ಸಂಘಟಿತ ವಲಯ ಎಂದೇ ಗುರುತಿಸಲಾಗುವ ಕೈಗಾರಿಕೆಗಳ ಕಾರ್ಮಿಕರಿಗೆ ಪಿಂಚಣಿ ಇಲ್ಲದಿರುವುದು ದುರದೃಷ್ಟಕರ. ಭವಿಷ್ಯನಿಧಿಯ ಸದಸ್ಯರಾಗಿದ್ದವರಿಗೆ 1971ರಿಂದ 1995ರವರೆಗೆ ಕುಟುಂಬ ಪಿಂಚಣಿಗೆ ಅವರವರ ವೇತನದ ಶೇ 1.16ರಷ್ಟು ವಂತಿಗೆ ಕಡ್ಡಾಯವಾಗಿತ್ತು. ಕಾರ್ಮಿಕರೇನಾದರೂ ಸೇವಾವಧಿಯಲ್ಲೇ ನಿಧನರಾದರೆ, ಅವರ ಕುಟುಂಬಕ್ಕೆ ಪಿಂಚಣಿ ಕೊಡಲಾಗುತ್ತಿತ್ತು. ವಿಷಾದದ ಸಂಗತಿಯೆಂದರೆ, 1995ರಲ್ಲಿ ಇದನ್ನು ‘ಕಾರ್ಮಿಕ ಪಿಂಚಣಿ’ಯಾಗಿ ಪರಿವರ್ತಿಸಲಾಯಿತು. ಭವಿಷ್ಯನಿಧಿ ವಂತಿಗೆಯಲ್ಲಿ ಕಾರ್ಮಿಕರ ವೇತನದಿಂದ ಶೇ 8.33ರಷ್ಟು ಹಣವನ್ನು ಮತ್ತು ಮಾಲೀಕರ ಕಡೆಯಿಂದಲೂ ಇಷ್ಟೇ ಮೊತ್ತವನ್ನು ವರ್ಗಾಯಿಸಿ ಪಿಂಚಣಿ ನಿಧಿಗೆ ನೀಡಲಾಗುತ್ತಿತ್ತು. ಈ ಮೊತ್ತವನ್ನು ಕಾರ್ಮಿಕರ ಹೆಸರಿನಲ್ಲಿ ನಿಶ್ಚಿತಾವಧಿ ಠೇವಣಿಯಾಗಿ ಇಟ್ಟಿದ್ದರೆ, ಈಗ ಬರುತ್ತಿರುವ ಪಿಂಚಣಿಗಿಂತ ಹೆಚ್ಚು ಹಣ ಬರುತ್ತಿತ್ತು. ಆದರೆ ಈಗ, 2014ಕ್ಕಿಂತ ಮುನ್ನ ನಿವೃತ್ತರಾದವರಿಗೆ ಬರುವುದು ಗರಿಷ್ಠ ₹ 2,200 ಮಾಸಿಕ ಪಿಂಚಣಿ ಮಾತ್ರ. ಈ ಕಾಲಘಟ್ಟದಲ್ಲಿ ಇಷ್ಟು ಅಲ್ಪಮೊತ್ತದಿಂದ ಜೀವನ ನಿರ್ವಹಣೆ ಸಾಧ್ಯವೇ? ಕೆಲವು ರಾಜ್ಯಗಳಲ್ಲಿ ನೀಡುತ್ತಿರುವ ವೃದ್ಧಾಪ್ಯ ವೇತನವೇ ಈ ಇಪಿಎಸ್ ಪಿಂಚಣಿಗಿಂತ ಹೆಚ್ಚಾಗಿರುವುದು ಚೋದ್ಯದ ಸಂಗತಿ!