ಹಾವು ಕಂಡರೆ ಭಕ್ತಿಗಿಂತ ಭಯವೇ ಹೆಚ್ಚು ನಮ್ಮಲ್ಲಿ. ಆಹಾರ ಸರಪಳಿಯ ಅತ್ಯಮೂಲ್ಯ ಕೊಂಡಿಯಾಗಿರುವ ಉರಗಗಳ ಕುರಿತು ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣೆಯು (ಪ್ರ.ವಾ., ಜುಲೈ 17) ಜನಸಾಮಾನ್ಯರಲ್ಲಿನ ಆತಂಕಗಳನ್ನು ಕೆಲಮಟ್ಟಿಗಾದರೂ ದೂರ ಮಾಡುವಲ್ಲಿ ಸಹಕಾರಿಯಾಗಿದೆ. ಹಾವುಗಳಿಂದ ಕಚ್ಚಿಸಿಕೊಂಡವರು ಭಯ ಹಾಗೂ ಅಜ್ಞಾನದಿಂದ ಒಂದು ಕಡೆ ಸಾಯುತ್ತಿದ್ದರೆ, ಮತ್ತೊಂದೆಡೆ ವಿವೇಚನಾರಹಿತ ಅಭಿವೃದ್ಧಿ ಯೋಜನೆಗಳಿಂದ ಉರಗಗಳು ತಮ್ಮ ವಾಸಸ್ಥಾನಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ, ಮಾನವನ ಕೈಯಲ್ಲಿ ಬಡಿಸಿಕೊಂಡೂ ನಶಿಸುತ್ತಿವೆ. ಆದರೂ ಅನೇಕ ವನ್ಯಜೀವಿ ಪ್ರೇಮಿಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಮೂಲಕ ಹಾಗೂ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಲ್ಲಿ ಬಿಡುವುದರೊಂದಿಗೆ ಮಾನವ ಹಾಗೂ ಉರಗಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡುತ್ತಿದ್ದಾರೆ.