ಮೊಹಾಲಿ: ಅಫ್ಗಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರಿಬ್ಬರನ್ನು 'ಅಶಿಸ್ತಿನ' ಕಾರಣಕ್ಕೆ ಟಿ20 ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬುದು ಸುಳ್ಳು ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ಇವರಿಬ್ಬರ ವಿರುದ್ಧ ಬಿಸಿಸಿಐ ಶಿಸ್ತು ಕ್ರಮ ಕೈಗೊಂಡಿದೆ ಎಂಬ ವದಂತಿ ಹಬ್ಬಿತ್ತು.
ಇದನ್ನು ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಲ್ಲಗಳೆದಿದ್ದಾರೆ. ಖಂಡಿತವಾಗಿಯೂ ಇಲ್ಲ. ಇಶಾನ್ ಕಿಶನ್ ಆಯ್ಕೆಗೆ ಲಭ್ಯವಿರಲಿಲ್ಲ. ದಕ್ಷಿಣ ಆಫ್ರಿಕಾದ ಸರಣಿ ವೇಳೆಯೇ ವಿಶ್ರಾಂತಿಗಾಗಿ ವಿನಂತಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ ಬೆಂಬಲ ಸೂಚಿಸಿದ್ದೆವು ಎಂದು ದ್ರಾವಿಡ್ ಹೇಳಿದ್ದಾರೆ.
ಅದೇ ರೀತಿ ಶ್ರೇಯಸ್ ಅಯ್ಯರ್ ಅವರ ವಿರುದ್ಧವೂ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂಬ ವದಂತಿಯನ್ನು ದ್ರಾವಿಡ್ ನಿರಾಕರಿಸಿದ್ದಾರೆ. ತಂಡದಲ್ಲಿ ಅನೇಕ ಬ್ಯಾಟರ್ಗಳಿದ್ದಾರೆ. ದುರದೃಷ್ಟವಶಾತ್ ಅವಕಾಶ ವಂಚಿತರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲೂ ಆಡಿರಲಿಲ್ಲ. ಎಲ್ಲ ಆಟಗಾರರು ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟಕರ ಎಂದು ದ್ರಾವಿಡ್ ಹೇಳಿದ್ದಾರೆ.
ಶ್ರೇಯಸ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ತಮ್ಮ ತವರು ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.