ದುಬೈ (ಪಿಟಿಐ): ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
11 ಪಂದ್ಯಗಳಿಂದ ಎಂಟು ಅಂಕ ಗಳಿಸಿರುವ ರಾಹುಲ್ ಬಳಗಕ್ಕೆ ಪ್ಲೇ ಆಫ್ ಪ್ರವೇಶದ ಹಾದಿಯು ಕಠಿಣವಾಗಿದೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ರನ್ ಸರಾಸರಿಯಿಂದ ಗೆದ್ದರೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಆದರೆ, 10 ಪಾಯಿಂಟ್ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಏಯಾನ್ ಮಾರ್ಗನ್ ಬಳಗದ ಸವಾಲನ್ನು ಮೆಟ್ಟಿನಿಲ್ಲುವುದು ಸುಲಭವಲ್ಲ.
ಟೂರ್ನಿಯಲ್ಲಿ ತಡವಾಗಿಯಾದರೂ ಪುಟಿದೆದ್ದಿರುವ ಕೋಲ್ಕತ್ತ ತಂಡದ ನವಪ್ರತಿಭೆ ವೆಂಕಟೇಶ್ ಅಯ್ಯರ್, ಆಲ್ರೌಂಡರ್ ಸುನೀಲ್ ನಾರಾಯಣ್, ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಲಾಕಿ ಫರ್ಗ್ಯುಸನ್ ಅವರ ಸವಾಲನ್ನು ಸಮರ್ಥವಾಗಿ ಎದುರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ‘ನಿಗೂಢ ಸ್ಪಿನ್ನರ್’ ವರುಣ್ ಚಕ್ರವರ್ತಿಯ ದಾಳಿಯನ್ನೂ ಎದುರಿಸಿ ನಿಲ್ಲಬೇಕು.
ಪಂಜಾಬ್ ಬಳಗದಲ್ಲಿ ಪ್ರತಿಭಾವಂತರ ದೊಡ್ಡ ದಂಡು ಇದೆ. ಆದರೆ ತಂಡವಾಗಿ ಆಡುವಲ್ಲಿ ಸೋಲುತ್ತಿದೆ. ಸ್ಪಿನ್ನರ್ ರವಿ ಬಿಷ್ಣೋಯಿ ಬಿಟ್ಟರೆ ಉಳಿದ ಬೌಲರ್ಗಳಿಂದ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಅನುಭವಿ ಮೊಹಮ್ಮದ್ ಶಮಿ, ಏಡನ್ ಮರ್ಕರಮ್ ಮತ್ತು ಹರಪ್ರೀತ್ ಬ್ರಾರ್ ವಿಕೆಟ್ ಕಿತ್ತುವಲ್ಲಿ ಯಶಸ್ವಿಯಾಗುತ್ತಿಲ್ಲ. ಮಯಂಕ್ ಅಗರವಾಲ್ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಸಂಶಯ. ಆದ್ದರಿಂದ ಇನಿಂಗ್ಸ್ ಆರಂಭದ ಹೊಣೆ ನಾಯಕ ರಾಹುಲ್ ಮೇಲೆಯೇ ಇದೆ. ಮನದೀಪ್ ಸಿಂಗ್ ಮತ್ತು ಕ್ರಿಸ್ ಗೇಲ್ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಗೊಳ್ಳಬಹುದು.
‘ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿ ನಾವು ಸರಿಯಾಗಿ ಆಡಲಿಲ್ಲ. ಅದು ಸೋಲಿಗೆ ಕಾರಣವಾಯಿತು’ ಎಂದು ರಾಹುಲ್ ಹೇಳಿದ್ದಾರೆ.
ಟೂರ್ನಿಯಲ್ಲಿ 422 ರನ್ ಗಳಿಸಿರುವ ರಾಹುಲ್ ಮತ್ತು 10 ಪಂದ್ಯಗಳಿಂದ 193 ರನ್ ಗಳಿಸಿರುವ ಗೇಲ್ ಅವರಿಂದ ದೊಡ್ಡ ಇನಿಂಗ್ಸ್ನ ನಿರೀಕ್ಷೆ ಇದೆ. ಕೋಲ್ಕತ್ತದ ಬೌಲಿಂಗ್ ದಾಳಿಯನ್ನು ಎದುರಿಸಿ ನಿಂತರೆ ಮಾತ್ರ ದೊಡ್ಡ ಮೊತ್ತ ಪೇರಿಸಲು ಸಾಧ್ಯ.
ಪ್ಲೇ ಆಫ್ ಪೈಪೋಟಿಯಲ್ಲಿ ಉಳಿಯಬೇಕಾದರೆ ಪಂಜಾಬ್ ತಂಡಕ್ಕೆ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಲಿದೆ.