ಇತ್ತೀಚಿನ ರಾಜಕೀಯ ವಿದ್ಯಮಾನವನ್ನು ನೋಡುವಾಗ ರೈತರ ಸಾಲ ಮನ್ನಾ ಎಂಬುದು ಚುನಾವಣಾ ತಂತ್ರ ಎಂಬುದು ಎಂಥ ಮೂರ್ಖನಿಗೂ ಅರ್ಥವಾಗುತ್ತದೆ. ಯಾವ ರಾಜಕಾರಣಿಗೂ ರೈತರ ಬಗ್ಗೆ ನೈಜ ಕಾಳಜಿ ಇಲ್ಲ. ಇದ್ದಿದ್ದರೆ ಅವರು ರೈತರನ್ನು ಸಾಲದ ಕೂಪಕ್ಕೆ ತಳ್ಳುವಂಥ ವಿಚಾರ ಮಾಡುತ್ತಿರಲಿಲ್ಲ. ಒಬ್ಬ ರೈತ ಮಹಿಳೆಯಾಗಿ ನಾನು ಹೇಳುವುದೇನೆಂದರೆ, ನಮಗೆ ಸಾಲಮನ್ನಾ ಬೇಡ. ಬದಲಿಗೆ ನಾವು ಬೆಳೆಯುವ ಬೆಳೆಗೆ ವೈಜ್ಞಾನಿಕ ದರ ನಿಗದಿ ಮಾಡಿ. ಆ ಮೂಲಕ ನಾವು ಗೌರವದಿಂದ ಬದುಕಲು ಸಾಧ್ಯವಾಗುವಂತೆ ಮಾಡಿ. ನಾವು ಕಷ್ಟಪಟ್ಟು ಬೆಳೆಸಿದ ದವಸಧಾನ್ಯವನ್ನೋ, ಹಣ್ಣು–ತರಕಾರಿಗಳನ್ನೋ ಮಾರುಕಟ್ಟೆಗೆ ಒಯ್ದರೆ ನಮಗೆ ಸಿಗುವುದು ಅತ್ಯಲ್ಪ. ಆದರೆ ಮಧ್ಯವರ್ತಿಗಳು ಅದನ್ನು ಮಾರಾಟ ಮಾಡುವಾಗ ಅದಕ್ಕೆ ದುಪ್ಪಟ್ಟು ದರ ವಿಧಿಸುತ್ತಾರೆ. ಉದಾಹರಣೆಗೆ ರೈತರು ಬಾಳೆಹಣ್ಣು ಮಾರಾಟ ಮಾಡಿದಾಗ ಅವರಿಗೆ ಸಿಗುವುದು ಕೆ.ಜಿ.ಗೆ ₹ 16. ವ್ಯಾಪಾರಿಗಳು ಅದನ್ನು ₹ 30ಕ್ಕೆ ಮಾರಾಟ ಮಾಡುತ್ತಾರೆ.