ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಲಾರಿ ಅಪಘಾತವಾಗಿ ಮಗುಚಿ ಬಿದ್ದಿತ್ತು. ಅಲ್ಲಿ ಸೇರಿದ ಜನರು ಚಾಲಕ, ಕ್ಲೀನರ್ ಅವರನ್ನು ರಕ್ಷಣೆ ಮಾಡುವುದು ಬಿಟ್ಟು, ಲಾರಿಯಲ್ಲಿ ಇದ್ದ ಸೋಪು, ಶಾಂಪೂ ಮತ್ತಿತರ ವಸ್ತುಗಳನ್ನು ಎಷ್ಟು ಸಿಗುತ್ತದೋ ಅಷ್ಟನ್ನು ಎತ್ತಿಕೊಂಡು ಓಡುತ್ತಿದ್ದರು. ಮತ್ತೊಮ್ಮೆ, ಪೆಟ್ರೋಲ್ ತುಂಬಿದ ಲಾರಿ ಮಗುಚಿದಾಗ ಜನರು ಅಪಾಯ ಲೆಕ್ಕಿಸದೆ, ಮನೆಯಲ್ಲಿನ ಪಾತ್ರೆ, ಚೊಂಬು, ಬಕೆಟ್ನಲ್ಲಿ ಸಿಕ್ಕಷ್ಟು ಪೆಟ್ರೋಲ್ ತುಂಬಿಸಿಕೊಂಡು ಓಡುತ್ತಿದ್ದರು.