ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಗುಡಿ ಕಟ್ಟಿಲ್ಲ, ಮಠ ಕಟ್ಟಿಲ್ಲ, ಪೀಠ ಸ್ಥಾಪಿಸಿ ಜಗದ್ಗುರುವಾಗಿ ಪಟ್ಟ ಕಟ್ಟಿಕೊಳ್ಳಲಿಲ್ಲ. ಆದರೆ ಅವರು ಒಂದು ಸುಂದರವಾದ, ಭವ್ಯವಾದ ಗ್ರಂಥಾಲಯ ಕಟ್ಟಿದ್ದಾರೆ. ಅಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಯ ಸುಮಾರು ಹದಿನೈದು ಸಾವಿರ ಗ್ರಂಥಗಳಿವೆ. ಇವು ಜಗತ್ತಿನ ಶ್ರೇಷ್ಠ ಚಿಂತಕರು, ತತ್ವಜ್ಞಾನಿಗಳು, ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ನೊಬೆಲ್ ಪ್ರಶಸ್ತಿ ಪುರಸ್ಕೃತರು ಬರೆದ ಅತ್ಯಂತ ಮಹತ್ವದ ಪುಸ್ತಕಗಳಾಗಿವೆ.