ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ನಡೆದ ಮೈದಾನಗಳಲ್ಲಿ ಕಾರ್ಯನಿರ್ವಹಿಸಿದ ಪಿಚ್ ಕ್ಯೂರೇಟರ್ ಮತ್ತು ಸಿಬ್ಬಂದಿಗಳಿಗೆ ₹ 42 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.
ಈ ಸಲದ ಏಷ್ಯಾ ಕಪ್ ಟೂರ್ನಿಯಲ್ಲಿ ನಡೆದ ಬಹುತೇಕ ಎಲ್ಲ ಪಂದ್ಯಗಳ ಸಂದರ್ಭದಲ್ಲಿಯೂ ಮಳೆ ಸುರಿದಿದೆ. ಈ ಸಂದರ್ಭಗಳಲ್ಲಿ ಮೈದಾನ ಸಿಬ್ಬಂದಿಯು ಚುರುಕುತನದಿಂದ ಕಾರ್ಯನಿರ್ವಹಿಸಿತ್ತು. ದೇಶ, ವಿದೇಶಗಳ ಕ್ರಿಕೆಟ್ ಪ್ರೇಮಿಗಳು ಮತ್ತು ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆಯಾಗಿತ್ತು.
‘ಕ್ರಿಕೆಟ್ ಆಟದ ಎಲೆ ಮರೆಯ ತಾರೆಯರಿಗೆ ಅಪಾರ ಅಭಿನಂದನೆಗಳು. ಅವರಿಗೆ ₹42 ಲಕ್ಷ ಬಹುಮಾನ ಘೋಷಿಸಲು ಹರ್ಷವಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯೊಂದಿಗೆ ಈ ಕಾರ್ಯ ಮಾಡುತ್ತಿದ್ದೇವೆ‘ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ‘ಎಕ್ಸ್‘ ಖಾತೆಯಲ್ಲಿ ಸಂದೇಶ ಹಾಕಿದ್ದಾರೆ.
'ಕ್ರಿಕೆಟ್ ಯಶಸ್ಸಿಗೆ ಇಂತಹ ತೆರೆಮರೆಯ ವ್ಯಕ್ತಿಗಳ ಪರಿಶ್ರಮ ಮತ್ತು ಬದ್ಧತೆಗಳೇ ಕಾರಣ. ಏಷ್ಯಾ ಕಪ್ ಟೂರ್ನಿಯು ಉತ್ತಮವಾಗಿ ನೆರೆವೇರಿದ ಅವರ ಕಾರ್ಯವನ್ನು ಗುರುತಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ‘ ಎಂದೂ ಶಾ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.