‘ಕಾಂಗ್ರೆಸ್: ನಿಶ್ಶಕ್ತಿ ನಿವಾರಣೆಗೆ ಬೇಕಿದೆ ಕಹಿ ಗುಳಿಗೆ’ ಸಂಪಾದಕೀಯ (ಪ್ರ.ವಾ., ಅ. 11) ಹಾಗೂ ‘ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ನಿರಾಕರಣೆ’ ಎಂಬ ಸುದ್ದಿ ಇಂದಿನ ಸನ್ನಿವೇಶಕ್ಕೆ ಪ್ರಸ್ತುತವಾಗಿವೆ. ದುರಂತವೆಂದರೆ, ಪಕ್ಷದಲ್ಲಿನ ಹಿರಿಯ ನಿಷ್ಠ ದಿಗ್ಗಜರು (23 ಮಂದಿ) ಪಕ್ಷವನ್ನು ಬಲಿಷ್ಠವಾಗಿಸಲು ‘ಪಕ್ಷದ ಸಭೆ ಕರೆಯಿರಿ, ಚರ್ಚೆ ಮಾಡೋಣ’ ಎಂದುದಕ್ಕೂ ಸಿದ್ಧರಾಗದ ಪಕ್ಷದ ತ್ರಿಮೂರ್ತಿಗಳು ಕಹಿ ಗುಳಿಗೆ ಸೇವಿಸುತ್ತಾರೆಯೇ? ಬದಲಾದಸನ್ನಿವೇಶದಲ್ಲಿ, ಅಧಿಕಾರ ವಿಕೇಂದ್ರೀಕರಣವಾಗದೆ ‘ಚಪ್ಪಾಳೆ ತಟ್ಟುವವರಿಗೆ ಮಾತ್ರ ಅವಕಾಶ’ ಎಂಬಂತಾಗಿದೆ. ಅಂದರೆ, ಒಂದು ಶಾಲೆಯ ಪ್ರಾಧ್ಯಾಪಕನ ಸ್ಥಾನಕ್ಕೆ, ಹಿರಿಯ ನುರಿತ ಅಧ್ಯಾಪಕರ ಬದಲು, ನಿವೃತ್ತ ಪ್ರಾಧ್ಯಾಪಕನ ಪುತ್ರನಿಗೇ ಪಟ್ಟ ಮೀಸಲು ಇಡುವಂತಾದರೆ, ಶಾಲೆ, ಮಕ್ಕಳು, ಶಿಕ್ಷಣದ ಗತಿ ಅಧೋಗತಿಗೆ ಹೋದಂತೆ ಆಗಿದೆ ಕಾಂಗ್ರೆಸ್ಸಿನ ಪರಿಸ್ಥಿತಿ. ಹಿಂದೆ, ಕಾಂಗ್ರೆಸ್ನಲ್ಲಿ ವಂಶಪಾರಂಪರ್ಯಕ್ಕೆ ತೂಕವಿದ್ದದ್ದು ದಿಗ್ಗಜರು, ಪಾಂಡಿತ್ಯ ಪಡೆದವರು, ಅರ್ಹತೆ ಇದ್ದವರು ಜನರ ಕಣ್ಮಣಿಗಳಾಗಿದ್ದಾಗ. ಈಗ, ಆಡಳಿತ ಪಕ್ಷವಾಗಿ ಬಿಜೆಪಿ ಬಲಿಷ್ಠವಾಗುತ್ತಲೇ ಹೋಗುತ್ತಿದ್ದರೂ ವಂಶಪಾರಂಪರ್ಯ ಆಡಳಿತ ನಡೆಸುತ್ತಿರುವವರು ಪಕ್ಷದ ಮೂಲಭೂತ ನಂಬಿಕೆಯನ್ನೇಗ್ರಹಿಸದೆ, ಹಿರಿಯರ ಅಭಿಪ್ರಾಯಕ್ಕೂ ಮಣಿಯದಂತೆ ಇರುವುದು ಸರಿಯೇ?