ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಿಂದ ‘ಹೊಡಿ ಹೊಡಿ, ತೆಲಿಗೆ ಹೊಡಿ, ಹ್ಞಾಂ ತೆಳಗ ಬಾ ಹೊಡಿ’ ಎಂದು ನಾಲ್ಕಾರು ಕೂಗುಗಳು ಮೊಳಗುತ್ತಿದ್ದವು. ಯಾವುದೋ ಮಾರಾಮಾರಿ ನಡೆಯುತ್ತಿರಬಹುದು ಎಂದು ಅನ್ನಿಸಿ ಆತಂಕದಿಂದ ನೋಡಹೋದರೆ, ಎಂಟ್ಹತ್ತು ಶಾಲಾ ಮಕ್ಕಳು ಸುತ್ತಣ ಪರಿಸರವನ್ನು ಮರೆತು ಮೊಬೈಲ್ ಗೇಮ್ನಲ್ಲಿ ತಲ್ಲೀನರಾಗಿದ್ದರು! ಮೇಲ್ನೋಟಕ್ಕೆ ಇದೊಂದು ತಮಾಷೆಯ ಸಂಗತಿಯಂತೆ ಕಂಡರೂ ಮಕ್ಕಳ ಮನಸ್ಸಿನ ಮೇಲೆ ಬೀಳುತ್ತಿರುವ ಒತ್ತಡಗಳನ್ನು ಕಡೆಗಣಿಸುವಂತಿಲ್ಲ. ಹದಿವಯಸ್ಸಿನ ಮಕ್ಕಳದು ಸದಾ ಹೊಯ್ದಾಡುವ ಮನಃಸ್ಥಿತಿ. ಪೋಷಕ- ಶಿಕ್ಷಕ ಮತ್ತು ಸಮಾಜದಿಂದ ಬರುವ ಒತ್ತಡಗಳ ಜೊತೆಗೆ ವಯೋಸಹಜ ಒತ್ತಡಗಳೂ ಸೇರಿ ಅವರ ಮನಸ್ಸು ಸದಾ ವ್ಯಘ್ರವೂ ತೀವ್ರ ಸ್ಪಂದನಕಾರಿಯೂ ಆಗಿರುತ್ತದೆ. ಬಹುಶಃ ಈ ಒತ್ತಡದಿಂದ ಹೊರಜಾರುವ ಯತ್ನದಲ್ಲಿ ಮೊಬೈಲ್ ಅವರಿಗೆ ಆಶಾಕಿರಣದಂತಾಗಿದೆ. ಆದರೆ ಇದೇ ಅವರಿಗೆ ಕುತ್ತು ತಂದರೇನು ಗತಿ? ಈಗ ಇವರನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ಇದೇ ಮಕ್ಕಳು ತಪ್ಪು ದಾರಿ ಹಿಡಿದರೆ ಯಾರನ್ನು ದೂರುವುದು? ಹೇಗೆ ಸರಿಪಡಿಸುವುದು? ಇಂತಹ ಹಲವು ಜಟಿಲ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ.