ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಸಮರ: ನೆರವಿಗೆ ಧಾವಿಸಿದ ಕ್ರೀಡಾ ಕಲಿಗಳು

ರೋಹಿತ್ ಶರ್ಮಾ ₹80 ಲಕ್ಷ; ಮಿಥಾಲಿ ರಾಜ್ ₹ 10ಲಕ್ಷ, ಸಾಯ್ ಉದ್ಯೋಗಿಗಳ ಮೂರು ದಿನದ ವೇತನ
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಮುಂಬೈ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಪರಿಹಾರ ನಿಧಿಗೆ ₹ 80 ಲಕ್ಷ ದೇಣಿಗೆ ನೀಡಿದ್ದಾರೆ.

ಅವರು ಈ ಹಣದಲ್ಲಿ ನಾಲ್ಕು ಖಾತೆಗಳಿಗೆ ಹಂಚಿದ್ದಾರೆ. ಪ್ರಧಾಮಂತ್ರಿಗಳ ನಿಧಿಗೆ ₹ 45 ಲಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿಧಿಗೆ ₹ 25 ಲಕ್ಷ, ಝೊಮ್ಯಾಟೊ ಫೀಡಿಂಗ್ ಇಂಡಿಯಾಗೆ ₹ 5 ಲಕ್ಷ ಮತ್ತು ಬೀದಿ ನಾಯಿಗಳ ನೆರವು ನಿಧಿಗೆ ₹ 5 ಲಕ್ಷ ನೀಡಿದ್ದಾರೆ.

‘ನಮ್ಮ ದೇಶವು ಮರಳಿ ತನ್ನ ಕಾಲ ಮೇಲೆ ನಿಲ್ಲಬೇಕು. ಅದನ್ನು ಸಮೃದ್ಧಗೊಳಿಸುವುದು ನಮ್ಮೆಲ್ಲರ ಹೊಣೆ. ಅದಕ್ಕಾಗಿ ಈ ಅಲ್ಪ ಕಾಣಿಕೆಯನ್ನು ನೀಡುತ್ತಿದ್ದೇನೆ’ ಎಂದು ಮೊತ್ತೆ ವಿವರಗಳನ್ನು ರೋಹಿತ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ದೇಣಿಗೆ ನೀಡಿರುವ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈಆನ, ಅಜಿಂಕ್ಯ ರಹಾನೆ ಅವರ ಸಾಲಿಗೆ ರೋಹಿತ್ ಕೂಡ ಸೇರ್ಪಡೆಯಾಗಿದ್ದಾರೆ.

ಮಿಥಾಲಿ,ಪೂನಂ, ದೀಪ್ತಿ ದೇಣಿಗೆ: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬೌಲರ್ ಪೂನಂ ಯಾದವ್ ಅವರು ಕ್ರಮವಾಗಿ ₹ 10 ಲಕ್ಷ ಮತ್ತು ₹ 2 ಲಕ್ಷ ನೀಡಿದ್ದಾರೆ. ಆಲ್‌ರೌಂಡರ್ ದೀಪ್ತಿ ಶರ್ಮಾ ಅವರೂ ₹1.5 ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ.

ಮಿಥಾಲಿ ರಾಜ್

ಮಿಥಾಲಿ ಅವರು ಪ್ರಧಾನಮಂತ್ರಿಗಳ ನಿಧಿಗೆ ₹ 5 ಲಕ್ಷ ಮತ್ತು ಅಷ್ಟೇ ಮೊತ್ತವನ್ನು ತೆಲಂಗಾಣ ಮುಖ್ಯಮಂತ್ರಿ ನಿಧಿಗೆ ಕೊಟ್ಟಿದ್ದಾರೆ. ಪೂನಂ ಕೂಡ ಪ್ರಧಾನಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ.

ಮೂರು ದಿನದ ವೇತನ ದಾನ: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದ ಉದ್ಯೋಗಿಗಳು ತಮ್ಮ ಮೂರು ದಿನದ ವೇತನವನ್ನು ಪಿ.ಎಂ. ಕೇರ್ಸ್ ನಿಧಿಗೆ ನೀಡಿದ್ದಾರೆ. ಒಟ್ಟು ₹76 ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ.

₹ 3 ಲಕ್ಷ ನೀಡಿದ ಚೋಪ್ರಾ: ಜಾವೆಲಿನ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಪರಿಹಾರ ನಿಧಿಗೆ ಮೂರು ಲಕ್ಷ ರೂಪಾಯಿ ನೀಡಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಅವರು ಕೇಂದ್ರ ಸರ್ಕಾರ ಪಿ.ಎಂ. ಕೇರ್ಸ್‌ ನಿಧಿಗೆ ಎರಡು ಲಕ್ಷ ರೂ್ಪಾಯಿ ಮತ್ತು ಹರಿಯಾಣ ಮುಖ್ಯಮಂತ್ರಿಗಳ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.

ಡಬ್ಲ್ಯುಎಫ್‌ಐನಿಂದ ₹ 11ಲಕ್ಷ: ಭಾರತ ಕುಸ್ತಿ ಸಂಸ್ಥೆಯು ₹ 11 ಲಕ್ಷ ದೇಣಿಗೆ ನೀಡಲಿದೆ ಎಂದು ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

ಟಿಟಿಎಫ್‌ಐನಿಂದ ₹ 5ಲಕ್ಷ: ಭಾರತ ಟೇಬಲ್ ಟೆನಿಸ್ ಫೆಡರೇಷನ್‌ ಮಂಗಳವಾರ ಐದು ಲಕ್ಷ ರೂಪಾಯಿಯನ್ನು ಪ್ರಧಾನಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

‘ನಮ್ಮ ಸಂಸ್ಥೆಗೆ ಸಾಮಾಜಿಕ ಹೊಣೆ ಇದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದ ಕೈಬಲಪಡಿಸುವುದು ನಮ್ಮ ಕರ್ತವ್ಯ. ಭಾರತ ಒಲಿಂಪಿಕ್‌ಸಂಸ್ಥೆ (ಐಒಸಿ)ಗೆ ಚೆಕ್ ಕಳಿಸಿಕೊಟ್ಟಿದ್ದೇವೆ. ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಐಒಸಿಯು ದೇಣಿಗೆ ನೀಡುವಂತೆ ಮನವಿ ಮಾಡಿತ್ತು’ ಟಿಟಿಎಫ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ನೆರವಿನ ಹಸ್ತ
ಬೆಂಗಳೂರು: ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೊವಿಡ್ –19 ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಆದರೆ ನೀಡಲಿರುವ ಮೊತ್ತವನ್ನು ಬಹಿರಂಗಪಡಿಸಿಲ್ಲ.

‘ಎಲ್ಲರೂ ಸೇರಿ ದಿಟ್ಟ ಹೋರಾಟ ಮಾಡಿ ಕೊರೊನಾವನ್ನು ಬೌಲ್‌ಔಟ್‌ ಮಾಡೋಣ. ನನ್ನ ಅಲ್ಪಕಾಣಿಕೆಯನ್ನು ನೆರವಿನ ನಿಧಿಗೆ ಕೊಡುತ್ತಿದ್ದೇನೆ’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT