ಸಚಿವ ಸಂಪುಟದ ವಿಸ್ತರಣೆಯ ಭಾಗವಾಗಿ ರಾಜಭವನದ ಗಾಜಿನ ಮನೆಯಲ್ಲಿ ಇತ್ತೀಚೆಗೆ ನಡೆದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ರಾಷ್ಟ್ರಗೀತೆಯನ್ನು ಸಂಗೀತ ಉಪಕರಣಗಳ ಮೂಲಕ ನುಡಿಸಲಾಯಿತು. ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಈ ರೀತಿ ಉಪಕರಣಗಳ ಮೂಲಕ ರಾಷ್ಟ್ರಗೀತೆಯನ್ನು ನುಡಿಸಿದರೆ ಸಾಹಿತ್ಯದ ಔಚಿತ್ಯವಾದರೂ ಏನು? ಸಾಹಿತ್ಯಕ್ಕೆ ಬೆಲೆ ಇಲ್ಲವೇ? ರಾಷ್ಟ್ರಗೀತೆಯ ಸಾಹಿತ್ಯದ ಹೂರಣ ತಿಳಿಯುವುದಾದರೂ ಹೇಗೆ? ರಾಗಕ್ಕೆ (ಟ್ಯೂನ್) ಮಾತ್ರ ಪ್ರಾಧಾನ್ಯ ನೀಡುತ್ತಾ ಸಾಗಿದರೆ ರವೀಂದ್ರನಾಥ ಟ್ಯಾಗೋರರನ್ನು ಅಪಮಾನಿಸಿದಂತೆ ಅಲ್ಲವೇ? ಇನ್ನು ಮುಂದಾದರೂ ಸಾಹಿತ್ಯ ಹೊರತುಪಡಿಸಿ ಕೇವಲ ಉಪಕರಣಗಳಲ್ಲಿ ರಾಷ್ಟ್ರಗೀತೆ ನುಡಿಸುವ ಪರಿಪಾಟ ಬೇಡ. ರಾಷ್ಟ್ರಗೀತೆಯ ಸಾಹಿತ್ಯ ನಮ್ಮ ಹೆಮ್ಮೆ.