ವಂಚನೆ ಆರೋಪ ಹೊತ್ತ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೊಆಪರೇಟಿವ್ ಲಿಮಿಟೆಡ್ನ ಅಧ್ಯಕ್ಷರು ಮತ್ತು ಸಿಬ್ಬಂದಿಯ ₹ 45.32 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಚುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ (ಪ್ರ.ವಾ., ಸೆ. 19). ಸಹಕಾರ ಬ್ಯಾಂಕ್ ಮತ್ತು ಸೊಸೈಟಿಗಳು ಸಂಬಂಧಿಸಿದ ಸಹಕಾರಿ ಕಾನೂನಿನನ್ವಯವೇ ಸ್ಥಾಪಿತವಾಗುವುದರಿಂದ, ಅವು ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಸಂಸ್ಥೆಗಳೇ. ಆದ್ದರಿಂದಲೇ ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು ತಾವು ಕಷ್ಟಪಟ್ಟು ದುಡಿದ ಹಣವನ್ನು ಏರಿಳಿತ ಮತ್ತು ಅನಿಶ್ಚಯದಿಂದ ಕೂಡಿರುವ ಷೇರುಪೇಟೆ ಮತ್ತಿತರೆಡೆ ತೊಡಗಿಸಲು ಬಯಸದೆ, ಭದ್ರತೆ ಇರುತ್ತದೆಯೆಂಬ ಭರವಸೆಯಿಂದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಯಿಡಲು ಬಯಸುತ್ತಾರೆ. ಆದರೆ, ರಾಜಕೀಯ ಹಸ್ತಕ್ಷೇಪ, ಬೇನಾಮಿ ಸಾಲ ವಿತರಣೆ ಮತ್ತು ಸ್ವಜನಪಕ್ಷಪಾತ ಅಲ್ಲಿ ಮನೆ ಮಾಡಿರುವುದಕ್ಕೆ ಈ ಹಗರಣಗಳೇ ಸಾಕ್ಷಿ.