ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಮರಾಠಿ ಮಾದರಿಯನ್ನೂ ನೋಡೋಣ

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

86 ನೇ ಮರಾಠಿ ಸಾಹಿತ್ಯ ಸಮ್ಮೇಳನ ಜ. 11ರಿಂದ 13ರವರೆಗೆ ರತ್ನಾಗಿರಿ ಜಿಲ್ಲೆಯ ಚಿಪಳೂಣ ಎಂಬಲ್ಲಿ ಜರುಗಿತು. ನಾಗನಾಥ ಕೊತಾಪಲ್ಲೆ ಎಂಬುವವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮರಾಠಿಯಲ್ಲಿ ಚುನಾವಣೆ ಮುಖಾಂತರ ಸದಸ್ಯರೇ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಈ ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು.

ಚಿಪಳೂಣ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಕೊಡಲಿ ಚಿಹ್ನೆಯನ್ನು ಬಳಸಲಾಗಿತ್ತು. ರತ್ನಾಗಿರಿಯು ಪರಶುರಾಮನ ಸೃಷ್ಟಿ. ಇವತ್ತಿಗೂ ಅವನದೇ ಅಧಿಪತ್ಯ ಇದೆ ಎಂಬ ಪೌರಾಣಿಕ ನಂಬಿಕೆ ಅಲ್ಲಿನ ಜನಗಳದ್ದು. ಹೀಗಾಗಿ ಕೊಡಲಿಯು ಸಮ್ಮೇಳನದ ಚಿಹ್ನೆಯಾಗಿತ್ತು! ತಕ್ಷಣ ಅಬ್ರಾಹ್ಮಣರೆಲ್ಲರೂ ಸಿಡಿದೆದ್ದರು. ಕಟುವಾಗಿ ವಿರೋಧಿಸಿದರು. ಮುದ್ರಿತ ಆಮಂತ್ರಣ ಪತ್ರಿಕೆಯನ್ನು ರದ್ದುಪಡಿಸಿ, ಮತ್ತೆ ಹೊಸ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಬೇಕಾಯಿತು.

ಕಳೆದ ವರ್ಷ ಠಾಣೆಯಲ್ಲಿ ಜರುಗಿದ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ನಾಥೂರಾಮ್ ಗೋಡ್ಸೆಯನ್ನು ಶ್ರೇಷ್ಠ ಲೇಖಕ ಎಂದು ಬಣ್ಣಿಸಲಾಗಿತ್ತು. ಆಗ ಇದೇ ಮಾದರಿ ಪ್ರತಿಭಟನೆ ನಡೆದಿತ್ತು. ಪತ್ರಿಕೆಗಳು `ಹೇ ರಾಮ್!' ಎಂದು ಉದ್ಗಾರ ತೆಗೆದವು. ಸಾಂಗ್ಲಿ ಸಮ್ಮೇಳನದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ ಭಾಗವಹಿಸಿದ್ದಕ್ಕೆ ಸ್ವತಃ ಸಮ್ಮೇಳನದ ಅಧ್ಯಕ್ಷರಾದ ಅರುಣ ಸಾಧೂ ಎಂಬವರು ವಿರೋಧಿಸಿದರು. ಮುಂಬೈ ಸಮ್ಮೇಳನದಲ್ಲಿ ಸರ್ಕಾರ ಮತ್ತು ಸಂಘಟಕರ ನಡುವೆ ಅನುದಾನದ ವಿಷಯದಲ್ಲಿ ಜಗಳ ಏರ್ಪಟ್ಟಿತ್ತು.

ಸಾಹಿತಿಗಳನ್ನು `ಎತ್ತು' ಎಂದು ಹಂಗಿಸಲಾಗಿತ್ತು. ತಕ್ಷಣ ಸಾಹಿತಿಗಳೆಲ್ಲ ಅನುದಾನವನ್ನು ನಿರಾಕರಿಸಿದರು. ಬೆಳಗಾವಿ ಸಮ್ಮೇಳನದಲ್ಲಿ ವಿಲಾಸರಾವ್ ದೇಶಮುಖ ಅವರು ಒಬ್ಬ ಸಾಮಾನ್ಯ ಸಭಿಕರಂತೆ ಪ್ರೇಕ್ಷಕರ ನಡುವೆ ಕುಳಿತು ಸಮ್ಮೇಳನದ ಮಾತು ಆಲಿಸಿದರು. ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳಿಗೆ ಮಣೆ ಹಾಕುವ ಪದ್ಧತಿ ಇಲ್ಲ.

ಮರಾಠಿಗರು ಸಾಹಿತ್ಯ- ಸಂಸ್ಕೃತಿಯ ಪ್ರಿಯರು. ಮಕ್ಕಳನ್ನು ಸಹ ಅವರು ಹಾಗೆಯೇ ಬೆಳೆಸುತ್ತಾರೆ. ಸಾಹಿತ್ಯ, ಸಂಗೀತ, ಭಾಷೆಯ ಬಗೆಗೆ ಅಭಿಮಾನ ಬೆಳೆಸುವ ನಿಟ್ಟಿನಲ್ಲಿ ತುಂಬಾ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಇವತ್ತಿಗೂ ಇಡೀ ರಾತ್ರಿ ಕುಳಿತು ಸಂಗೀತ ಆಲಿಸುವ, ಕವಿತೆ ಕೇಳುವ, ಮೆಚ್ಚಿ ತಲೆ ತೂಗುವ, ಚಪ್ಪಾಳೆ ಬಾರಿಸಿ ಹುರಿದುಂಬಿಸುವುದನ್ನು ಕಾಣುತ್ತೇವೆ. ಉಳಿದ ಸಾಹಿತ್ಯಗೋಷ್ಠಿಗಿಂತ ಕವಿಗೋಷ್ಠಿಗಂತೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.

ಸಮ್ಮೇಳನದ ಮುಖ್ಯ ವೇದಿಕೆಯ ಜೊತೆಗೆ ಮೂರೋ, ನಾಲ್ಕೋ ಉಪ ವೇದಿಕೆಗಳು ಇರುತ್ತವೆ. ಎಲ್ಲವೂ ಕೂಗಳತೆಯಲ್ಲೇ ಇರುತ್ತವೆ. ಏಕ ಕಾಲಕ್ಕೆ ಸಮಾನಾಂತರವಾಗಿ ಗೋಷ್ಠಿಗಳು ಜರುಗುತ್ತವೆ. ಮುಖ್ಯ ವೇದಿಕೆಯಲ್ಲಿ ಶ್ರೇಷ್ಠ ಹಿರಿಯ ಕವಿಗಳ ಕವಿಗೋಷ್ಠಿ ನಡೆದಾಗ, ಉಪ ವೇದಿಕೆಯಲ್ಲಿ ಉದಯೋನ್ಮುಖರಿಗಾಗಿ ಕವಿಗೋಷ್ಠಿಯನ್ನು ಏರ್ಪಡಿಸಲಾಗುತ್ತದೆ. ಇದಕ್ಕೆ ಅವರು `ಕವಿ ಕಟ್ಟೆ' ಎಂದು ಕರೆಯುತ್ತಾರೆ. ಇಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಆಮಂತ್ರಿತರೇ ಇರಬೇಕು ಎಂದಿಲ್ಲ. ಸಂಜೆ 6ಕ್ಕೆ ಆರಂಭವಾಗುವ ಈ ಕವಿಗೋಷ್ಠಿ ಮರುದಿನ ಸೂರ್ಯ ಉದಯಿಸಿದರೂ ಕವಿ ಕವಿತೆಯನ್ನು ಓದುತ್ತಲೇ ಇರುತ್ತಾನೆ. ಜನ ಅಹೋರಾತ್ರಿ ಕುಳಿತು ಆಲಿಸುತ್ತಾರೆ; ಸಂತೋಷ ಪಡುತ್ತಾರೆ. ಇದು ಮರಾಠಿಯ ಜಾಯಮಾನ.

ಪ್ರಾಚೀನ ಸಂತ ಸಾಹಿತ್ಯದಿಂದ ಹಿಡಿದು, ಆಧುನಿಕ ಕಾರ್ಪೊರೇಟ್ ಜಗತ್ತಿನ ವಿದ್ಯಮಾನಗಳು, ರೈತರ ಆತ್ಮಹತ್ಯೆ, ದಲಿತ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೀಗೆ ಪ್ರಚಲಿತ ವಿಷಯಗಳ ಮೇಲೆ ಸಂವಾದ ನಡೆಯುತ್ತವೆ. ಇಂಥಲ್ಲಿ ಗಂಭೀರ ಚರ್ಚೆಗೆ ಅವಕಾಶ ಇಲ್ಲವೆಂದು ಬುದ್ಧಿಜೀವಿಗಳು ಗೊಣಗುವುದು ಉಂಟು. ಮರಾಠಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುವುದೇ ಇಲ್ಲ. ಇಲ್ಲಿ ನಡೆಯುವ ಮೆರವಣಿಗೆಗೆ `ಗ್ರಂಥ ದಿಂಡಿ' ಎಂದು ಕರೆಯುತ್ತಾರೆ. ಪಲ್ಲಕ್ಕಿಯಲ್ಲಿ `ಜ್ಞಾನೇಶ್ವರಿ' ಮತ್ತು `ತುಕಾರಾಮ ಗಾಥಾ' ಎಂಬ ಗ್ರಂಥವನ್ನು ಇಟ್ಟು ಪೂಜಿಸಿ, ಶ್ರದ್ಧೆಯಿಂದ ಊರು ತುಂಬ ಸುತ್ತಾಡುತ್ತಾರೆ. ಸ್ವತಃ ಸಮ್ಮೇಳನ ಅಧ್ಯಕ್ಷರೇ ಪಲ್ಲಕ್ಕಿ ಹೊರುತ್ತಾರೆ. ಮರಾಠಿ ಜನರ ಮೆಚ್ಚಬಹುದಾದ ಮತ್ತೊಂದು ಸಂಗತಿ ಎಂದರೆ, ಪ್ರತಿ ಸಮ್ಮೇಳನದಲ್ಲಿ ಅನ್ಯ ಭಾಷಿಕರ ಶ್ರೇಷ್ಠ ಲೇಖಕರನ್ನು ಆಮಂತ್ರಿಸುತ್ತಾರೆ. ಕನ್ನಡದ ಗೋಕಾಕ, ಕಾರ್ನಾಡ, ಭೈರಪ್ಪರಿಗೆ ಈ ಗೌರವ ಸಂದಿದೆ. ಭೈರಪ್ಪನವರ ಕಾದಂಬರಿಗಳು, ಕಾರ್ನಾಡರ ನಾಟಕಗಳು ಮಹಾರಾಷ್ಟ್ರದ ತುಂಬೆಲ್ಲ ಜನಪ್ರಿಯತೆಯನ್ನು ಗಳಿಸಿವೆ. ಅವರ ಪುಸ್ತಕಗಳಿಗೆ ಅಪಾರ ಬೇಡಿಕೆ ಇವೆ. ಕೆಲವರು ಇಲ್ಲಿ ಪುರೋಹಿತಶಾಹಿಯ ವಾಸನೆಯನ್ನೂ ಗುರುತಿಸುತ್ತಾರೆ. ಇತ್ತೀಚೆಗೆ ಸುಧಾಮೂರ್ತಿ ಮನೆಮಾತಾಗಿದ್ದಾರೆ. ಮರಾಠಿಗರ ಸಾಹಿತ್ಯ ಪ್ರೀತಿ ಎಷ್ಟು ಕೊಂಡಾಡಿದರೂ ಕಡಿಮೆ.

ಸಾಂಗ್ಲಿಯ ಮುಖ್ಯ ವೇದಿಕೆಯ ಪ್ರವೇಶ ದ್ವಾರದಲ್ಲಿ ಮರಾಠಿಯ ಶ್ರೇಷ್ಠ ಲೇಖಕರ ಭಾವಚಿತ್ರಗಳನ್ನು ಮತ್ತು ಅವರ ಶ್ರೇಷ್ಠ ಕೃತಿಯ ಪ್ರತಿಕೃತಿಯನ್ನು ಬೃಹದಾಕಾರದ ಕಟೌಟ್ ರೀತಿಯಲ್ಲಿ ರಚಿಸಿ ನಿಲ್ಲಿಸಿದ್ದರು. ಪುಸ್ತಕದ ಮಳಿಗೆಗಳಲ್ಲಿ ಕಾರ್ನಾಡ, ಭೈರಪ್ಪರ ಆಳೆತ್ತರದ ಭಾವಚಿತ್ರಗಳನ್ನು ನೋಡಿ ನಾನು ದಂಗು ಬಡಿದು ಹೋಗಿದ್ದೇನೆ. ಪುಸ್ತಕದ ಮಳಿಗೆಗಳಲ್ಲೂ ಅಪಾರವಾದ ಜನಜಂಗುಳಿ ಇರುತ್ತದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಪುಸ್ತಕವನ್ನು ಖರೀದಿಸುವುದನ್ನು ಕಾಣಬಹುದು. ಮಹಿಳೆಯರಂತೂ ಮದುವೆ ಮನೆಗಳಲ್ಲಿ ಸಡಗರದಿಂದ ಓಡಾಡಿದಂತೆ ಅಲಂಕರಿಸಿಕೊಂಡು ಸಮ್ಮೇಳನದ ಮೆರುಗನ್ನು ಹೆಚ್ಚಿಸುತ್ತಾರೆ. ಪ್ರತಿ ವರ್ಷ ಪುಸ್ತಕದ ಮಳಿಗೆಗಳು ಕೋಟಿಗಿಂತಲೂ ಹೆಚ್ಚು ಆದಾಯವನ್ನು ಗಳಿಸುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಶೆರೆ, ಸೇಂದಿ, ಗುಟಕಾದ ಪ್ರಾಯೋಜಕರಿಗೆ ಅವಕಾಶ ಇಲ್ಲ. ಜನರೇ ಬೀದಿಗಿಳಿದು ಇದನ್ನು ವಿರೋಧಿಸುತ್ತಾರೆ. ಸರ್ಕಾರದ ಜುಜುಬಿ ಅನುದಾನಕ್ಕೆ ಕೈ ಒಡ್ಡದೇ, ಸ್ಥಳೀಯ ಸಂಘ ಸಂಸ್ಥೆಗಳೇ ಹಣ ಕೊಡಲು ಮುಂದಾಗುತ್ತಾರೆ. ಸಮ್ಮೇಳನಕ್ಕೆ ಬಂದ ಹಲವು ಶ್ರೇಷ್ಠ ಲೇಖಕರು ಪುಸ್ತಕದ ಮಳಿಗೆಗಳಲ್ಲಿ ಕುಳಿತಿರುತ್ತಾರೆ. ಜನ ಅವರ ಪುಸ್ತಕಗಳನ್ನು ಖರೀದಿಸಿ, ಹಸ್ತಾಕ್ಷರ ಪಡೆಯುತ್ತಾರೆ. ಸಮ್ಮೇಳನ ಮುಗಿಸಿ ಹೋಗುವಾಗ ಪುಸ್ತಕಗಳ ಗಂಟು ಹೊತ್ತು ಮನೆಗಳಿಗೆ ತೆರಳುವ ಸಂಭ್ರಮವನ್ನು ನೋಡುವುದೇ  ಹಬ್ಬ.

ಈ ಸಮ್ಮೇಳನದಲ್ಲಿ ಕಾವ್ಯ, ಕಾದಂಬರಿ, ಸಂತ ಸಾಹಿತ್ಯ ಇತ್ಯಾದಿಗಳ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಜಾಗತೀಕರಣದ ಪ್ರಭಾವ, ಪ್ರಚಲಿತ ರಾಜಕೀಯ ವಿದ್ಯಮಾನಗಳು, ವರ್ತಮಾನದ ತಲ್ಲಣ, ಆತಂಕಗಳು ಇವೆಲ್ಲವುಗಳ ಕುರಿತು ಗಂಭೀರವಾದ ಚರ್ಚೆ ಚಿಪಳೂಣ ಸಮ್ಮೇಳನದಲ್ಲಿ ಜರುಗಿತು. `ಗಡಿ ಪ್ರದೇಶದ ಮರಾಠಿಗರನ್ನು ಕರ್ನಾಟಕ ಸರ್ಕಾರ ಕೆಟ್ಟ ರೀತಿಯಿಂದ ನೋಡಿಕೊಳ್ಳುತ್ತಿದೆ. ಮರಾಠಿ ಭಾಷಿಕರೂ ಭಾರತೀಯರು ಎಂಬುದನ್ನು ಮರೆಯಬಾರದು' ಎಂದು ಸಮ್ಮೇಳನದ ಅಧ್ಯಕ್ಷರು ಹೇಳಿದ ಮಾತನ್ನು ಪತ್ರಿಕೆಗಳು ವರದಿ ಮಾಡಿವೆ. ಅಪರೂಪಕ್ಕೆ ಎಂಬಂತೆ ಈ ಬಾರಿ ಶರದ್ ಪವಾರ್ ಅವರನ್ನು ಆಮಂತ್ರಿಸಲಾಗಿತ್ತು. ಅವರು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗ್ರಂಥ ಪ್ರದರ್ಶನ ನಡೆಸಿ, ಸಾಹಿತ್ಯಿಕ ವಾತಾವರಣವನ್ನು ನಿರ್ಮಿಸುವಂತೆ ಸಲಹೆ ನೀಡಿದರು.

ಸಂತ ಸಾಹಿತ್ಯದ ಚರ್ಚೆ ಕಾಲಕ್ಕೆ ಕನ್ನಡದ ಬಸವೇಶ್ವರರನ್ನು ಅವರ ಸಾಮಾಜಿಕ ಕಾರ್ಯವನ್ನು ತುಂಬಾ ಕೊಂಡಾಡಲಾಯಿತು. ಓದುವ ಸಂಸ್ಕೃತಿಗೆ ಈಗ ಹೆಚ್ಚಿನ ಮಹತ್ವ ನೀಡಬೇಕಾದ ಕಾಲ ಬಂದಿದೆ ಎಂಬ ಮಾತೂ ಕೇಳಿಬಂತು. ಕೊತಾಪಲ್ಲೆ ಅವರು ದಲಿತ ಲೇಖಕರಾಗಿದ್ದರೂ ಮರಾಠಿ ಜನ ಜಾತಿಭೇದವನ್ನು ಮರೆತು ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಅವರು ವ್ಯವಸ್ಥೆಯ ವಿರುದ್ಧ ಸಂಘರ್ಷ ಮಾಡುವ ಸಾಹಿತ್ಯದ ಬಗ್ಗೆ ಮತ್ತು ಮರಾಠಿ ಸಾಹಿತ್ಯ ಏಕೆ ವೈಶ್ವಿಕ ಆಗಲಿಲ್ಲ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದರು. ಇದರ ಕಾರಣವನ್ನು ಆಳವಾಗಿ ಬೇರೂರಿದ ಜಾತೀಯತೆಯಲ್ಲಿ ಹುಡುಕಿದರು.

ಚಿಪಳೂಣ ಸಾಹಿತ್ಯ ಸಮ್ಮೇಳನ ಹಲವು ಬಗೆಯ ವಿವಾದಗಳಿಗೆ ಅವಕಾಶ ಮಾಡಿಕೊಟ್ಟಿತು. ವಿಚಿತ್ರವೆಂದರೆ ರಾಜಕಾರಣಿಗಳಿಗಾಗಿಯೇ ಒಂದು ವಿಶೇಷ ಸಂವಾದ ಗೋಷ್ಠಿ ಏರ್ಪಡಿಸಲಾಗಿತ್ತು. `ನಾನೇನು ಓದುತ್ತೇನೆ' ಎಂಬ ವಿಷಯದ ಬಗ್ಗೆ ಭಾಗವಹಿಸಿದ್ದ ಶಾಸಕರು, ಸಂಸದರು ಮಾತನಾಡಿ ಜನಮನ ಗೆದ್ದರು. ಈ ಸಲ ಸುಮಾರು 40 ಸಾವಿರ ಜನ ಸಮ್ಮೇಳನಕ್ಕೆ ಆಗಮಿಸಿದ್ದರು ಎಂದು ವರದಿಯಾಗಿದೆ. 200 ಪುಸ್ತಕಗಳ ಮಳಿಗೆಗಳು ಸುಮಾರು ರೂ 5 ಕೋಟಿಯಷ್ಟು ಆದಾಯ ಗಳಿಸಿದೆ.

ಒಟ್ಟಿನಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನವು ಇತ್ತೀಚೆಗೆ ಹಲವು ವಾದ-ವಿವಾದಗಳಿಗೆ ಗುರಿಯಾಗುತ್ತಿದೆ. ಆದರೂ ಮರಾಠಿಗರ ಸಾಹಿತ್ಯ, ಸಂಸ್ಕೃತಿಯ ಪ್ರೀತಿ ಮಾತ್ರ ಅನನ್ಯವಾದುದು. ನಾಡಿನ ಹಲವು ಊರುಗಳಲ್ಲಿ ಚಿಕ್ಕಪುಟ್ಟ ಸಾಹಿತ್ಯ ಸಮ್ಮೇಳನಗಳು ಜರುಗುತ್ತಲೇ ಇರುತ್ತವೆ. ಬೆಳಗಾವಿ ಸುತ್ತಮುತ್ತಲೂ ಎಂಟರಿಂದ ಹತ್ತು ಹಳ್ಳಿಗಳಲ್ಲಿ ಗ್ರಾಮೀಣ ಸಾಹಿತ್ಯ ಸಮ್ಮೇಳನ ನಡೆಯುವುದನ್ನು ಕಾಣಬಹುದು. ಸರ್ಕಾರದ ಅನುದಾನಕ್ಕೆ ಕೈ ಒಡ್ಡದೇ ಸ್ಥಳೀಯರೇ ವಂತಿಗೆಯನ್ನು ಸಂಗ್ರಹಿಸುತ್ತಾರೆ. ಮರಾಠಿ ಶ್ರೇಷ್ಠ ಲೇಖಕರನ್ನು ಆಮಂತ್ರಿಸುತ್ತಾರೆ. ಜನ ಮನೆಯಿಂದಲೇ ಬುತ್ತಿಯನ್ನು ಕಟ್ಟಿಕೊಂಡು ಬರುತ್ತಾರೆ. ಸಾಹಿತ್ಯ, ಸಂಸ್ಕೃತಿಯ ಬಗೆಗೆ ಬಾಯಿ ತುಂಬಾ ಮಾತನಾಡುತ್ತಾರೆ. ವಾದ ಹಾಕುತ್ತಾರೆ, ಸಂತೋಷ ಪಡುತ್ತಾರೆ. ಅವರ ಸಾಹಿತ್ಯಿಕ ರಸಿಕತೆ ಮಾತ್ರ ಮೆಚ್ಚುವಂತಹದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT