ ಗುರಿ’ ನಿರೀಕ್ಷಿತ ಮಟ್ಟ ತಲುಪದೇ ಇರಬಹುದು. ಆದ್ದರಿಂದ ಇದಕ್ಕೆ ಪರಿಹಾರವಾಗಿ ಇಲಾಖೆಯು ಮಕ್ಕಳ ಮನೋವೈಜ್ಞಾನಿಕ ತಳಹದಿಯ ಮೇಲೆ ಹೊಸ ವಿಧಾನವನ್ನು ಕಂಡುಕೊಳ್ಳಬೇಕಿದೆ.