ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.
ಇದರೊಂದಿಗೆ ಸತತ ಎರಡನೇ ಸೋಲಿನ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಕನಸು ಬಹುತೇಕ ಅಸ್ತಮಿಸಿದೆ. ಈ ಮೊದಲು ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಹೀನಾಯ ಸೋಲಿಗೆ ಶರಣಾಗಿತ್ತು.
ಭಾರತ ಒಡ್ಡಿದ 111 ರನ್ ಗೆಲುವಿನ ಗುರಿಯನ್ನು 14.3 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ತಲುಪಿದ ನ್ಯೂಜಿಲೆಂಡ್ ಜಯಭೇರಿ ಮೊಳಗಿಸಿತು.
10 ಓವರ್ ಅಂತ್ಯಕ್ಕೆ ನ್ಯೂಜಿಲೆಂಡ್ ಒಂದು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಇದರೊಂದಿಗೆ ಭಾರತ ಸೋಲಿನ ಭೀತಿಗೊಳಗಾಗಿದೆ.
ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಮಾರ್ಟಿನ್ ಗಪ್ಟಿಲ್ (20) ವಿಕೆಟ್ ಜಸ್ಪ್ರೀತ್ ಬೂಮ್ರಾ ಕಬಳಿಸಿದರು.
ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿರುವ ಟೀಮ್ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಸಮರ್ಥವಾಗಿದೆ.
ಭಾರತದ ಬ್ಯಾಟರ್ಗಳು ಯಾವ ಹಂತದಲ್ಲೂ ಹೋರಾಟದ ಮನೋಭಾವವನ್ನು ತೋರಲೇ ಇಲ್ಲ. ಅಲ್ಲದೆ ಕಿವೀಸ್ ಬೌಲರ್ಗಳ ನಿಖರ ದಾಳಿಯ ಎದುರು ಪೆವಿಲಿಯನ್ ಪೆರೇಡ್ ನಡೆಸಿದರು.
ಕೊನೆಯ ಹಂತದಲ್ಲಿ ರವೀಂದ್ರ ಜಡೇಜ 26* ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇಶಾನ್ ಕಿಶನ್ (4), ಕೆ.ಎಲ್ ರಾಹುಲ್ (18), ರೋಹಿತ್ ಶರ್ಮಾ (14), ನಾಯಕ ವಿರಾಟ್ ಕೊಹ್ಲಿ (9), ರಿಷಭ್ ಪಂತ್ (12) ಹಾಗೂ ಹಾರ್ದಿಕ್ ಪಾಂಡ್ಯ (23) ನಿರಾಸೆ ಮೂಡಿಸಿದರು.
ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮೂರು ಹಾಗೂ ಇಶ್ ಸೋಧಿ ಎರಡು ವಿಕೆಟ್ ಕಬಳಿಸಿದರು.