ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯ ಸಂದರ್ಭವನ್ನು ಪಕ್ಷದ ನಾಯಕರು ತಮ್ಮ ವಿರೋಧಿಗಳನ್ನು ಟೀಕಿಸುವ ವೇದಿಕೆಯನ್ನಾಗಿ ಬಳಸಿಕೊಂಡರು (ಪ್ರ.ವಾ., ನ. 15). ಇದು ಸರಿಯೇ? ನೆಹರೂ ಅವರ ವರ್ಚಸ್ಸಿಗೆ ಭಂಗ ತರುವ ರೀತಿಯಲ್ಲಿ ಬಿಜೆಪಿ ನಾಯಕರು ಇತ್ತೀಚೆಗೆ ವ್ಯವಸ್ಥಿತವಾದ ಪ್ರಚಾರದಲ್ಲಿ ತೊಡಗಿದ್ದಾರೆ.ಕುಚೋದ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ನೆಹರೂ ಅವರ ನಿಜವಾದ ಕೊಡುಗೆಯನ್ನು ಸಭಾಂಗಣದಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರಿಗೆ ಮತ್ತು ಜನಸಾಮಾನ್ಯರಿಗೆ ತಿಳಿಸಿ ಹೇಳುವ ಕೆಲಸ ಮಾಡಬಹುದಿತ್ತು.ಕೈಗಾರಿಕೆ, ಕೃಷಿ, ನೀರಾವರಿ, ಶಿಕ್ಷಣ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ಬುನಾದಿ ಹಾಕಿದ್ದನ್ನು, ಮೂಲಸೌಕರ್ಯ ಕಲ್ಪಿಸಿದ್ದನ್ನು ಉದಾಹರಣೆಗಳ ಸಮೇತ ವಿವರಿಸಬಹುದಿತ್ತು. ಅದನ್ನು ಬಿಟ್ಟು ರಾಜಕೀಯ ಟೀಕೆಗೆ ಸಮಯ ವ್ಯಯಿಸಿದ್ದು ಸಂದರ್ಭೋಚಿತವಾಗಿರಲಿಲ್ಲ.