ನವದೆಹಲಿ: ಲಡಾಖ್ನಲ್ಲಿ ನಡೆಯುತ್ತಿರುವ ಭಾರತ–ಚೀನಾ ಸಂಘರ್ಷದ ಕುರಿತು ‘ಕೆಟ್ಟ ಅಭಿರುಚಿ’ಯ ಮೂಡಿಸುವ ಸಂದೇಶವನ್ನು ಟ್ವೀಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು ತೋಟ್ಟಪಿಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
‘ಮಧು ಅವರು ತಮ್ಮ ವೈಯಕ್ತಿಕ ಖಾತೆಯಿಂದ ಮಾಡಿದ್ದ ಟ್ವೀಟ್ ಬಗ್ಗೆ ನಮಗೆ ಅರಿವು ಇರಲಿಲ್ಲ. ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ತಂಡದ ವೈದ್ಯ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಅವರ ಸಂದೇಶವು ಕೆಟ್ಟ ಅಭಿರುಚಿಯದ್ದಾಗಿತ್ತು ಎಂದು ತಿಳಿದುಬಂದಿದೆ. ಅದಕ್ಕಾಗಿ ಕ್ಷಮೆ ಕೋರುತ್ತೇವೆ’ ಎಂದು ಸಿಎಸ್ಕೆ ಪ್ರಕಟಣೆ ನೀಡಿದೆ.
ಮಂಗಳವಾರ ಲಡಾಖ್ ಸಮೀಪದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಬಂದವು. ಅದರ ನಂತರ ಟ್ವೀಟ್ ಮಾಡಿದ್ದ ಮಧು ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದರು ಎನ್ನಲಾಗಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಸಂದೇಶವನ್ನು ಅಳಿಸಿಹಾಕಿ, ಖಾತೆಯನ್ನು ರಕ್ಷಿಸಿಕೊಂಡಿದ್ದರು.
ಚೆನ್ನೈ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಗಡಿ ಭದ್ರತಾ ಪಡೆಯಲ್ಲಿ ಗೌರವ ಲೆಫ್ಟನೆಂಟ್ ಆಗಿದ್ದಾರೆ. ಹೋದ ವರ್ಷ ವಿಶ್ವಕಪ್ ಟೂರ್ನಿಯ ನಂತರ ಅವರು ಕೆಲವು ದಿನಗಳ ಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿ ಮರಳಿದ್ದರು.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ವೈದ್ಯ ಮಧು ಅವರು ಚೆನ್ನೈ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.