ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದಸರಾ ರಜೆಗಿರಲಿ ಯೋಜಿತ ಚಟುವಟಿಕೆ

Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಇಲಾಖೆಗಳಿಗೆ ಪುಸ್ತಕ ಖರೀದಿ: ಸಮಿತಿ ರಚಿಸಿ

ಪುಸ್ತಕ ಖರೀದಿಯಲ್ಲಿ ವಿಳಂಬ ಸಲ್ಲ ಎಂಬ ಸಂಪಾದಕೀಯ (ಪ್ರ.ವಾ., ಅ. 5) ಸಮಂಜಸವಾಗಿದೆ. ಮೂರು ವರ್ಷಗಳಿಂದ ಸರ್ಕಾರವು ಪ್ರಕಾಶಕರ ಕೋರಿಕೆಯನ್ನು ಮನ್ನಿಸಿ ಪುಸ್ತಕ ಸಗಟು ಖರೀದಿಗೆ ಚಾಲನೆ ಕೊಡದೇ ಇರುವುದರಿಂದ, ಪ್ರಕಾಶಕರು, ಲೇಖಕರು, ಪುಸ್ತಕ ಮಾರಾಟಗಾರರು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಗ್ರಾಮೀಣ ಗ್ರಂಥಾಲಯಗಳಿಗೆ ಪುಸ್ತಕಗಳು ಸಮರ್ಪಕವಾಗಿ ಸರಬರಾಜಾಗದ ಕಾರಣ ಅಲ್ಲಿನ ವಿದ್ಯಾರ್ಥಿಗಳು ಮತ್ತು ಓದುಗರು ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿ ಪ್ರಕಾಶಕರಿಗೆ ಹೊಸ ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಧೈರ್ಯವಿಲ್ಲದಂತೆ
ಮತ್ತು ಲೇಖಕರಿಗೆ ಪುಸ್ತಕ ಬರೆಯುವುದಕ್ಕೆ ಉತ್ಸಾಹವಿಲ್ಲದಂತೆ ಮಾಡಿದೆ.

ಸರ್ಕಾರವು ಸಾರ್ವಜನಿಕ ಗ್ರಂಥಾಲಯಗಳಿಗೆ ಮಾತ್ರವಲ್ಲದೆ ವಿವಿಧ ಇಲಾಖೆಗಳಿಗೆ ಹಲವು ಕೋಟಿ ವ್ಯಯಿಸಿ ಪುಸ್ತಕಗಳನ್ನು ಖರೀದಿಸುತ್ತದೆ. ಈ ವ್ಯವಹಾರವಂತೂ ಪ್ರಕಾಶಕರು, ಲೇಖಕರು, ಪ್ರಕಾಶಕರ ಸಂಘದ ಗಮನಕ್ಕೂ ಬಾರದೆ ನಡೆದುಹೋಗುತ್ತದೆ. ಈ ಪ್ರಕ್ರಿಯೆಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಾದರಿಯಂತೆ ಆಯ್ಕೆ ಸಮಿತಿ ರಚಿಸಿ, ಏಕಗವಾಕ್ಷಿಯ ಮೂಲಕ ಖರೀದಿಸಬೇಕಾದ ಅಗತ್ಯವಿದೆ.

ಸೃಷ್ಟಿ ನಾಗೇಶ್, ಬೆಂಗಳೂರು

ಪಂಚಾಯಿತಿ ಅಧ್ಯಕ್ಷರ ಕಡೆಗಣನೆ ಅಕ್ಷಮ್ಯ

ಊರಿನ ಉತ್ಸವವನ್ನು ಶ್ರೀಮಂತ ಕುಳಗಳು ತಮ್ಮ ಗಮನಕ್ಕೆ ತಾರದೇ ನಡೆಸಿದ್ದರಿಂದ ಮನನೊಂದ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು, ‘ಶ್ರೀಮಂತರು ಅಧ್ಯಕ್ಷರಾಗಿದ್ದಿದ್ದರೆ ಹೀಗೆ ಮಾಡುತ್ತಿದ್ದರೇ’ ಎಂದು ಪ್ರಶ್ನಿಸಿದ್ದನ್ನು
ವಿವರಿಸಿರುವ ಚಾವಲ್ಮನೆ ಸುರೇಶ್‌ ನಾಯಕ್‌ ಅವರ ಪತ್ರವನ್ನು (ವಾ.ವಾ., ಅ. 5) ಓದಿ ಮನಸ್ಸಿಗೆ ನೋವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೀಗೆ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದನ್ನು ತಿಳಿದು ಕರುಳು ಚುರ್‍ರ್ ಎಂದಿತು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆದು, ಅದರಲ್ಲಿ ಮೀಸಲು ಕ್ಷೇತ್ರದಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ತಪ್ಪೇ? ಆ ಪಂಚಾಯಿತಿ ವ್ಯಾಪ್ತಿಯ ಪ್ರಥಮ ಪ್ರಜೆ ಅವರು. ಅವರಿಗೇ ವಿಷಯವನ್ನು ತಿಳಿಸದೆ ಕತ್ತಲಲ್ಲಿಟ್ಟು, ಹಣವಿದ್ದವರು ಗ್ರಾಮದಲ್ಲಿ ಭರ್ಜರಿಯಾಗಿ ಉತ್ಸವ ಏರ್ಪಡಿಸಿ ಭೋಜನ ವ್ಯವಸ್ಥೆ ಮಾಡಿ ಅಧ್ಯಕ್ಷರನ್ನು ಕಡೆಗಣಿಸಿದ್ದು ಆ ಹುದ್ದೆಗೆ ಮಾಡಿದ ಅವಮಾನ ಹಾಗೂ ಅದನ್ನು ಯಾರೂ ಕ್ಷಮಿಸಲಾರರು. 

ನಾಗೋಜಿರಾವ್ ಡಿ., ಭದ್ರಾವತಿ

ಅಂತಹ ಶಾಸಕರೂ ಇಲ್ಲ, ಅಧಿಕಾರಿಗಳೂ ಇಲ್ಲ!

ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ಇತ್ತೀಚೆಗೆ ಗಲಭೆ ನಡೆದಾಗ, ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡಿ, ಪ್ರಚೋದ
ನಾತ್ಮಕ ಹೇಳಿಕೆ ನೀಡಿದರೇ ವಿನಾ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸ ಮಾಡಲಿಲ್ಲ. ಇಂತಹ ಗಲಭೆಗಳಾದಾಗ ಕೆಲವು ರಾಜಕೀಯ ನಾಯಕರು ಅದಕ್ಕೆ ಇನ್ನಷ್ಟು ಕಾವು ಕೊಟ್ಟು ತಮ್ಮ ಮೈ ಕಾಯಿಸಿಕೊಳ್ಳಲು ಹವಣಿಸುತ್ತಾರೆ. ಹಿಂದೆಲ್ಲ ಗಲಭೆ ನಡೆದ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಎರಡೂ ಸಮಾಜದ ಧರ್ಮಗುರುಗಳು ಶಾಂತಿ ಸ್ಥಾಪನೆಗಾಗಿ ಸೌಹಾರ್ದ ಸಭೆ ನಡೆಸಿ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಮುಂದಾಗುತ್ತಿದ್ದರು.
ಆ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಪೂರಕ ಪ್ರಯತ್ನ ಮಾಡುತ್ತಿದ್ದರು.

ಇದಕ್ಕೊಂದು ಉದಾಹರಣೆ ಎಂದರೆ, ಸುಮಾರು 35 ವರ್ಷಗಳ ಹಿಂದೆ ನಾನು ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಓದುತ್ತಿದ್ದ ಸಮಯದಲ್ಲಿ, ಅಲ್ಲಿ ಹಿಂದೂ- ಮುಸ್ಲಿಮರ ನಡುವೆ ದೊಡ್ಡ ಪ್ರಮಾಣದಲ್ಲಿ ಕೋಮು ಗಲಭೆ ಸಂಭವಿಸಿತು. ಆಗ ಕೆ.ಆರ್. ನಗರದ ಶಾಸಕರಾಗಿದ್ದ ಎಸ್.ನಂಜಪ್ಪ ಮತ್ತು ತಹಶೀಲ್ದಾರ್‌ ಜಬ್ಬಾರ್ ಅವರು, ಗಲಭೆ ನಡೆದಿದ್ದ ಎರಡೂ ಸಮುದಾಯದ ಕೇರಿಗಳ ಎಲ್ಲ ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ, ಶಾಂತಿ ನೆಲೆಸುವಂತೆ ಮಾಡಿದ್ದರು. ಈಗ ನಂಜಪ್ಪ ಅವರಂತಹ ಆದರ್ಶ ಶಾಸಕರೂ ಇಲ್ಲ, ಜಬ್ಬಾರ್ ಅವರಂತಹ ದಕ್ಷ ಅಧಿಕಾರಿಗಳೂ ಇಲ್ಲದಂತಾಗಿದೆ.

ಬೂಕನಕೆರೆ ವಿಜೇಂದ್ರ, ಮೈಸೂರು

ಬದಲಾಗುವ ಆಚರಣೆ: ನಿಲುಕದ ವ್ಯಾಖ್ಯಾನ

‘ಒಂದು ಕವಲಿನ ಪಾರಮ್ಯ...’ ಎಂಬ ಲೇಖನದಲ್ಲಿ ಎ.ನಾರಾಯಣ ಅವರು (ಪ್ರ.ವಾ., ಅ. 5) ಹಿಂದೂ ಧರ್ಮದ ಆಚರಣೆಗಳನ್ನು ವೈದಿಕ ಮತ್ತು ಅವೈದಿಕ ಎಂದು ಸ್ಪಷ್ಟವಾಗಿ ಗೆರೆ ಎಳೆದಿದ್ದಾರೆ. ಆದರೆ ಇದು ಜನಸಾಮಾನ್ಯರಿಗೆ
ಎಷ್ಟು ಅರ್ಥವಾಗುತ್ತದೆ? ವಚನ ಚಳವಳಿಯಂತಹವನ್ನು ಹಿಂದೂ ಧರ್ಮದಲ್ಲಿನ ವೈಚಾರಿಕ ನೆಲೆಗಳು ಎಂದು ಗುರುತಿಸಬಹುದು. ಆದರೆ ಹಬ್ಬಗಳನ್ನು, ತೇರು ಎಳೆಯುವುದನ್ನು, ಒಂದಷ್ಟು ಕಿಲೊಮೀಟರ್‌ಗೂ ಬದಲಾಗುವ ಸಣ್ಣಪುಟ್ಟ ಆಚರಣೆಗಳನ್ನು ಯಾವ ರೀತಿ ನೋಡಲು ಸಾಧ್ಯ ಎಂಬುದು ಬಹಳ ಕ್ಲಿಷ್ಟವಾದ ಪ್ರಶ್ನೆಯಾಗಿದೆ.

ಗುರು ಜಗಳೂರು, ಹರಿಹರ

ದಸರಾ ರಜೆಗಿರಲಿ ಯೋಜಿತ ಚಟುವಟಿಕೆ

ದಸರಾ ರಜೆ ಇನ್ನೇನು ಆರಂಭವಾಗಲಿದೆ. ಈ ರಜೆಯನ್ನು ಮಕ್ಕಳು ಅರ್ಥಪೂರ್ಣವಾಗಿ ಕಳೆಯದಿದ್ದರೆ ಹೇಗೆ? ಪ್ರಸ್ತುತ ಮೊಬೈಲ್ ಫೋನ್‌, ಟಿ.ವಿ. ಹಾಗೂ ಕಂಪ್ಯೂಟರ್ ಹಾವಳಿ ಪ್ರತಿ ಮನೆಯನ್ನೂ ಆವರಿಸಿದೆ. ಮಕ್ಕಳು ರಜಾ ಅವಧಿಯಲ್ಲಿ ಇವುಗಳ ಮುಂದೆ ಕೂತು ಗೇಮ್‌ ಆಡುತ್ತಾ ಮಾನಸಿಕ ಒತ್ತಡಕ್ಕೆ ಸಿಲುಕುತ್ತಾರೆ. ಇದು ತಪ್ಪಬೇಕು. ರಜಾ ಅವಧಿಯಲ್ಲಿ ಮಕ್ಕಳಿಗೆ ಒಳಾಂಗಣ ಕ್ರೀಡೆಗಳಿಗಿಂತ ಹೊರಾಂಗಣ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಗಾಳಿಪಟ ಆಡಿಸುವುದು, ಗೋಲಿ ಆಟ, ಚಿನ್ನಿದಾಂಡು, ಸಂಬಂಧಿಕರ ಊರುಗಳಿಗೆ ಸುತ್ತಾಟ, ಅಜ್ಜ ಅಜ್ಜಿಯರಿಂದ ಕಥೆ ಹೇಳಿಸಿ
ಕೊಳ್ಳುವುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಜಾತ್ರೆ ಹಾಗೂ ಉತ್ಸವಗಳಲ್ಲಿ ನಾಟಕಗಳನ್ನು ನೋಡಿ ಸಂಭ್ರಮಿಸುವಂತಹ ಹತ್ತು ಹಲವು ಕಾರ್ಯಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾದರೆ ಎಷ್ಟೊಂದು ಚಂದ ಅಲ್ಲವೇ?

ಇದರಿಂದ ಮಕ್ಕಳು ಒತ್ತಡರಹಿತವಾಗಿ ಮೋಜಿನ ಜೊತೆ ರಜೆಯ ಮಜವನ್ನೂ ಅನುಭವಿಸಿದಂತೆ ಆಗುತ್ತದೆ. ಮಕ್ಕಳ ಚಿಂತನಾಲಹರಿ ಬದಲಾಗಿ ಅವರ ಜ್ಞಾನ ಮತ್ತಷ್ಟು ವಿಸ್ತಾರವಾಗುತ್ತದೆ. ಸ್ನೇಹಬಾಂಧವ್ಯ ಹೆಚ್ಚಾಗಿ ಮಕ್ಕಳ ಏಕಾಂಗಿತನ ದೂರವಾಗುತ್ತದೆ. ಈ ದಿಸೆಯಲ್ಲಿ ಮಕ್ಕಳ ಮನಸ್ಸನ್ನು ಪ್ರಫುಲ್ಲಗೊಳಿಸಲು ಪೋಷಕರು ಮುಂದಾಗಬೇಕು.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT