ರಾಂಚಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಹಂಗಾಮಿ ಕಾರ್ಯದರ್ಶಿ ಹಾಗೂ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್ಸಿಎ) ಅಧ್ಯಕ್ಷ ಅಮಿತಾಭ್ ಚೌಧರಿ (58) ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದ ಚೌಧರಿ ಅವರು ಜಾರ್ಖಂಡ್ ಲೋಕ ಸೇವಾ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
‘ಅಮಿತಾಭ್ ಚೌಧರಿ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಅವರು ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಟ್ವೀಟ್ ಮಾಡಿದ್ದಾರೆ.
ರಾಂಚಿಯಲ್ಲಿ ಅತ್ಯುನ್ನತ ಕ್ರಿಕೆಟ್ ಕ್ರೀಡಾಂಗಣಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚೌಧರಿ, ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕಾರಣರಾಗಿದ್ದರು.
ಬಿಹಾರ ಕ್ರಿಕೆಟ್ ಸಂಸ್ಥೆಯನ್ನು ವಿಸರ್ಜಿಸಿದ ಬಿಸಿಸಿಐ, ಬಳಿಕ ಜಾರ್ಖಂಡ್ಗೆ ಪ್ರಥಮದರ್ಜೆ ಕ್ರಿಕೆಟ್ ಸ್ಥಾನಮಾನ ಕೊಡಿಸುವಲ್ಲಿಯೂ ಚೌಧರಿ ಪಾತ್ರ ಇತ್ತು. ಈ ಸ್ಥಾನ ಪಡೆದ ನಂತರ, ಮಹೇಂದ್ರ ಸಿಂಗ್ ಧೋನಿ ಬಿಹಾರದಿಂದ ವಲಸೆ ಬಂದು ವೃತ್ತಿಜೀವನದ ಕೊನೆಯವರೆಗೂಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸಿದರು.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಅಮಿತಾಭ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.