ಜನದಟ್ಟಣೆಯಿಂದ, ಲಕ್ಷಾಂತರ ವಾಹನಗಳು ಉಗುಳುವ ಹೊಗೆಯಿಂದ, ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯದಿಂದ ಮತ್ತು ಕಟ್ಟಡ ಉದ್ದಿಮೆಯೆಂಬ ಬ್ರಹ್ಮರಾಕ್ಷಸ ಸ್ವರೂಪದ ಬೆಳವಣಿಗೆಗಳಿಂದ ಉದ್ಯಾನನಗರಿ ಬೆಂಗಳೂರು ಬವಣೆಪಡುತ್ತಿದೆ. ಒಂದು ಪ್ರದೇಶದ ಪರಿಸರ ಸುಸ್ಥಿರತೆಯನ್ನು ಮಾಪನ ಮಾಡಲು ಪರಿಸರ ವಿಜ್ಞಾನದಲ್ಲಿ ‘ಧಾರಣಾ ಸಾಮರ್ಥ್ಯ’ ಎಂಬ ಮಾನದಂಡವನ್ನು ಬಳಸಲಾಗುತ್ತದೆ. ಆ ಧಾರಣಾ ಸಾಮರ್ಥ್ಯವನ್ನು ಈಗಾಗಲೇ ಮೀರಿ ಬೆಂಗಳೂರು ಬೆಳೆಯುತ್ತಿದೆ. ಇದನ್ನು ತಡೆದು, ಬೆಂಗಳೂರೇ ಕರ್ನಾಟಕವಲ್ಲ ಎಂಬುದನ್ನು ಅರಿತು, ಕೋಲಾರ, ತುಮಕೂರು, ಮಂಡ್ಯದಂತಹ ಅಕ್ಕಪಕ್ಕದ ನಗರಗಳನ್ನು ಬೆಳೆಸಲು ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ ಅದರ ಬದಲು, ರಾಜಧಾನಿಯನ್ನೇ ಬೆಳೆಸಲು ಮುಂದಾಗಿರುವುದು ದುರ್ದೈವ.