ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀಲ್ ಜೋಶಿ ಕ್ರಿಕೆಟ್ ಪಯಣ | ಗದುಗಿನಿಂದ ಆಯ್ಕೆ ಸಮಿತಿಯ ಗದ್ದುಗೆಯವರೆಗೆ..

ಎಡಗೈ ಆಲ್‌ರೌಂಡರ್
Last Updated 5 ಮಾರ್ಚ್ 2020, 2:26 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬರೋಬ್ಬರಿ ಮೂವತ್ತು ವರ್ಷಗಳ ಹಿಂದಿನ ಮಾತು. ಪ್ರತಿದಿನ ನಸುಕಿನಲ್ಲಿಯೇ ಗದುಗಿನಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಬಂದು ಮರಳುತ್ತಿದ್ದ ಆ ಬಾಲಕನಲ್ಲಿ ಭಾರತ ಕ್ರಿಕೆಟ್‌ ತಂಡದಲ್ಲಿ ಆಡಬೇಕೆಂಬ ಕನಸು ನಲಿಯುತ್ತಿತ್ತು.

ಕರ್ನಾಟಕ ರಣಜಿ ತಂಡ, ಭಾರತ ತಂಡಕ್ಕೆ ಆಯ್ಕೆಯಾಗಲು ಆ ಹುಡುಗ ಪಟ್ಟ ಶ್ರಮ ಅಪಾರ. ಆಯ್ಕೆಗಾರರ ಗಮನ ಸೆಳೆಯಲು ಮಾಡಿದ ಪ್ರಯತ್ನಗಳು ಹತ್ತಾರು. ಆದರೆ ಅಂದಿನ ಆ ಹುಡುಗ ಬೇರಾರೂ ಅಲ್ಲ. ಇದೀಗ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಗದ್ದುಗೆಯನ್ನೇರಲಿರುವ ಸುನೀಲ್ ಜೋಶಿ.

ಇದರೊಂದಿಗೆ 49 ವರ್ಷದ ಸುನೀಲ್ ವೃತ್ತಿ ಬದುಕಿನ ಮತ್ತೊಂದು ಪ್ರಮುಖ ಸಾಧನೆಯಾಗಿದೆ. 1990ರಲ್ಲಿ ಅವರ ತವರೂರಾದ ಗದುಗಿನಲ್ಲಿ ಕ್ರಿಕೆಟ್‌ ತರಬೇತಿ ಸೌಲಭ್ಯಗಳ ಕೊರತೆಯಿತ್ತು. ಎಡಗೈ ಸ್ಪಿನ್ನರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದ ಸುನೀಲ್ ಅವರಲ್ಲಿ ಪ್ರತಿಭೆ ಇತ್ತು. ಅವರು ಹುಬ್ಬಳ್ಳಿಯ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು. ಪ್ರತಿದಿನ ಬೆಳಗಿನ ಜಾವ 60 ಕಿ.ಮೀ ದೂರದ ಪ್ರಯಾಣ ಮಾಡಿ ಬಂದು, ಅಭ್ಯಾಸ ಮಾಡುತ್ತಿದ್ದರು. ಮತ್ತೆ ಮರಳಿ ಗದುಗಿಗೆ ತೆರಳಿ ಶಾಲೆಗೆ ಹೋಗುತ್ತಿದ್ದರು.

ಆ ಸಮಯದಲ್ಲಿ ಉತ್ತರ ಕರ್ನಾಟಕದ ‌ಯಾವುದೇ ನಗರದಲ್ಲಿಯೂ ಟರ್ಫ್‌ ವಿಕೆಟ್‌ ಇರಲಿಲ್ಲ. ಅದರಿಂದಾಗಿ ಬೆಂಗಳೂರಿನ ಹುಡುಗರೊಂದಿಗೆ ಪೈಪೋಟಿ ಮಾಡುವಲ್ಲಿ ಹಿಂದೆ ಬಿದ್ದವರೇ ಹೆಚ್ಚು. ಆದರೆ, ಸುನೀಲ್ ಎಲ್ಲ ಸವಾಲುಗಳನ್ನೂ ಎದುರಿಸಿ ಗೆದ್ದರು. 1992–93ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದರು. ಹುಬ್ಬಳ್ಳಿಯಲ್ಲಿ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅವರು 83 ರನ್‌ ಗಳಿಸಿದ್ದರು. ಕಾರಣಾಂತರಗಳಿಂದ ಆ ಪಂದ್ಯವು ಪೂರ್ಣವಾಗಲಿಲ್ಲ. ಆದರೆ, ಸುನೀಲ್ ಬೆಳವಣಿಗೆಯ ಓಟ ಮುಂದುವರಿಯಿತು. ಕರ್ನಾಟಕ ತಂಡದ ಹಲವು ಸಾಧನೆಗಳಿಗೆ ಕಾಣಿಕೆ ನೀಡಿದರು.

1996ರಲ್ಲಿ ಭಾರತ ತಂಡಕ್ಕೂ ಆಯ್ಕೆಯಾದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದರು. ಆ ತಂಡದಲ್ಲಿದ್ದ ಕನ್ನಡಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸುನೀಲ್ ಕೂಡ ಆಡಿದ್ದು ಇತಿಹಾಸ. ಬಲವಾದ ಪೈಪೋಟಿಯ ನಡುವೆಯೂ ಸ್ಥಾನ ಪಡೆದು ಮಿಂಚುತ್ತಿದ್ದ ಸುನೀಲ್, 15 ಟೆಸ್ಟ್‌ಗಳಲ್ಲಿ ಆಡಿದರು. 69 ಏಕದಿನ ಪಂದ್ಯಗಳಲ್ಲಿಯೂ ಮಿಂಚಿದರು. 2001ರ ನಂತರ ಅವರು ರಾಷ್ಟ್ರೀಯ ತಂಡದಲ್ಲಿ ಆಡಲಿಲ್ಲ. ನಂತರದ ಸುಮಾರು ಒಂದು ದಶಕ ಅವರು ಕರ್ನಾಟಕ ತಂಡದಲ್ಲಿ ಭದ್ರವಾಗಿ ಕಾಲೂರಿದರು.

ಪ್ರಥಮ ದರ್ಜೆ ಕ್ರಿಕೆಟ್ ನಿವೃತ್ತಿಯ ನಂತರ ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಓಮನ್, ಬಾಂಗ್ಲಾದೇಶ ಕ್ರಿಕೆಟ್‌ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದರು. ಟಿವಿಯಲ್ಲಿ ವೀಕ್ಷಕ ವಿವರಣೆಗಾರರಾಗಿಯೂ ಗುರುತಿಸಿಕೊಂಡರು.

ಇದೀಗ ತೀವ್ರ ಪೈಪೋಟಿಯನ್ನು ಗೆದ್ದು ಆಯ್ಕೆ ಸಮಿತಿಯ ಮುಖ್ಯಸ್ಥರ ಗದ್ದುಗೆ ಏರಿದ್ದಾರೆ. ಒಟ್ಟು 40 ಜನರು ಈ ಸ್ಥಾನಕ್ಕಾಗಿ ಅರ್ಜಿ ಹಾಕಿದ್ದರು.ಮಂಗಳವಾರ ಅದರಲ್ಲಿ ಆರು ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಲಾಗಿತ್ತು. ಅದರಲ್ಲಿದ್ದ ಹರವಿಂದರ್, ವೆಂಕಟೇಶಪ್ರಸಾದ್, ರಾಜೇಶ್ ಚೌಹಾಣ್ ಮತ್ತು ಎಲ್‌.ಎಸ್. ಶಿವರಾಮಕೃಷ್ಣನ್ ಅವರೊಂದಿಗಿನ ಪೈಪೋಟಿಯಲ್ಲಿ ಜೋಶಿ ಗೆದ್ದಿದ್ದಾರೆ. ಸಿಎಸಿಯ ಮನಗೆಲ್ಲುವಲ್ಲಿ ಸಫಲರಾಗಿದ್ದಾರೆ.

‘ಜೋಶಿಯವರ ನೇರ ನಡೆ ನುಡಿ ಇಷ್ಟವಾಯಿತು. ಅಲ್ಲದೇ ಕೋಚ್ ಆಗಿ ಅವರಿಗೆ ಅಪಾರ ಅನುಭವ ಇದೆ. ಅವರು ದಕ್ಷಿಣ ವಲಯದ ಪ್ರತಿನಿಧಿಯಾಗಿದ್ದಾರೆ’ ಎಂದು ಆಯ್ಕೆ ಪ್ರಕ್ರಿಯೆ ನಡೆಸಿದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯ ಮದನ್ ಲಾಲ್ ತಿಳಿಸಿದರು. ಈ ಸಮಿತಿಯಲ್ಲಿ ಅವರೊಂದಿಗೆ ಆರ್‌.ಪಿ. ಸಿಂಗ್ ಮತ್ತು ಸುಲಕ್ಷಣಾ ನಾಯಕ್ ಅವರಿದ್ದರು.

ಹರವಿಂದರ್ ಆಯ್ಕೆ
ಸುನೀಲ್ ಜೋಶಿ ಅವರಿಗೆ ನಿಕಟ ಪೈಪೋಟಿಯೊಡ್ಡಿದ ಹರವಿಂದರ್ ಸಿಂಗ್ ಅವರು ಕೇಂದ್ರಿಯ ವಲಯದಿಂದ ಸದಸ್ಯರಾಗಿ ನೇಮಕವಾಗಿದ್ದಾರೆ. ಈ ಹಿಂದೆ ಸದಸ್ಯರಾಗಿದ್ದ ಗಗನ್ ಖೋಡಾ ಅವರ ನಿರ್ಗಮನದಿಂದ ತೆರವಾಗಿರುವ ಸ್ಥಾನಕ್ಕೆ ಹರವಿಂದರ್ ಆಯ್ಕೆಯಾಗಿದ್ದಾರೆ.

ಜತಿನ್ ಪರಾಂಜಪೆ (ಪಶ್ಚಿಮ ವಲಯ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಶರಣದೀಪ್ ಸಿಂಗ್ (ಉತ್ತರ ವಲಯ) ಅವರು ಕೂಡ ಸಮಿತಿಯಲ್ಲಿ ಮುಂದುವರಿದಿದ್ದಾರೆ.

**
ರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡಕ್ಕೆ ಸುನೀಲ್ ಜೋಶಿ ಅವರನ್ನು ನೇಮಕ ಮಾಡುವಂತೆ ಸಿಎಸಿಯು ಶಿಫಾರಸು ಮಾಡಿದೆ.
–ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT